Indian Medical Association ಜೀವನದಲ್ಲಿ ಗುರಿ ಸಾಧಿಸಲು ನಿರಂತರ ಪರಿಶ್ರಮ ವಹಿಸುವುದು ಅತ್ಯಂತ ಅವಶ್ಯಕ ಎಂದು ಮನೋವೈದ್ಯ ಡಾ. ಎಸ್.ಟಿ.ಅರವಿಂದ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆ ರಾಜ್ಯಾಧ್ಯಕ್ಷ ಡಾ. ವೀರಭದ್ರಯ್ಯ.ಟಿ.ಎ ಅವರ ಮುಂದಾಳತ್ವದಲ್ಲಿ ಶಿವಮೊಗ್ಗ ಘಟಕದಿಂದ ಗಾಡಿಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ “ಐಎಂಎ ನಡಿಗೆ, ಶಾಲೆಯ ಕಡೆಗೆ” ಕಾರ್ಯಕ್ರಮದಲ್ಲಿ ಹದಿಹರೆಯದ ವಯಸ್ಸಿನ ಮಾನಸಿಕ ತುಮುಲಗಳ ಬಗ್ಗೆ ಮಾತನಾಡಿದರು.
ವೃತ್ತಿಕ್ಷೇತ್ರದಲ್ಲಿ ಮುನ್ನಡೆಯುವಾಗ ಅನೇಕ ರೀತಿ ಸಮಯ ವ್ಯರ್ಥ ಆಗುವ ಆಕರ್ಷಣೆಗಳಿಗೆ ಒಳಗಾಗುತ್ತೇವೆ. ಚಂಚಲ ಮನಸ್ಥಿತಿ ಎದುರಿಸಬೇಕಾಗುತ್ತದೆ. ಸಮಯ ವ್ಯರ್ಥವಾಗುವ ಆಕರ್ಷಣೆಗಳಿಂದ ದೂರ ಇರಬೇಕು. ಕೋಪ ನಿಯಂತ್ರಣ ಸಾಧಿಸಬೇಕು. ಸಂಬಂಧಗಳ ನಿರ್ವಹಣೆ ಸರಿಯಾಗಿರಬೇಕು. ಮೊಬೈಲ್, ಇಂಟರ್ನೆಟ್ ಗೀಳಿನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಐಎಂಎ ಶಿವಮೊಗ್ಗ ಕಾರ್ಯದರ್ಶಿ, ಮನೋವೈದ್ಯೆ ಡಾ. ಕೆ ಎಸ್ ಶುಭ್ರತಾ ಅವರು ಹದಿಹರೆಯದ ಮಾನಸಿಕ ಆರೋಗ್ಯದ ಕುರಿತು ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಎದುರಿಸುವಂತಹ ಭಾವನಾತ್ಮಕ ಬದಲಾವಣೆಗಳು, ತನ್ನತನದ ಹುಡುಕಾಟ, ಸಮಾಜದ ಒತ್ತಡಗಳನ್ನ ಎದುರಿಸುವುದು, ಇವೆಲ್ಲದರ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ತಿಳಿಸಿದರು.
ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಮಾತನಾಡಿ, ಐಎಂಎ ನಡಿಗೆ, ಶಾಲೆಯ ಕಡೆಗೆ ಘೋಷವಾಕ್ಯದೊಂದಿಗೆ ವಿವಿಧ ಶಾಲೆಗಳಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಐಎಂಎ ಶಿವಮೊಗ್ಗ ಈಗಾಗಲೇ ಎರಡು ಸರ್ಕಾರಿ ಶಾಲೆಗಳಲ್ಲಿ ಆರೋಗ್ಯದ ಅರಿವು ಕಾರ್ಯಕ್ರಮ ನಡೆಸಿದೆ ಎಂದು ತಿಳಿಸಿದರು.
Indian Medical Association ಶಿವಮೊಗ್ಗ ನಗರದ ಯಾವುದೇ ಸರ್ಕಾರಿ ಶಾಲೆ ಅಥವಾ ಖಾಸಗಿ ಶಾಲೆಗಳಿಗೆ ನುರಿತ ವೈದ್ಯರಿಂದ ಅರಿವಿನ ಕಾರ್ಯಕ್ರಮಗಳ ಅಗತ್ಯ ಇದ್ದರೆ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಸದಾ ಸಿದ್ಧವಿದೆ ಎಂದರು.
ಗಾಡಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ಮತ್ತು ಇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬಿಳಕಿಯ ಬಸಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮುಖ್ಯೋಪಾಧ್ಯಾಯ ಕಿಶೋರ್ ಕುಮಾರ್ ಮತ್ತು ಇತರ ಉಪಾಧ್ಯಾಯರು ಉಪಸ್ಥಿತರಿದ್ದರು.
