Shimoga News ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳು ಸವಾಲಾಗಿ ಬಂದರೂ ಸ್ವಸಾಮರ್ಥ್ಯಕ್ಕೆ ಕುಂದುಂಟಾಗದಂತೆ ಬಳಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಕರೆಕೊಟ್ಟರು.
ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಏರ್ಪಾಡಾಗಿದ್ದ 56ನೇ ವಾರ್ಷಿಕ ಸಂಭ್ರಮದ ಎರಡನೇ ದಿನವಾದ ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಾರತವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಭರದಲ್ಲಿ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಅಲಕ್ಷಿಸಬಾರದು, ಭ್ರಷ್ಟಾಚಾರವು ನಮ್ಮ ದೇಶದಲ್ಲಿ ದೊಡ್ಡ ಆಂತರಿಕ ಶತ್ರುವಂತೆ ಕಾಡುತ್ತಿದ್ದು ಯುವ ಪೀಳಿಗೆಯು ಸಾಮಾಜಿಕ ಜೀವನದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಂಡಲ್ಲಿ ಇದನ್ನು ನಿವಾರಿಸಬಹುದು ಎಂದರು.
Shimoga News ಶೈಕ್ಷಣಿಕವಾಗಿ ಶಿಸ್ತು ಮತ್ತು ಶ್ರದ್ಧೆ, ಕೌಟುಂಬಿಕವಾಗಿ ಪ್ರೀತಿ ಮತ್ತು ವಾತ್ಸಲ್ಯ, ಸಾಮಾಜಿಕವಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆ ರೂಢಿಸಿಕೊಂಡಲ್ಲಿ ಸಾಧನೆಗಳು ಸುಲಭವಾಗುತ್ತದೆ. ರಾಜ್ಯದ ಸುಮಾರು 5000 ಪದವಿಪೂರ್ವ ಕಾಲೇಜುಗಳಿಂದ ವಾರ್ಷಿಕ ಆರೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಕೈಗೊಳ್ಳುತ್ತಿದ್ದು ಶಾಲಾ ಪರೀಕ್ಷೆಯಲ್ಲಿ ಪ್ರತಿಭೆ ತೋರಿಸುವುದರೊಂದಿಗೆ ಜೀವನ ಪರೀಕ್ಷೆಯಲ್ಲೂ ಸಫಲತೆ ಸಾಧಿಸಬೇಕು, ಐದು ಟ್ರಿಲಿಯನ್ ಡಾಲರ್ಗಳ ಆರ್ಥಿಕ ಶಕ್ತಿಯಾಗುವಲ್ಲಿ ದಾಪುಗಾಲಿಡುತ್ತಿರುವ ಭಾರತದ ಜಿಡಿಪಿಯು ಅಮೆರಿಕಾದ 2.2, ಚೀನಾದ 4.6 ನ್ನೂ ಮೀರಿ 7.00 ಸಮೀಪಿಸುತ್ತಿದೆ, ಭಾರತದಲ್ಲಿ ಹೂಡಿಕೆ ಮಾಡಲು ಬೇರೆ ಬೇರೆ ದೇಶಗಳು ಮುಂದಾಗುತ್ತಿವೆ, ಈ ಸಂದರ್ಭದಲ್ಲಿ ನಮ್ಮ ವಿದ್ಯಾವಂತರು ಉದ್ಯೋಗಕ್ಕಿಂತ ಉದ್ದಿಮೆಯ ಕಡೆ ಗಮನ ನೀಡಬೇಕು ಎಂದರಲ್ಲದೇ ಸಿದ್ದಗಂಗಾ ವಿದ್ಯಾ ಸಂಸ್ಥೆ ಶೈಕ್ಷಣಿಕ ಸಾಧನೆಯೊಂದಿಗೆ ಸಾಂಸ್ಕೃತಿಕ ಮೌಲ್ಯಗಳಿಗೂ ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಅಧ್ಯಕ್ಷತೆಯಲ್ಲಿ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜಾ ರವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸಕರುಗಳಾದ ಬಿ ಎಮ್ ವಿಜಯಕುಮಾರ್, ವನ್ನಂ ಸುಬ್ಬರಾವ್, ಸಂತೋಷ್ ಎಸ್ ಭಾಗವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸುಮಾರು 70 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾಂಸ್ಕೃತಿಕ ಪ್ರಸ್ತುತಿಗಳು ಸಹ ನೆರವೇರಿದವು. ರೇಖಾ ರಾಣಿ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಕು. ಜೀವಾಕ್ಷರಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ನೆರವೇರಿತು.
