K.S. EShwarappa ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರು ಭಾರತೀಯ ಯುವಪೀಳಿಗೆಗೆ ಪ್ರೇರಣೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನವುಲೆಯ ಇಂದಿರಾಗಾಂಧಿ ಬಡಾವಣೆ ನಿವಾಸಿಗಳ ಸಂಘದಿಂದ ಆಯೋಜಿಸಿದ್ದ 8ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಧರನ್ನು ಸನ್ಮಾನಿಸುವುದು ನನಗೆ ಸಿಕ್ಕಿರುವ ಭಾಗ್ಯ. ಯುವಜನರು ದೇಶಕ್ಕಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರಭಕ್ತರ ಬಳಗದ ಯುವ ಮುಖಂಡ ಕೆ.ಇ.ಕಾಂತೇಶ್ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಬಡಾವಣೆಗಳ ಅಭಿವೃದ್ಧಿಗೆ ಸದಾ ಪ್ರಾಮಾಣಿಕವಾಗಿ ಶ್ರಮಿಸುವುದರ ಮುಖಾಂತರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್ ಮಾತನಾಡಿ, ಅತಿ ಹೆಚ್ಚು ಅನುದಾನ ತಂದಿರುವುದರಲ್ಲಿ ನಮ್ಮ ಬಡಾವಣೆ ಮುಂಚೂಣಿಯಲ್ಲಿದ್ದು, ಬಡಾವಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸಹ ಅದರ ಪರಿಹಾರಕ್ಕೆ ಸಾರ್ವಜನಿಕರ ಜೊತೆ ಕೈಜೋಡಿಸುತ್ತೇನೆ ಎಂದು ನುಡಿದರು.
K.S. EShwarappa ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡ ಚೇತನ್.ಕೆ ಮಾತನಾಡಿ, ಬಡಾವಣೆ ನಿವಾಸಿಗಳಲ್ಲಿ ಹೆಚ್ಚಿನವರು ಹಿರಿಯರೇ ಇದ್ದು, ಅವರು ಬಡಾವಣೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಅಭಿನಂದನೀಯ ಎಂದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧರಾದ ನಾಯ್ಕ್ ಪ್ರವೀಣ್ ಕುಮಾರ್ (ಇಎಂಇ ಭಾರತೀಯ ಸೇನೆ), ಕೃಷ್ಣಪ್ಪ ಡಿ (ಬಿಎಸ್ಎಫ್ ಸಿಗ್ನಲ್ ವಿಭಾಗ ಭಾರತೀಯ ಸೇನೆ), ಪಾಂಡುರಂಗ ಎಸ್.ಕೆ (ಸಿಆರ್ಪಿಎಫ್ ಭಾರತೀಯ ಸೇನೆ), ಶ್ರೀನಿವಾಸ್ (ಹವಾಲ್ದಾರ್, ಭಾರತೀಯ ಸೇನೆ), ರಂಗಪ್ಪ ಲಕ್ಕಜ್ಜೇರ (ಭೂ ಸೇನೆ ಕೊರಾಫ್ ಸಿಗ್ನಲ್ ವಿಭಾಗ ಭಾರತೀಯ ಸೇನೆ) ಅವರಿಗೆ ಗೌರವಿಸಲಾಯಿತು.
ಬಡಾವಣೆ ನಿವಾಸಿ ಸಂಘದ ಅಧ್ಯಕ್ಷ ಶಿವಪ್ಪ ಮಾತನಾಡಿ, ಸೈನಿಕರು ನಮ್ಮ ದೇಶದ ಆಸ್ತಿ. ಅವರನ್ನು ಗೌರವಿಸುವುದರಿಂದ ನಮ್ಮ ದೇಶಭಕ್ತಿಯನ್ನು ತೋರಿಸಿದಂತಾಗುತ್ತದೆ. ಪ್ರತಿಯೊಬ್ಬರಲ್ಲೂ ದೇಶಪ್ರೇಮ ಬೆಳೆಸಬೇಕು ಎಂದು ನುಡಿದರು. ಬಡಾವಣೆ ನಿವಾಸಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು
