Shimoga News ಕರ್ನಾಟಕ ಸಂಘ ಮತ್ತು ವಿಕಾಸರಂಗ ಸಂಯುಕ್ತವಾಗಿ ಕೀರ್ತಿಶೇಷ ಕೆ.ಸಿ.ಪ್ರಭಾಕರ್ ಸ್ಮರಣಾರ್ಥ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹೊಸನಗರ ಕ್ಷೇತ್ರದ ಏಳು ಚುನಾವಣೆಗಳಲ್ಲಿ ನಾನು ಸೋತಿದ್ದು, ಮೂರು ಚುನಾವಣೆಗಳಲ್ಲಿ ಗೆದ್ದು ಶಾಸಕನಾಗಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ನಮ್ಮ ಕಾರ್ಯಕ್ಕೆ ಕರ್ನಾಟಕ ಸಂಘ ಮತ್ತು ವಿಕಾಸ ರಂಗ ಸಂಸ್ಥೆಗಳು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನ ನೀಡಿದ್ದು ಕರ್ನಾಟಕ ಸಂಘ. ನಮ್ಮ ಜ್ಞಾನದಾಹವನ್ನು ತೀರಿಸಿ ಜ್ಞಾನಮಾರ್ಗಕ್ಕೆ ಕರೆದುಕೊಂಡು ಹೋದ ಕರ್ನಾಟಕ ಸಂಘ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರು ಮಾಡಿದ ವಿಕಾಸರಂಗ ಜಂಟಿಯಾಗಿ ಸನ್ಮಾನಿಸುತ್ತಿರುವುದು ನನ್ನ ಜೀವಮಾನದ ಪ್ರಮುಖ ಘಟನೆಯಾಗಿದೆ ಎಂದು ಹೇಳಿದರು.
ಹಿರಿಯ ವಕೀಲ ಬಿ.ಎನ್.ಕೃಷ್ಣಮೂರ್ತಿ, ವೈದ್ಯ ಡಾ. ಚಿಕ್ಕಸ್ವಾಮಿ ಮತ್ತು ಪ್ರೊ. ಎಸ್.ಪಂಚಾಕ್ಷರಿ ಅವರನ್ನು ಸನ್ಮಾನಿಸಲಾಯಿತು. ಬಿ.ಎನ್.ಕೃಷ್ಣಮೂರ್ತಿ ಮಾತನಾಡಿ, ವೃತ್ತಿಜೀವನದ ಆರಂಭದಲ್ಲಿ ಇದ್ದಂತಹ ಪರಿಸ್ಥಿತಿ ಈಗ ಸಮಾಜದಲ್ಲಿ ನೋಡಲು ಸಾಧ್ಯವಿಲ್ಲ. ತನ್ನನ್ನು ತಿದ್ದಿ ಒಬ್ಬ ವಕೀಲನನ್ನಾಗಿ ಮಾಡಿದ ಎಸ್.ನರಸಿಂಹಮೂರ್ತಿ ಅವರನ್ನು ಸದಾ ಸ್ಮರಿಸುತ್ತೇನೆ ಎಂದರು.
ಡಾ. ಚಿಕ್ಕಸ್ವಾಮಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ ತೃಪ್ತಿ ಇದೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಸರ್ಕಾರಿ ಸೇವೆಗೆ ರಾಜಿನಾಮೆ ನೀಡಿ ಖಾಸಗಿ ವೈದ್ಯನಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವುದು ಸಮಾಧಾನ ತಂದಿದೆ ಎಂದು ಹೇಳಿದರು.
Shimoga News ಪ್ರೊ. ಪಂಚಾಕ್ಷರಿ ಮಾತನಾಡಿ, ಕುವೆಂಪು ಅವರ ಆಶೀರ್ವಾದದಿಂದ ತಾನು ಮಾಡಿರುವ ಕೆಲಸಕ್ಕೆ ಇಂದು ಸನ್ಮಾನ ನೀಡುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರ್ನಾರಾಯಣ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆ.ಸಿ ಪ್ರಭಾಕರ್ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದ್ದೆ. ಅವರು ಬೆಳೆಸಿದ ಪ್ರತಿಭಾರಂಗ ಮತ್ತು ವಿಕಾಸರಂಗ ಸಹ ಅತ್ಯುತ್ತಮವಾಗಿ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ಗಮನಿಸಿದ್ದೇನೆ ಎಂದರು.
ವಿಕಾಸರಂಗದ ಅಧ್ಯಕ್ಷೆ ಹೆಚ್.ವಿಶಾಲಾಕ್ಷಿ ಮಾತನಾಡಿ, ವಿಕಾಸರಂಗ ಅನೇಕ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ಮಂಜುನಾಥ್ ಪ್ರಾರ್ಥಿಸಿದರು. ವಿಕಾಸರಂಗದ ಕಾರ್ಯದರ್ಶಿ ಎಸ್.ಎಸ್.ವಾಗೀಶ್ ಸ್ವಾಗತಿಸಿದರು. ಶಾಂತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎನ್.ಸುಂದರರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಾರ್ಷಲ್ ಶರಾಮ್, ರಾಘವೇಂದ್ರ ಹೊಸೂಡಿ, ಜಿ.ವಿಜಯಕುಮಾರ್ ಮತ್ತು ಪ್ರೊ. ಆಶಾಲತಾ ಇತರರಿದ್ದರು.
