Yakshagana prasanga ನಮ್ಮ ಭಾರತ ಸನಾತನ ಸಂಸ್ಕೃತಿಯ ನೆಲೆವೀಡು. ಭಗವಂತ ತನ್ನಲ್ಲಿನ ನೂರಾರು ವಿಚಾರ- ಕಲೆ -ವಿಜ್ಞಾನ ಇತ್ಯಾದಿಗಳ ಪ್ರಕಟೀಕರಣಕ್ಕೆ ಭಾರತವನ್ನೇ ಆರಿಸಿಕೊಂಡಿದ್ದಾನೆ ಎಂಬುದು ನಿರ್ವಿವಾದ. ಭಗವಂತ ಕೊಟ್ಟ ಇಂತಹ ಅತ್ಯುಚ್ಚ ವರಗಳನ್ನು – ಸಂಗೀತ ,ಯಕ್ಷಗಾನ ,ಭರತನಾಟ್ಯ ಹಾಗೂ ನೃತ್ಯದ ವಿವಿಧ ಪ್ರಕಾರಗಳು, ಶಿಲ್ಪಕಲೆ, ವರ್ಣ ಚಿತ್ರಕಲೆ- ಇತ್ಯಾದಿಗಳನ್ನು ಯಥಾವತ್ತಾಗಿ ಹಾಗೂ ಹೆಚ್ಚು ಬೆಳೆಸುತ್ತಾ ಉಳಿಸಿಕೊಂಡು ಹೋಗುವುದು ನಮ್ಮದೇ ಜವಾಬ್ದಾರಿ. ಮಹರ್ಷಿ ವಾಲ್ಮೀಕಿ ಅವರ ಪ್ರಕಾರ ಒಂದು ರಾಷ್ಟ್ರ ರಾಮರಾಜ್ಯವಾಗಬೇಕಾದರೆ ರಾಜ- ಪ್ರಜೆ ಇಬ್ಬರದೂ ಸಮಾನ ಜವಾಬ್ದಾರಿ. ಇಲ್ಲಿ ನಾವು ರಾಜನನ್ನು ಒಳಗೊಳ್ಳದೆ ಪ್ರಜೆಗಳಿಂದಲೇ ಸಂಸ್ಕೃತಿಗಳನ್ನು ಉಳಿಸುವ ವಿಚಾರವನ್ನು ಅಷ್ಟೇ ಮಾತನಾಡುತ್ತಿದ್ದೇವೆ.
ಮಾನನೀಯ ಅಜಿತ ಕುಮಾರರ ಸ್ಮರಣಾರ್ಥವಾಗಿ ಈ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು. ಮಾನ್ಯರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಜೀವ ಪ್ರಚಾರಕರು. ಇವರು ಬಿಇ ಎಲೆಕ್ಟ್ರಿಕಲ್ ಮತ್ತು ಬಿಇ ಮೆಕ್ಯಾನಿಕಲ್ ಪದವಿಗಳಲ್ಲಿ ಸ್ವರ್ಣ ಪದಕ ವಿಜೇತರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಶಾರೀರಿಕ ಶಿಕ್ಷಣದಲ್ಲಿ ಇವರೊಬ್ಬ ಧೀಮಂತ ಎನ್ನಬಹುದು. ಯೋಗ ನಿಯುದ್ಧಗಳು ಸಂಘ ಶಿಕ್ಷಣದಲ್ಲಿ ಸಮಾವೇಶಗೊಂಡಿದ್ದು ಇವರ ಪ್ರಯತ್ನದಿಂದಲೇ. ಬೆಂಗಳೂರಿನಲ್ಲಿರುವ ಶಾರೀರಿಕ ಶಿಕ್ಷಾ ಕೇಂದ್ರ ಇವರ ಕಲ್ಪನೆಯ ಕೂಸು. ಈಗ ಇದು ರಾಷ್ಟ್ರೋತ್ಥಾನ ಯೋಗ ಮತ್ತು ರಿಸರ್ಚ್ ಸೆಂಟರ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅತ್ಯಂತ ಕಠಿಣ ಶಿಸ್ತು ಬದ್ಧ ವ್ಯಕ್ತಿತ್ವ ಇವರದು. ತಾವು ಪಾಲಿಸುವುದಲ್ಲದೆ ತನ್ನೊಡನಿರುವ ಎಲ್ಲರೂ ಇದನ್ನು ಪಾಲಿಸುವುದರ ಬಗೆಗೆ ಆಸಕ್ತರಾಗಿದ್ದರು. ಆದರೆ ಅಷ್ಟೇ ವಾತ್ಸಲ್ಯ ಪ್ರೀತಿ ತುಂಬಿದ ಬಾಹುಬಲಿಯಂತಹ ತೇಜಸ್ವಿ ವ್ಯಕ್ತಿತ್ವದವರು ಇವರು. ಒಮ್ಮೆ ಇವರೊಡನೆ ವ್ಯವಹರಿಸಿದವರು ಅವರನ್ನು ಅಭಿಮಾನಿಸದಿರಲು, ಗೌರವಿಸದಿರಲು ಕಾರಣವೇ ಇಲ್ಲ ಎನ್ನುವಂತಹ ತೇಜಸ್ಸು ಇವರದು. ಇದು ಅವರನ್ನು ಬಲ್ಲ ಬಹು ಮಂದಿಯ ಅಭಿಪ್ರಾಯ.
