S. N. Channabasappa ಶಿವಮೊಗ್ಗ ನಗರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿರುವ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸ್ತುತ ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಸಂಭ್ರಮ ಮನೆಮಾಡಿದೆ.
ಳಈ ಅಭೂತಪೂರ್ವ ಸಂಭ್ರಮದ ಅಂಗವಾಗಿ ಇಂದು ದಿನಾಂಕ 03.01.2026ರ ಶನಿವಾರ ಸಂಜೆ ಪವಿತ್ರ ತುಂಗಾ ನದಿಯ ಮಡಲಿನಲ್ಲಿ ಭವ್ಯ ‘ತೆಪ್ಪೋತ್ಸವ’ ಕಾರ್ಯಕ್ರಮ ಜರುಗಲಿದ್ದು, ನಗರದ ಸಮಸ್ತ ಭಕ್ತಾದಿಗಳು ಭಾಗವಹಿಸಬೇಕೆಂದು ಈ ಮೂಲಕ ಆಮಂತ್ರಿಸುತ್ತೇನೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ತಿಳಿಸಿದ್ದಾರೆ.
ಕೆಳದಿ ಅರಸರ ಕಾಲದಿಂದಲೂ ಐತಿಹಾಸಿಕ ಮಹತ್ವ ಪಡೆದಿರುವ ಹಳೆಯ ಶಿವಮೊಗ್ಗದ ಕೋಟೆ ಪ್ರದೇಶವು ಹಿಂದೂ ಸಂಸ್ಕೃತಿಗೆ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯವು ಭಕ್ತರ ಶ್ರದ್ಧಾಕೇಂದ್ರವಾಗಿದ್ದು, ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ದಕ್ಷಿಣಾಭಿಮುಖವಾಗಿ ಹರಿಯುವ ಪುಣ್ಯನದಿ ತುಂಗಾ ತೀರದಲ್ಲಿ ಈ ದೇವಾಲಯವು ಇರುವುದು ನಗರದ ಸೌಭಾಗ್ಯ. ಕಳೆದ 74 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ತೆಪ್ಪೋತ್ಸವವು, ಶಿವಮೊಗ್ಗದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.
S. N. Channabasappa ಸೂರ್ಯಾಸ್ತದ ಮನಮೋಹಕ ಹೊತ್ತಿನಲ್ಲಿ, ವಿದ್ಯುತ್ ದೀಪಗಳಿಂದ ಶೃಂಗರಿಸಲ್ಪಟ್ಟ ಭವ್ಯ ತೆಪ್ಪದಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳು ತುಂಗಾ ನದಿಯಲ್ಲಿ ವಿಹರಿಸುವ ದೃಶ್ಯ ಅತ್ಯಂತ ನಯನಮನೋಹರವಾಗಿರುತ್ತದೆ. ನದಿಯ ಅಲೆಗಳ ಮೇಲೆ ತೇಲಿಬರುವ ದೈವಿಕ ಕಳೆಯನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಭಕ್ತರು ತುಂಗಾ ತೀರಕ್ಕೆ ಆಗಮಿಸುತ್ತಾರೆ. ಪಟಾಕಿಗಳ ಸಂಭ್ರಮ, ಮಂತ್ರಘೋಷ ಹಾಗೂ ಭಕ್ತರ ಜೈಕಾರದ ನಡುವೆ ನಡೆಯುವ ಈ ಕಾರ್ಯಕ್ರಮವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶಿವಮೊಗ್ಗದ ಭಾವೈಕ್ಯತೆ ಮತ್ತು ಸಂಭ್ರಮದ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ನಗರದ ಇತಿಹಾಸ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.
