Consumer Disputes Redressal Commission ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ ಇರ್ಫಾನ್ ಪಾಷ ಎಂಬುವವರು ಚೆನೈನ ಚೋಳ ಎಂಎಸ್ ಜನರಲ್ ಇನ್ಸೂರನ್ಸ್ ಕಂ.ಲಿ., ಮತ್ತು ಶಿವಮೊಗ್ಗದ ಚೋಳ ಎಂಎಸ್ ಜನರಲ್ ಇನ್ಸೂರನ್ಸ್ ಕಂ.ಲಿ., ಇವರುಗಳ ವಿರುದ್ದ ದ್ವಿಚಕ್ರ ವಾಹನದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ತಾವು ಖರೀದಿಸಿದ ಸುಜುಕಿ ಎಕ್ಸೆಸ್ ದ್ವಿಚಕ್ರ ವಾಹನಕ್ಕೆ ಎದುರುದಾರರಿಂದ ವಿಮೆಯನ್ನು ಮಾಡಿಸಿದ್ದು, 2024ರ ಅಕ್ಟೋಬರ್ನಲ್ಲಿ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶಿವಮೊಗ್ಗದ ಎದುರುದಾರರಿಗೆ ವಾಹನದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ವಿಮೆಯನ್ನು ಪಾವತಿಸಲು ಕೋರಿರುತ್ತಾರೆ.
ಆದರೆ ಎದುರುದಾರರು ಈ ಕುರಿತು ವಿಮೆ ಮೊತ್ತ ಪಾವತಿಸದಿರುವುದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.
Consumer Disputes Redressal Commission ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು, ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ವಾಹನದ ಐಡಿವಿ ಮೌಲ್ಯ ರೂ. 88,053/- ಗಳನ್ನು ಹಾಗೂ ರೂ. 10,000/-ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ವಾರ್ಷಿಕ ಶೇ. 9 ರ ಬಡ್ಡಿಯನ್ನು ಸೇರಿಸಿ, 2025 ಜನವರಿಯಿಂದ ಅನ್ವಯವಾಗುವಂತೆ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಡಿ.31 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.
