Shimoga News ಶ್ರೀ ರೇಣುಕಾಂಬ ದೇವಿಯ ತಪ್ಪಲಿನಲ್ಲಿರುವ ಬಸ್ತಿಕೊಪ್ಪ ಗ್ರಾಮದ ಯುವಕರು ಇಚ್ಛಾಶಕ್ತಿಯಿಂದ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಸಾಮಾಜಿಕ ಸ್ವಸ್ಥದ ದೃಷ್ಟಿಯಿಂದ ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಹೇಳಿದರು.
ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಗ್ರಾಮದಲ್ಲಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಕ್ರಿಕೆಟ್ ಟೂರ್ನಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಯುವಕರಲ್ಲಿ ಸೂಕ್ತವಾಗಿರುವ ಪ್ರತಿಭೆಯನ್ನು ಹೊರ ಚಿಮ್ಮಿಸಲು ಇಂತಹ ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗಿದ್ದಾವೆ. ಯುವಕರು ಸಂಘಟಿತರಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯದ ಬೆಳವಣಿಗೆ ಸದೃಢವಾಗುತ್ತದೆ. ಎಂದ ಅವರು ಬಹಳಷ್ಟು ವರ್ಷಗಳ ಹಿಂದೆ ನಾನು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಸ್ತಿಕೊಪ್ಪ ಗ್ರಾಮದ ಜನರು ಅತೀ ಹೆಚ್ಚಿನ ಮತಗಳನ್ನು ನೀಡಿ ನನ್ನ ಗೆಲುವಿಗೆ ಪ್ರಮುಖ ಕಾರಣೀಭೂತರಾಗಿದ್ದಾರೆ. ಈ ಗ್ರಾಮದ ಜನರ ಪ್ರೀತಿ ಮತ್ತು ವಿಶ್ವಾಸ ದೊಡ್ಡದು, ಗ್ರಾಮದ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.
Shimoga News ಬಸ್ತಿಕೊಪ್ಪ ಗ್ರಾಮವು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಹಾಗೂ ಶಿಕ್ಷಣ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪನವರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಗ್ರಾಮವಾಗಿದೆ. ಗ್ರಾಮದ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಚಿವರಾದ ಮಧು ಬಂಗಾರಪ್ಪ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಈಗಾಗಲೇ ಗ್ರಾಮದ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಕತವಾಯಿ ಚಂದ್ರಪ್ಪ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಇಂತಹ ಪ್ರಯತ್ನಗಳು ನಿರಂತರ ನಡೆಯಲಿ ಎಂದು ಹಾರೈಸಿದರು. ಶಿಕ್ಷಣ ಸಚಿವರು ಗ್ರಾಮಕ್ಕೆ ಮಂಜೂರು ಮಾಡಿರುವ ಅನುದಾನದಿಂದ ಗ್ರಾಮವು ಪ್ರಗತಿ ಹೊಂದಲಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಪಿ ರತ್ನಾಕರ, ಸದಸ್ಯರಾದ ಲಕ್ಷ್ಮಿ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಚಂದ್ರಪ್ಪ ಕತವಾಯಿ ಮಾತನಾಡಿದರು. ಗ್ರಾಮದ ಹಿರಿಯರು, ಪ್ರಮುಖರು ಹಾಗೂ ಬಸ್ತಿಕೊಪ್ಪ ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
