ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತರು ಸಡಗರ-ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ಮಕ್ಕಳು ಹೊಸ ಉಡುಪುಗಳು ತೊಟ್ಟು ಸಂಭ್ರಮಿಸಿದರೆ, ಮನೆಗಳಲ್ಲಿ ಕ್ರಿಸ್ಮಸ್ ಟ್ರೀ ರಚಿಸಿ ವಿದ್ಯುತ್ ದೀಪ ಮತ್ತು ವಿವಿಧ ಬಣ್ಣಗಳ ಹಾಳೆಗಳಿಂದ ಶೃಂಗರಿಸಿದ ದೃಶ್ಯ ಕಂಡುಬಂದಿತು.
ಪಟ್ಟಣದ ಹೊಸಪೇಟೆ ಬಡಾವಣೆಯ ಸಂತ ಸೆಬಾಸ್ಟಿಯನ್ ಚರ್ಚ್ನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿ, ಚರ್ಚ್ನ ಮುಂಭಾಗದಲ್ಲಿ ನಿರ್ಮಿಸಿದ ಏಸುವಿನ ಜನ್ಮವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೇಕ್ ಮತ್ತು ಸಿಸಿ ಹಂಚುವ ಮೂಲಕ ಸಂತಸ ಹಂಚಿಕೊಂಡರು
ಸಂತ ಸೆಬಾಸ್ಟಿಯನ್ ಚರ್ಚ್ನ ಧರ್ಮಗುರು ಫಾದರ್ ರಾಬರ್ಟ್ ಡಿ’ಮೆಲ್ಲೊ ಧರ್ಮ ಸಂದೇಶ ನೀಡಿ, ಕ್ರಿಸ್ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ. ಜಾತಿ-ಮತ ತಾರತಮ್ಯವಿಲ್ಲದೇ ಸುಖ ಶಾಂತಿಯಿಂದ ದೇಶೀಯ ಸಂಸ್ಕೃತಿಯಲ್ಲಿ ಬೆರೆತು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡುತ್ತದೆ. ಕ್ರಿಸ್ತಜಯಂತಿಯ ಮಹೋತ್ಸವವನ್ನು ಸಂತ ಸೆಬಾಸ್ಟಿಯಾನರ ದೇವಾಲಯದಲ್ಲಿ ನಡುರಾತ್ರಿಯಲ್ಲಿ ಸಾಂಭ್ರಮಿಕ ದಿವ್ಯ ಬಲಿಪೂಜೆಯಲ್ಲಿ ಆಚರಿಸಲಾಗಿದೆ. ಕ್ರಿಸ್ತಜಯಂತಿ ದೇವನ ಪ್ರೀತಿಯ ಹೃದಯದ ಒಂದು ಮಿಡಿತ. ಮನುಜನ ಮೇಲಿನ ಪ್ರೀತಿಯ ತುಡಿತ. ತನ್ನ ಮಗನನ್ನೇ ಜಗತ್ತಿಗೆ ಧಾರೆ ಎರೆದ ಅಪರಿಮಿತ ಪ್ರೀತಿ, ಕ್ರಿಸ್ತ ಜಯಂತಿ ಮಮಕಾರದ ಆಗರವಾಗಿರುವ ದೇವರ ಪ್ರೀತಿಯನ್ನು ಅನುಭವಿಸಿ ನಾನದರ ನೆರಳಾದಾಗ, ನಮ್ಮ ಹೃದಯ ಪ್ರೇಮದಿಂದ ಕ್ರಿಸ್ತನನ್ನು ನೀಡಲು ಮುಂದಾದಾಗ ನೈಜ ಕ್ರಿಸ್ತಜಯಂತಿಯ ಆಚರಣೆಯಾಗುತ್ತದೆ ಎಂದರು.
ಸೂರ್ಯ ಮುಳುಗಿ ಕತ್ತಲು ಜಗತ್ತನ್ನು ಆವರಿಸಿದಾಗ, ಕತ್ತಲು ಆವರಿಸಿದ್ದರೂ, ಕ್ರಿಸ್ಮಸ್ ನಡುರಾತ್ರಿಯಲ್ಲಿ ಬೆಳಕಿನ ಆಗಮನವಾಯಿತು. ಬೆಳಕಿನಲ್ಲಿ ನಡೆಯಲು, ಬೆಳಕಿನ ರಾಜ್ಯದ ಸದಸ್ಯರಾಗಲು ಕ್ರಿಸ್ತ ಜಯಂತಿ ಪ್ರೇರಣೆಯಾಯಿತು. ಚೈತನ್ಯದ ಸೆಲೆ ಮೂಡಿತು. ನಿಸ್ತೇಜ ಜೀವನಕ್ಕೆ ಜೀವದ ಸಂಚಾರವಾಯಿತು. ಪ್ರಭುಯೇಸು ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿಯಾಗಿ ಆಲಂಗಿಸಿ ಪ್ರೀತಿಯ ಸಿಂಚನವೆರೆದ ಹಬ್ಬ. ಕ್ರಿಸ್ಮಸ್ ನಮ್ಮ ಬದುಕಿನ ಬೆಳಕಿನ ಹಬ್ಬ ಎಂಬುವುದಾಗಿ ಸಾರಿದರು ಎಂದರು.
ಪಟ್ಟಣದ ಸಮಸ್ತ ಕ್ರೈಸ್ತ ಭಕ್ತಾದಿಗಳು, ಧಾರ್ಮಿಕ ಸಹೋದರಿಯರು ಬಲಿಪೂಜೆಯಲ್ಲಿ ಭಾಗಿಯಾಗಿ ಕ್ರಿಸ್ತಜಯಂತಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಬಲಿಪೂಜೆಯ ಬಳಿಕ ಶುಭಾಶಯ ವಿನಿಮಯ ಮತ್ತು ಕೇಕ್ ನೀಡಲಾಯಿತು.
ಆನವಟ್ಟಿಯ ಕ್ರಿಸ್ತುರಾಜ ಆಶ್ರಮ, ಇಂಡುವಳ್ಳಿಯ ಚರ್ಚ್ ಸೇರಿದಂತೆ ತಾಲೂಕಿನ ಎಲ್ಲಾ ಚರ್ಚ್ಗಳಲ್ಲೂ ವಿಶೇಷ ಪ್ರಾರ್ಥನೆಗಳು ಜರುಗಿದವು. ಕ್ರೈಸ್ತರ ಮನೆ ಮುಂಭಾಗದಲ್ಲಿ ಏಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತರು ಮಾತ್ರವಲ್ಲದೇ ಸರ್ವ ಧರ್ಮಿಯರು ಕ್ರಿಸ್ಮಸ್ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