Yakshagana prasanga ದೇಶ ಸೇವೆಯ ಬಗೆಗೆ ಆಸಕ್ತಿಯುಳ್ಳ, ಒಂದಿಷ್ಟು ವರ್ಷಗಳನ್ನಾದರೂ ದೇಶಕ್ಕಾಗಿ ಮುಡುಪಾಗಿಡುವ ಆಸಕ್ತಿಯುಳ್ಳ ತರುಣ ತರುಣಿಯರಿಗಾಗಿ ಹಿಂದೂ ಸೇವಾ ಪ್ರತಿಷ್ಠಾನ ಎಂಬ ಪ್ರಕಲ್ಪ ಒಂದನ್ನು ಪ್ರಾರಂಭಿಸಿದವರಲ್ಲಿ ಇವರೂ ಒಬ್ಬರು. ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥರವರ ಬಳಿ, ಸಂಘದ ಹಿರಿಯರ ಬಳಿ ನಿರಂತರ ಚರ್ಚೆ ವಿಚಾರ ವಿನಿಮಯದ ನಂತರ ಪ್ರಾರಂಭವಾದ ಪ್ರಕಲ್ಪ ಇದು. ಈಗ ಇದರ ಅಡಿಯಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ ನೆಲೆ ಈ ಚಟುವಟಿಕೆಗಳಲ್ಲಿ ಒಂದು.
ಮೊದಲು ಚಿಂದಿ ಆಯುವ ಅನಾಥ ಗಂಡು, ಹೆಣ್ಣು ಮಕ್ಕಳ ಸಂಸ್ಕಾರ, ಆಹಾರ, ವಿದ್ಯಾಭ್ಯಾಸಗಳ ದೃಷ್ಟಿಯಿಂದ ಪ್ರಾರಂಭಗೊAಡ ಈ ನೆಲೆ ಪರಿಕಲ್ಪನೆ ಇಂದು ಆರ್ಥಿಕವಾಗಿ ಸಬಲರಲ್ಲದ , ಪೂರ್ಣ ಸಂಸ್ಕಾರಗಳನ್ನು ನೀಡಲು ಅಸಾಧ್ಯವಾದ ಕುಟುಂಬಗಳ ಮಕ್ಕಳು ಮತ್ತು ಏಕ ಪೋಷಕರಿರುವ ಮಕ್ಕಳು ಇತ್ಯಾದಿ, ಅವಶ್ಯಕತೆ ಇರುವ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಇದು ನೆಲೆ ಫೌಂಡೇಶನ್ ಎಂಬ ಒಂದು ಪ್ರಕಲ್ಪದಡಿ ಕಾರ್ಯನಿರತವಾಗಿದೆ. ಶಿವಮೊಗ್ಗದ ಮಾಧವನೆಲೆ ಇಂದು ಹೆಣ್ಣು ಮಕ್ಕಳ ಆಧಾರ ಸಂಸ್ಥೆಯಾಗಿದೆ. ಸುಮಾರು ೨೯ ಹೆಣ್ಣು ಮಕ್ಕಳು, ೬ನೇ ತರಗತಿಯಿಂದ ಪದವಿ ವಿದ್ಯಾಭ್ಯಾಸದವರೆಗೆ ಇಲ್ಲಿ ಆಶ್ರಯ ಪಡೆದು ಶಿಕ್ಷಣ ಮುಂದುವರೆಸುತ್ತಿದ್ದಾರೆ. ಸಂಸ್ಕಾರ, ವಿದ್ಯಾಭ್ಯಾಸ ಒಟ್ಟಿಗೆ ಇಲ್ಲಿ ಅವರಿಗೆ ದೊರೆಯುತ್ತಿದೆ.
ಸ್ವರ್ಗೀಯ ಅಜಿತ ಕುಮಾರರ ಪುಣ್ಯತಿಥಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ದಿನದ ನಿಮಿತ್ತವಾಗಿ ಡಿಸೆಂಬರ್ ೧೩ ಶನಿವಾರದಂದು ದ್ರುಪದ ಗರ್ವಭಂಗ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಇದು ನಾವು ಮೊದಲೇ ಹೇಳಿದ ಸಂಸ್ಕೃತಿಯ ಕಲೆಯ ಉಳಿವಿನ ವಿಚಾರದಲ್ಲಿ ಒಂದು ಭಾಗ.
ಮಾಧವ ನೆಲೆ ಮಕ್ಕಳಿಂದ ಪ್ರದರ್ಶಿಸಲಾದ ದ್ರುಪದ ಗರ್ವಭಂಗ ಯಕ್ಷಗಾನ ಪ್ರಸಂಗವು ಕೇವಲ ಒಂದು ಕಲಾ ಕಾರ್ಯಕ್ರಮವಾಗಿರದೆ, ಪೌರಾಣಿಕ ಮೌಲ್ಯಗಳು, ಮಾನವೀಯ ಭಾವನೆಗಳು ಮತ್ತು ಸಂಸ್ಕೃತಿಯ ಸೊಗಡನ್ನು ಒಂದೇ ವೇದಿಕೆಯಲ್ಲಿ ಜೀವಂತಗೊಳಿಸಿದ ಅಪರೂಪದ ಅನುಭವವಾಗಿತ್ತು. ಇನ್ನೂ ಕಲಿಕೆಯ ಹಂತದಲ್ಲಿರುವ ಪುಟ್ಟ ಮಕ್ಕಳಿಂದ ಇಂತಹ ಗಂಭೀರ ಪ್ರಸಂಗವನ್ನು ಈ ಮಟ್ಟದಲ್ಲಿ ರೂಪಿಸುವುದು ಸ್ವತಃ ಒಂದು ಸಾಧನೆಯೇ ಸರಿ.
ಪ್ರಸಂಗದ ಆರಂಭದಲ್ಲೇ ಭೀಷ್ಮರ ಸಮ್ಮುಖದಲ್ಲಿ ನಡೆಯುವ ದುರ್ಯೋಧನ ಮತ್ತು ಅರ್ಜುನರ ನಡುವಿನ ಜಗಳ ಪ್ರೇಕ್ಷಕರ ಗಮನ ಸೆಳೆಯಿತು. ಅಹಂಕಾರ, ಅಸೂಯೆ ಮತ್ತು ಶೌರ್ಯದ ಮಿಶ್ರ ಭಾವನೆಗಳು ಅವರ ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡವು. ಪರಸ್ಪರ ಒಬ್ಬರ ಬಗ್ಗೆ ಒಬ್ಬರು ಚಾಡಿ ಹೇಳಿಕೊಳ್ಳುವ ದೃಶ್ಯಗಳು ತಿಳಿ ಹಾಸ್ಯದ ಸ್ಪರ್ಶ ನೀಡಿದವು. ಭೀಷ್ಮರ ಗಾಂಭೀರ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮಕ್ಕಳ ನೈಜ ಅಭಿನಯದಿಂದ ಈ ಹಾಸ್ಯ ಇನ್ನಷ್ಟು ಮನಮೋಹಕವಾಗಿ ಮೂಡಿಬಂದಿತು. ಪ್ರೇಕ್ಷಕರು ನಗುತ್ತಲೇ ಕಥೆಯ ಗಂಭೀರತೆಗೆ ಪ್ರವೇಶಿಸಿದರು.
ಭೀಮನಿಗೆ ವಿಷದ ಲಡ್ಡು ತಿನಿಸುವ ಪ್ರಸಂಗ ಅತ್ಯಂತ ಭಾವನಾತ್ಮಕವಾಗಿತ್ತು. ಕುತಂತ್ರದ ಸಂಕೇತವಾಗಿ ಆ ದೃಶ್ಯ ಮಕ್ಕಳ ಮುಖಭಾವ, ದೇಹಚಲನೆ ಮತ್ತು ಸಂಭಾಷಣೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು. ಭೀಮನ ಸರಳತೆ, ಸಹೋದರರ ಮೇಲಿನ ನಂಬಿಕೆ ಮತ್ತು ಅದಕ್ಕೆ ಎದುರಾಗುವ ದ್ರೋಹ, ಜೊತೆಯಲ್ಲಿಯೇ ತಿಳಿಯಾದ ಹಾಸ್ಯ– ಈ ಎಲ್ಲ ಅಂಶಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿತು. ಪುಟ್ಟ ಮಕ್ಕಳು ಈಷ್ಟು ಗಾಢವಾದ ಭಾವನೆಗಳನ್ನು ವೇದಿಕೆಯಲ್ಲಿ ತೋರಿಸಿದುದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು.
ಗುರುಗಳ ಎದುರು ಅರ್ಜುನ ಮರದ ಮೇಲೆ ಕೃತಕ ಪಕ್ಷಿಯ ಕುತ್ತಿಗೆಗೆ ಬಾಣ ಬಿಡುವ ಪ್ರಸಂಗದಲ್ಲಿ ಏಕಾಗ್ರತೆ, ಶಿಸ್ತು ಮತ್ತು ಗುರಿ ಸಾಧನೆಯ ಮಹತ್ವ ಸುಂದರವಾಗಿ ಮೂಡಿಬಂದಿತು. “ಗುರಿಯೊಂದೇ ಕಣ್ಣಿಗೆ ಕಾಣಬೇಕು” ಎಂಬ ಸಂದೇಶವನ್ನು ಮಕ್ಕಳು ತಮ್ಮ ಅಭಿನಯದ ಮೂಲಕ ಜೀವಂತವಾಗಿ ತೋರಿಸಿದರು. ಈ ದೃಶ್ಯವು ಮಕ್ಕಳ ಮನಸ್ಸಿನಲ್ಲೂ, ಪ್ರೇಕ್ಷಕರ ಮನಸ್ಸಿನಲ್ಲೂ ಶಿಸ್ತು ಮತ್ತು ಸಂಕಲ್ಪದ ಮೌಲ್ಯವನ್ನು ಗಾಢವಾಗಿ ಬಿತ್ತಿತು.
ಏಕಲವ್ಯನ ಪ್ರಸಂಗವು ಕಾರ್ಯಕ್ರಮದ ಅತ್ಯಂತ ಸ್ಪರ್ಶಕ ಕ್ಷಣಗಳಲ್ಲಿ ಒಂದಾಗಿತ್ತು. ಗುರುಭಕ್ತಿಯ ಮಹತ್ವ, ತ್ಯಾಗದ ನೋವು ಮತ್ತು ಮೌನದೊಳಗಿನ ಘನತೆ – ಈ ಎಲ್ಲವೂ ಪುಟ್ಟ ಕಲಾವಿದೆ ಅಭಿನಯದಲ್ಲಿ ಹೃದಯಸ್ಪರ್ಶಿಯಾಗಿ ವ್ಯಕ್ತವಾಯಿತು. ಆ ಕ್ಷಣಗಳಲ್ಲಿ ವೇದಿಕೆಯಲ್ಲಿ ನಿಶ್ಶಬ್ದ ಆವರಿಸಿತು; ಪ್ರೇಕ್ಷಕರ ಕಣ್ಣುಗಳಲ್ಲಿ ಸಹ ಭಾವನೆಯ ನೆರಳು ಕಾಣಿಸಿಕೊಂಡಿತು.
ಪ್ರಸAಗದ ಶಿಖರವಾಗಿ ದ್ರುಪದನ ಗರ್ವ ಮುರಿಯುವ ದೃಶ್ಯ ಮೂಡಿಬಂತು. ಅಧಿಕಾರ, ಅಹಂಕಾರ ಮತ್ತು ಸ್ವಯಂಪ್ರಶAಸೆಯ ಅಂತ್ಯ ಹೇಗೆ ಆಗುತ್ತದೆ ಎಂಬುದನ್ನು ಈ ಪ್ರಸಂಗ ಸ್ಪಷ್ಟವಾಗಿ ಸಾರಿತು. ಧರ್ಮದ ಎದುರು ಗರ್ವ ಶಾಶ್ವತವಾಗಿರಲಾರದು ಎಂಬ ಸಂದೇಶವನ್ನು ಮಕ್ಕಳು ತಮ್ಮ ಪಾತ್ರನಿಷ್ಠ ಅಭಿನಯದ ಮೂಲಕ ಮನಮುಟ್ಟುವಂತೆ ತಲುಪಿಸಿದರು.
ಇನ್ನೂ ಕಲಿಯುತ್ತಿರುವ ಹಂತದಲ್ಲಿರುವ ಮಕ್ಕಳು ಆದರೂ, ಅವರ ಆತ್ಮವಿಶ್ವಾಸ, ವೇಷಭೂಷಣದ ಶಿಸ್ತು, ಹಾವಭಾವಗಳ ನಿಖರತೆ ಮತ್ತು ಯಕ್ಷಗಾನದ ಪರಂಪರಾತ್ಮಕ ಶೈಲಿಗೆ ತೋರಿದ ಗೌರವ ಎಲ್ಲರಿಗೂ ಮೆಚ್ಚುಗೆ ತಂದಿತು. ಕೆಲವೆಡೆ ಅಜಾಗರೂಕತೆ ಇದ್ದರೂ, ಅದರಲ್ಲಿ ಸಹ ಮಕ್ಕಳ ನಿಸ್ವಾರ್ಥ ಪ್ರಯತ್ನ ಮತ್ತು ಕಲಿಯುವ ಹಂಬಲವೇ ಹೆಚ್ಚು ಹೊಳೆಯಿತು.
ಈ ಸಮಗ್ರ ಪ್ರದರ್ಶನದ ಸಿಂಹಪಾಲು ಐನಬ್ಯೆಲು ಪರಮೇಶ್ವರ್ ಹೆಗಡೆ ಅವರಿಗೆ ಸಲ್ಲಬೇಕು. ಮಕ್ಕಳೊಳಗಿನ ಪ್ರತಿಭೆಯನ್ನು ಗುರುತಿಸಿ, ಯಕ್ಷಗಾನದ ಸೂಕ್ಷ್ಮತೆಗಳನ್ನು ಸಹನಶೀಲತೆಯಿಂದ ಕಲಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಅವರ ಮಾರ್ಗದರ್ಶನ ಶ್ಲಾಘನೀಯ. ಕಲೆ ಮೇಲೆ ಅವರಿಗಿರುವ ನಿಷ್ಠೆ ಮತ್ತು ಮಕ್ಕಳ ಮೇಲಿನ ವಿಶ್ವಾಸವೇ ಈ ಯಶಸ್ವಿ ಪ್ರದರ್ಶನದ ಮೂಲವಾಗಿದೆ.
ಒಟ್ಟಾರೆ, ಮಾಧವ ನೆಲೆ ಮಕ್ಕಳಿಂದ ನಡೆದ ದ್ರುಪದ ಗರ್ವಭಂಗ ಯಕ್ಷಗಾನ ಪ್ರದರ್ಶನವು ಮನರಂಜನೆ, ಭಾವನೆ ಮತ್ತು ಮೌಲ್ಯಬೋಧನೆಗಳ ಸಮನ್ವಯದೊಂದಿಗೆ ಮೂಡಿಬಂದ ಒಂದು ಸ್ಮರಣೀಯ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು. ಇದು ಮಕ್ಕಳಲ್ಲಿ ಕಲೆಯ ಮೇಲಿನ ಪ್ರೀತಿ ಬೆಳೆಸುವುದರ ಜೊತೆಗೆ, ಪ್ರೇಕ್ಷಕರ ಮನಸ್ಸಿನಲ್ಲಿ ಸಂಸ್ಕೃತಿ ಮತ್ತು ಧರ್ಮದ ಮಹತ್ವವನ್ನು ಗಾಢವಾಗಿ ನೆನಪಿಸಿತು. ಕಾರ್ಯಕ್ರಮವನ್ನು ಸಭಿಕರು ಮುಖ್ಯವಾಗಿ ಆಸ್ವಾದಿಸಿದ್ದು ಗೋಚರಿಸಿತು.
ಯಕ್ಷಗಾನದ ಗಂಧವೇ ಇಲ್ಲದ, ಹೊಸದಾಗಿ ಕಲಿಯುತ್ತಿರುವ ಮಕ್ಕಳಿಂದ ಪ್ರದರ್ಶನಗೊಂಡ ಈ ಯಕ್ಷಗಾನ ಪ್ರಸಂಗ, ನಮ್ಮ ಸಂಸ್ಕೃತಿಯನ್ನು ನಾವು ಉಳಿಸಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಸಮಾಜದಲ್ಲಿ ಖಂಡಿತವಾಗಿ ಜಾಗೃತಗೊಳಿಸುತ್ತಿದೆ.
ನಾಗರತ್ನ ಪ್ರಸನ್ನ
