Shimoga News ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯಕರ ಸಂಘಟನೆಯಿಂದ ಮಾತ್ರ ಸಾಧ್ಯ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಸಮಾಜದ ಏಳ್ಗೆಗೆ ಅಣಿಯಾಗಬೇಕು ಎಂದು ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಹೇಳಿದರು.
ಅವರು ಮರಾಠ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೈಗೊಂಡಿದ್ದ ಶಿವಮೊಗ್ಗ ಜಿಲ್ಲಾ ಪ್ರವಾಸದ ಸಮಯದಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ, ಸಮಾಜದ ಮುಖಂಡರು ಪಕ್ಷಾತೀತವಾಗಿ ಒಂದಾದರೆ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಸದೃಢ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ. ಶಿವಾಜಿ ಮಹಾರಾಜರ ಕಾಲದಿಂದಲೂ ಭಿನ್ನಾಭಿಪ್ರಾಯ ಕೊನೆಯಾಗಿಲ್ಲ. ಎಲ್ಲ ಕಡೆ ಪ್ರವಾಸ ಮಾಡಿ ಒಗ್ಗಟ್ಟಿಗೆ ಶ್ರಮಿಸಲಾಗುವುದು ಎಂದರು.
ಜೀಜಾಬಾಯಿ ಸಮಾಜಕ್ಕೆ ಪುಣ್ಯ ಪುರುಷರನ್ನು ಕೊಡುಗೆ ನೀಡಿದ ಸ್ಮರಣೆಗಾಗಿ ಜೀಜಾ ಉಜ್ವಲ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಸಮಾಜದ ಪೂರ್ವಿಕರನ್ನು ಎಂದಿಗೂ ಮರೆಯಬಾರದು. ವಿಧಾನಸಭೆಗೆ ೪೦-೫೦ ಶಾಸಕರನ್ನು ಕೊಡುಗೆ ನೀಡುವಷ್ಟು ಮರಾಠರು ಸಬಲರಾಗಿದ್ದೇವೆ. ೩೬ ತಾಲೂಕುಗಳಲ್ಲಿ ನಮ್ಮ ಸಮಾಜದ ಮತಗಳೇ ನಿರ್ಣಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಕಾರಣಕ್ಕೂ ಸಮಾಜ ನಿರ್ಮಾಣದಲ್ಲಿ ರಾಜಕೀಯ ತಲೆದೋರಬಾರದು.
ಸಮಾಜಗಳಲ್ಲಿ ಭಿನ್ನಾಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ, ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ವೈಯಕ್ತಿಕ ಹಿತಾಸಕ್ತಿಗಳು ಸಮಾಜ ಒಡಕಿಗೆ ಕಾರಣವಾಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಜಿಲ್ಲಾಧ್ಯಕ್ಷ ಸಚಿನ್ ಸಿಂದ್ಯಾ ಮಾತನಾಡಿ, ಸಮಾಜಗಳು ಶೈಕ್ಷಣಿಕ ಸಾಮಾಜಿಕವಾಗಿ ಬೆಳವಣಿಗೆಯಾಗಬೇಕು. ಸರ್ಕಾರದ ಯೋಜನೆಯ ಫಲಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಬಲಾಡ್ಯರನ್ನಾಗಿಸಬೇಕಿದೆ. ಪ್ರತಿಮೆ ಸ್ಥಾಪನೆ ಹಾಗೂ ಭವನಗಳ ನಿರ್ಮಾಣದಿಂದ ಮಾತ್ರ ಸಮಾಜ ಬಲಶಾಲಿಯಾಗುತ್ತದೆ ಎಂಬ ಕಲ್ಪನೆ ತಪ್ಪು. ಅಧಿಕಾರ ಇದ್ದಾಗ ನಾಲ್ಕಾರು ಜನರಿಗೆ ಸಹಾಯ ಮಾಡುವುದನ್ನು ಮರೆಯಬಾರದು ಎಂದು ತಿಳಿಸಿದರು.
Shimoga News ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಅವರು ಶಿವಮೊಗ್ಗ ಜಿಲ್ಲಾಯಾದ್ಯಂತ ಪ್ರವಾಸ ಕೈಗೊಂಡು ಸಮಾಜದ ಮುಖಂಡರ ಸಭೆಗಳಲ್ಲಿ ಭಾಗವಹಿಸಿ ಸಮಾಜದ ಸಂಘಟನೆಯ ಬಗ್ಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.
ಮರಾಠ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸತೀಶ್ ಸಾವಂತ್, ಭದ್ರಾವತಿ ಅಧ್ಯಕ್ಷ ಲೋಕೇಶ ರಾವ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಕವಿತಾ ಥೋರತ್, ದಿನೇಶ್ ರಾವ್, ಚಂದ್ರರಾವ್ ಗಾರ್ಗೆ, ಗೀತಾ ಬಾಯಿ, ಬಾಳೋಜಿ ಕೃಷ್ಣಜಿ ರಾವ್, ಎಲ್.ಕೆ.ಚಂದ್ರಪ್ಪ, ಶಾಂತಕುಮಾರ್, ಭೀಮರಾವ್, ಹಾಲೋಜಿ ರಾವ್, ರಮೇಶ ರಾವ್, ಮೋಹನ ರಾವ್, ಸತ್ಯನಾರಾಯಣ, ಯಶವಂತರಾವ್ ಘೋರ್ಪಡೆ, ದೇವರಾಜ್ ಸಿಂಧೆ, ಮಲ್ಲೇಶಪ್ಪ, ಬಸವರಾಜ್, ಅಶೋಕ ರಾವ್, ಕಿರಣ ಮೋರೆ ಇತರರಿದ್ದರು.
