ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ನಿವೃತ್ತ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
2022ರ ಜುಲೈ 1ರ ನಂತರ ಕರ್ನಾಟಕ ರಾಜ್ಯದಲ್ಲಿ ವಿಶ್ವವಿದ್ಯಾಲಯ, ಸರ್ಕಾರಿ ಪದವಿ ಕಾಲೇಜುಗಳು ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ 2,000 ಅಧ್ಯಾಪಕರಿಗೆ ಕರ್ನಾಟಕ ಸರ್ಕಾರವು 2025ರ ಜೂನ್ 30ರಂದು ಜಾರಿಗೊಳಿಸಿದ ಆದೇಶದಿಂದ 7ನೇ ವೇತನದ ಪಿಂಚಣಿ ಪರಿಷ್ಕರಣೆಯಿಂದ ಭಾರಿ ಆರ್ಥಿಕ ನಷ್ಟವಾಗಲಿದೆ.
ಸದರಿ ಅಧ್ಯಾಪಕರಿಗೆ ಈಗ ಪಡೆಯುತ್ತಿರುವ ಪಿಂಚಣಿಯಲ್ಲಿ ಪ್ರತಿ ತಿಂಗಳಿಗೆ 25.000 ರೂ.ನಿಂದ 30,000 ರೂ.ವರೆಗೆ ಕಡಿಮೆಯಾಗುತ್ತದೆ. ಈ ಅಧ್ಯಾಪಕರಿಗೆ ಈಗಾಗಲೇ 6ನೇ ವೇತನದ ಅಡಿಯಲ್ಲಿ ಪಿಂಚಣಿ ನಿಗದಿಯಾಗಿ ನಿವೃತಿ ವೇತನ ಪಡೆಯುತ್ತಿದ್ದಾರೆ. 7ನೇ ವೇತನದ ಅಡಿಯಲ್ಲಿ 30-06-2025ರ ಆದೇಶದಂತೆ ಅಧ್ಯಾಪಕರಿಗೆ ಅನ್ಯಾಯವಾಗಲಿದೆ.
ಹಿಂದೆ 4, 5 ಮತ್ತು 6ನೇ ವೇತನದ ಅಡಿಯಲ್ಲಿ ಯುಜಿಸಿ ವೇತನ ಶ್ರೇಣಿ ಪಡೆದು ನಿವೃತ್ತರಾದಾಗ ಕರ್ನಾಟಕ ಸರ್ಕಾರವು ಕರೆಕ್ಟಿವ್ ಫ್ಯಾಕ್ಟರ್ ಮೂಲಕ ನಿವೃತ್ತಿ ವೇತನ ನಿಗದಿಯಾಗುತ್ತಿತ್ತು. ಈ ಕಾರಣದಿಂದ ಯಾವ ಅಧ್ಯಾಪಕರಿಗೂ ಅನ್ಯಾಯವಾಗುತ್ತಿರಲಿಲ್ಲ. ಇಂದಿನ ಸರ್ಕಾರವು ಕರೆಕ್ಟಿವ್ ಫ್ಯಾಕ್ಟರ್ ಕೈ ಬಿಟ್ಟು 30-06-2025 ರಂದು ಸುಧೀರ್ಘ ಆದೇಶ ಜಾರಿ ಮಾಡಿರುತ್ತಾರೆ.
ಈ ಆದೇಶದಲ್ಲಿ ಎರಡು ಭಾಗಗಳಿದ್ದು ಭಾಗ ಒಂದರಲ್ಲಿ ಕೆಸಿಎಸ್ಆರ್ ನಿಯಮ 291 (ಜಿ) ಪ್ರಕಾರ ನಿವೃತ್ತಿ ವೇತನವನ್ನು ಪರಿಷ್ಕರಣೆ ಮಾಡಲಾಗುವುದು. ಇದರಿಂದ 01-07-2022ರ ನಂತರ ನಿವೃತ್ತರಾದ ಅಧ್ಯಾಪಕರಿಗೆ ನಿವೃತ್ತಿ ವೇತನದಲ್ಲಿ ಬಹಳ ನಷ್ಟವಾಗುತ್ತದೆ. ಕರ್ನಾಟಕ ಸರ್ಕಾರವು ಭಾಗ 02ರಲ್ಲಿ ಹಿರಿಯ ಅಧ್ಯಾಪಕರಿಗೆ ನಿವೃತ್ತಿ ವೇತನ ಕಡಿಮೆಯಾದಲ್ಲಿ ಸರಿಸಮಾನ ವೃಂದ ವೇತನ ಶ್ರೇಣಿ ಇತ್ಯಾದಿಗಳು 01-07-2022ಕ್ಕಿಂತ ಮೊದಲು ನಿವೃತ್ತರಾದ ಕಿರಿಯ ಅಧ್ಯಾಪಕರ ನಿವೃತ್ತಿ ವೇತನಕ್ಕೆ ಎತ್ತರಿಸುವುದು.
ಈ ಆದೇಶದ ಪ್ರಕಾರ ನಿವೃತ್ತ ಕಿರಿಯ ಅಧ್ಯಾಪಕರನ್ನು ಹುಡುಕುವುದು ನಿವೃತ್ತ ಹಿರಿಯ ಅಧ್ಯಾಪಕರಿಗೆ ದೊಡ್ಡ ಸವಾಲಾಗಿದೆ. ಇದರ ಜೊತೆಗೆ ಕಾಲೇಜು ಶಿಕ್ಷಣ ಇಲಾಖೆ, ವಿವಿಧ ಜಂಟಿ ನಿರ್ದೇಶಕರ ಕಚೇರಿಗಳಿಂದ ಸದರಿ ಅಧ್ಯಾಪಕರ ಪ್ರಸ್ತಾವನೆ ಕಳುಹಿಸಲು ದೊಡ್ಡ ಸವಾಲಾಗಿದೆ. ಸರ್ಕಾರವು ತನ್ನ ತಪ್ಪನ್ನು ತಿದ್ದಿಕೊಳ್ಳಲು ಸದರಿ ಆದೇಶದಲ್ಲಿ ಕಂಡಿಕೆ 13 ರ ಪ್ರಕಾರ ಈ ಅನ್ಯಾಯವನ್ನು ಸರಿಪಡಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿರುತ್ತಾರೆ.
ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಸದರಿ ಅಧ್ಯಾಪಕರಿಗೆ ನಿವೃತ್ತಿ ವೇತನ ಪಡೆಯುವುದು ಕನಸಿನ ಮಾತಾಗಿದೆ. ಕರ್ನಾಟಕ ಸರ್ಕಾರವು ಈ ವಿಷಯಕ್ಕೆ ಆದ್ಯತೆ ಕೊಟ್ಟು ಅನ್ಯಾಯವನ್ನು ಸರಿಪಡಿಸಬೇಕು ಎಂದು ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ನಿವೃತ್ತ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಬಿ.ಸಿ ಗೌಡರ್ ಶಿವಣ್ಣನವರ್, ಉಪಾಧ್ಯಕ್ಷ ಎಂ.ಚಂದ್ರಪ್ಪ, ಜಂಟಿ ಕಾರ್ಯದರ್ಶಿ ಧನಂಜಯ ಬಿ.ಆರ್. ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ
Date:
