District Legal Services Authority ಶಿಕ್ಷಕರು ಮತ್ತು ವೈದ್ಯರು ಪ್ರತಿ ತಿಂಗಳು ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಮೂಲಕ ಮಕ್ಕಳಿಗೆ ಲೈಂಗಿಕ ಶಿಕ್ಷಣ, ಬಾಲ್ಯ ವಿವಾಹ ಹಾಗೂ ಪೋಕ್ಸೊ ವಿಚಾರಗಳ ಕುರಿತು ಅರಿವು ಮೂಡಿಸಬೇಕು ಎಂದು ಜಿ.ಪಂ ಸಿಇಓ ಹೇಮಂತ್.ಎನ್ ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಿಷನ್ ಸುರಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮತ್ತು ವೈದ್ಯರು ಮಿಷನ್ ಸುರಕ್ಷಾ ಕಾರ್ಯಾಗಾರದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಜಿಲ್ಲೆಯಲ್ಲಿ 146 ಪೋಕ್ಸೊ ಪ್ರಕರಣಗಳು ದಾಖಲಾಗಿದೆ. ಹಾಗೂ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ತಡೆಗಟ್ಟಲು, ಅಗತ್ಯವಾದ ತರಬೇತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಿದ್ದು, ಇದನ್ನು ಸಂಪೂರ್ಣವಾಗಿ ಶಿಕ್ಷಕರು ಬಳಕೆ ಮಾಡಿಕೊಂಡು ಶಾಲೆಯಲ್ಲಿ ಮಕ್ಕಳಿಗೆ ಕೂಡ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಇಂದಿನ ಮಕ್ಕಳಿಗೆ ಲೈಂಗಿಕ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಗೆ ಒಳಪಡಿಸುವುದು ಬಹು ಮುಖ್ಯವಾಗಿದೆ. ಶಾಲೆ, ಮನೆ ಹಾಗು ಸಮಾಜದಲ್ಲಾಗುವ ಅನೇಕ ಘಟನೆಗಳು ಅವರ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ತಪ್ಪು ದಾರಿಯನ್ನು ತುಳಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಶಿಕ್ಷಕರ ಹಾಗೂ ವೈದ್ಯರು ಪ್ರತಿ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ಅವರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು.
ಸಂಕುಚಿತ ಭಾವನೆ ತೆಗೆದು ಹಾಕುವುದು, ಶಿಕ್ಷಕರು ಮತ್ತು ವೈದ್ಯರು ಪ್ರತಿ ತಿಂಗಳು ಆಪ್ತ ಸಮಾಲೋಚನೆ ಮಾಡುವುದು ಹಾಗೂ ಬಾಲ್ಯ ವಿವಾಹದ ಮೇಲೆ ಏರಿರುವ ಮೂಡನಂಭಿಕೆ ಹೋಗಲಾಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು, ವೈದ್ಯರು ಕೆಲಸ ಮಾಡಬೇಕು. ಈ ಕುರಿತು ಕಾವಲು ಸಮಿತಿಯಲ್ಲಿ, ಗ್ರಾಮ ಪಂಚಾಯಿತಿಯ ಮಕ್ಕಳ ಸಭೆಯಲ್ಲಿ ಚರ್ಚೆಯಾಗಬೇಕು. ಶಿಕ್ಷಣ ಇಲಾಖೆ ಇದರ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಜಾಹೀರಾತು ಸಿದ್ದಪಡಿಸಿ ಜಾಗೃತಿ ಮೂಡಿಸಬೇಕು. ಇಂತಹ ಕೆಲಸಗಳು ನಿರಂತವಾಗಿ ನಡೆದರೆ ಮಾತ್ರ ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಮಾತನಾಡಿ, ನೈತಿಕವಾಗಿ ಮಕ್ಕಳು ಸದೃಢರಾಗಲು ತಂದೆ ತಾಯಿಯಂದಿರಷ್ಟೇ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಆದರೆ ಇತ್ತೀಚೆಗೆ ಮಕ್ಕಳ ಅಪರಾಧ ಪ್ರಕರಣದಲ್ಲಿ ಶಿಕ್ಷಕರುಗಳು ಎರಡನೇ ಆರೋಪಿಯಾಗಿ ಬದಲಾಗುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳ ಮೇಲೆ ಆಗುವ ದೌರ್ಜನ್ಯವನ್ನು ಶಿಕ್ಷಕರ ಬಳಿ ಬಂದು ಹೇಳಿದರೂ ಶಿಕ್ಷಕರು ಅದನ್ನು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಪೋಕ್ಸೋ ಸೆಕ್ಷನ್ 21 ರಡಿಯಲ್ಲಿ 2 ನೇ ಆರೋಪಿಯಾಗಿ ದಾಖಲಾಗುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಶಿಕ್ಷಕರು ಅರಿತುಕೊಳ್ಳಬೇಕು. ಇಂತಹ ವಿಚಾರ ಶಿಕ್ಷಕರ ಗಮನಕ್ಕೆ ಬಂದ ಕೂಡಲೇ 112 ಅಥವಾ ಮಕ್ಕಳ ಸಹಾಯವಾಣಿ 1098 ಗೆ ಸಂಪರ್ಕಿಸಿ ದೂರು ನೀಡಬೇಕು. ಮಕ್ಕಳಿಗೂ ಸಹ ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಮಕ್ಕಳ ಹೊಣೆಗಾರಿಕೆ ಶಿಕ್ಷಕರದಾಗಿದ್ದು, ಅವರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್, ಇತರೆ ವಿಷಯಗಳ ಬಗ್ಗೆ ತಿಳಿಸಬೇಕು. ಅಶ್ಲೀಲ ಪದಗಳ ಬಳಕೆ, ಖಾಸಗಿ ಅಂಗಗಳನ್ನು ಮುಟ್ಟುವುದು, ಖಾಸಗಿ ವಿಡಿಯೋ, ಫೋಟೋ ಹಂಚಿಕೆ ಮಾಡುವುದು ತಪ್ಪು. ಇಂತಹ ಅಪರಾಧ ಕೃತ್ಯ ಮಾಡಿದರೆ 67 ಬಿ ಐಐಟಿ ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂಬ ಕಾನೂನಿನ ಮಾಹಿತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
District Legal Services Authority ಡಾ.ವೀಣಾಭಟ್ ಉಪನ್ಯಾಸ ನೀಡಿ, ಸಮಾಜವು ಶಿಕ್ಷಿತವಾಗುತ್ತಿದ್ದರೂ ಬಾಲ ಗರ್ಭಿಣಿಯರ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಮಕ್ಕಳಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ವ್ಯಾಪಕವಾಗುತ್ತಿದೆ. ಇದರಿಂದಾಗಿ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಗಂಡು ಹೆಣ್ಣು ಅನ್ನದೇ ಎಲ್ಲಾ ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ನೈತಿಕ ಶಿಕ್ಷಣದ ಜೊತೆಗೆ ಲೈಂಗಿಕ ಶಿಕ್ಷಣವೂ ಮಕ್ಕಳಿಗೆ ಅವಶ್ಯಕವಾಗಿದೆ. ಬಾಲ್ಯ ವಿವಾಹ, ಪೋಕ್ಸೋ ಕೃತ್ಯಗಳ ಬಗ್ಗೆ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಹದಿಹರೆಯದಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಭಾವನ್ಮಾತಕ, ಸಾಮಾಜಿಕ ಹಾಗೂ ನೈತಿಕವಾಗಿ ಬದಲಾವಣೆ ಉಂಟಾಗಲಿದ್ದು, ಸರಿಯಾದ ಮಾರ್ಗದರ್ಶನ ಇಲ್ಲದಿದ್ದರೆ ಇದು ಅಸುರಕ್ಷಿತ ಲೈಂಗಿಕತೆಗೆ ಕಾರಣವಾಗಿ ಇದರಿಂದ ಗರ್ಭದಾರಣೆ, ಲೈಂಗಿಕ ಸೋಂಕು, ಹೆಚ್ಐವಿ/ಏಡ್ಸ್ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡಬಹುದು. ಇನ್ನೊಂದೆಡೆ ಜಾಗತೀಕರಣದಿಂದ ಉಂಟಾಗಿರುವ ಪ್ಲಾಸ್ಟಿಕ್ ಬಳಕೆಗಳು ಅದರಿಂದ ಬಿಡುಗಡೆಯಾಗುವ ರಾಸಾಯನಿಕ ಅಂಶಗಳು ಮಕ್ಕಳ ಶರೀರಕ್ಕೆ ಸೇರಿ ಹಾರ್ಮೋನ್ನಲ್ಲಿ ಏರುಪೇರಾಗುತ್ತಿದ್ದು, ಇದು ಮಕ್ಕಳ ದೇಹದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿರ್ಯಾ ಎಂ.ಎಸ್.ಸಂತೋಷ್, ಜಿ ಪಂ ಯೋಜಾನಾಧಿಕಾರಿ ನಂದಿನಿ, ಬಿಇಓ ರಮೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್, ತಾಲ್ಲೂಕು ಇಓ ಪರಮೇಶ್ವರಪ್ಪ, ವಿವಿಧ ತಾಲ್ಲೂಕಿನ ಶಿಕ್ಷಕರುಗಳು, ನೋಡಲ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
District Legal Services Authority ಮಕ್ಕಳಲ್ಲಿ ಲೈಂಗಿಕ ಅರಿವು,ಬಾಲ್ಯ ವಿವಾಹ, ಹಾಗೂ ಫೋಕ್ಸೋ ವಿಚಾರಗಳ ಅರಿವು ಮೂಡಿಸಬೇಕು- ಎನ್.ಹೇಮಂತ್
Date:
