ಪಶ್ಚಿಮಘಟ್ಟಗಳ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಯೋಜನೆಗೆ ಇನ್ನು ಮುಂದೆಯೂ ಅವಕಾಶ ನೀಡಿದಲ್ಲಿ ಸಕಲ ಜೀವಗಳಿಗೂ ಹಾನಿ ಕಟ್ಟಿಟ್ಟ ಬುತ್ತಿ. ಸರ್ಕಾರ ಹಠಕ್ಕೆ ಬಿದ್ದು ಕಾರವಾರ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವುದು ಅಪಾಯದ ಮುನ್ಸೂಚನೆ ಎಂಬ ಆತಂಕಗಳ ಚರ್ಚೆಯೊಂದಿಗೆ ಶರಾವತಿ ಪಂಪ್ಡ್ ಸ್ಟೋರೇಜ್ ಜಾರಿಗೆ ಪ್ರಬಲ ವಿರೋಧ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಪರಿಸರಾಸಕ್ತರ ದುಂಡುಮೇಜಿನ ಸಭೆಯಲ್ಲಿ ವ್ಯಕ್ತವಾಯಿತು.
ಮಾಜಿ ಶಾಸಕ, ಪರಿಸರ ಸಂಘಟನೆಯ ರಾಜ್ಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆಯ ವಿರೋಧವಾಗಿ ಮುಂದೆ ತೆಗೆದುಕೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಗಹನ ಮಾತುಕತೆ ನಡೆಯಿತು.
ಚಳುವಳಿಗಳ ಜೊತೆಯಲ್ಲಿಯೇ ಮುಖ್ಯಮಂತ್ರಿಗಳು, ಸಚಿವರು, ಶಾಸಕರುಗಳ ಜೊತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಎದುರಾಗುವ ದುಷ್ಪರಿಣಾಮಗಳ ಕುರಿತು ಮನವಿ ಸಹಿತ ಮುಕ್ತವಾಗಿ ಸಮಾಲೋಚನೆ ನಡೆಸಬೇಕು.
ಕಾನೂನು ಹೋರಾಟವೂ ಅನಿವಾರ್ಯವಾದರೆ ಪರಿಸರಾಸಕ್ತರು ದೆಹಲಿಯ ಹಸಿರು ಪೀಠದ ಮುಂದೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಪ್ರಕಾರ ವಾದ ಮಂಡಿಸಲು ಕಾನೂನು ಪರಿಣಿತರುಗಳ ತಂಡವನ್ನೇ ರಚಿಸಬೇಕು.
ಜನಪರ ಮತ್ತು ಪರಿಸರದ ಪರವಾಗಿ ಚಳುವಳಿಗಳು ಸಾಗರದಲ್ಲಿ, ಶಿವಮೊಗ್ಗದಲ್ಲಿ, ಬೆಂಗಳೂರಿನಲ್ಲಿ ಮತ್ತು ದೆಹಲಿಯ ಜಂತರ್ಮಂತರ್ನಲ್ಲಿಯೂ ಹಮ್ಮಿಕೊಳ್ಳಬೇಕು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಸ್ಥಳಿಯರು ಹೆಚ್ಚು ಆಸಕ್ತಿಯಿಂದ ಹೋರಾಟಕ್ಕೆ ಇಳಿಯುವಂತಾಗಬೇಕು. ಜನ ವಿರೋಧಿ ಮತ್ತು ಪರಿಸರ ವಿರೋಧಿ ಯೋಜನೆಯ ಕುರಿತು ವ್ಯಾಪಕ ಸುದ್ದಿ ಹರಡಬೇಕು ಮುಂತಾದ ಮುಂದಿನ ಕ್ರಮಗಳ ಬಗ್ಗೆ ಒಕ್ಕೊರಲ ದನಿ ಪ್ರಕಟವಾಯಿತು.
ಪಾಂಡೋಮಟ್ಟಿ ಮಠದ ಸ್ವಾಮಿಗಳು, ಹುಕ್ಕೇರಿ ನಡೆಸೋಷಿ ಮಠದ ನೀಜಲಿಂಗೇಶ್ವರ ಸ್ವಾಮಿಗಳು,
ಕಪ್ಪತಗುಡ್ಡ ನಂದಿವೇರಿಮಠದ ಸ್ವಾಮಿಗಳು,
ವಿಜ್ಞಾನಿ ಟಿ.ವಿ.ರಾಮಚಂದ್ರ, ಡಾ.ಪ್ರಕಾಶ್ ಕಮ್ಮರಡಿ,
ಡಾ.ರಾಮ ಕೃಷ್ಣಪ್ಪ, ವೆಂಕಟೇಶ್ ಹೆಚ್.ಎಂ., ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ಕವಿತಾ ದಾರವಾಡ, ಮಾಜಿ ಸಚಿವ ಹೆಚ್.ಹಾಲಪ್ಪ, ರೈತ ನಾಯಕ ಕೆ.ಟಿ.ಗಂಗಾಧರ, ಕರಿಬಸಪ್ಪಗೌಡ, ಸಂತೋಷ್ ಮೇಲುಕೋಟೆ, ಪಾರ್ವತಿ ಶಿವರಾಮ್, ಶ್ರೀಪಾದ ಬಿಚ್ಚುಗತ್ತಿ, ಶಿವಕುಮಾರ್ ಚಿಕ್ಕಮಗಳೂರು, ಮಂಜು ಬೆಳಗಾವ್, ಮಂಜುನಾಥ ಹಾವೇರಿ, ಕೆ.ಆರ್.ಮಂಜುನಾಥ್ ಶಿವಮೊಗ್ಗ, ಶೇಖರ್ಪಾಟಿಲ್, ರಮೇಶ್ ಶಿವಮೊಗ್ಗ, ರೈತ ಸಂಘದ ಸಂತೋಷ್ಕುಮಾರ್, ಜಯಶಂಕರ್ ಮಂಡ್ಯ, ಹಿತಕರ್ ಜೈನ್ ಸಾಗರ, ಜಯದೇವಮೂರ್ತಿ ಚಿತ್ರದುರ್ಗ, ಶಿವರಾಮೆಗೌಡ, ಶೈಲಜಾ, ಮುಂತಾದವರಿದ್ದರು.
ಈ ಸಭೆಯಲ್ಲಿ ವಿವಿಧ ಸ್ತರಗಳ ಕುರಿತು ಅಧ್ಯಯನಿಸುವ ತಜ್ಞರ, ರೈತ ಸಂಘಟಕರ, ನ್ಯಾಯಾಧೀಶರು, ಪರಿಸರ ಹೋರಾಟಗಾರರ, ವಿವಿಧ ಪ್ರಮುಖರುಗಳು ಉತ್ತಮ ಸಲಹೆಗಳನ್ನು ನೀಡಿರುವುದು ಮುಂದಿನ ಹೋರಾಟಗಳ ರೂಪುರೇಷೆಗಳಿಗೆ ಸಹಕಾರಿಯಾಗಲಿವೆ.
-ಎ.ಟಿ.ರಾಮಸ್ವಾಮಿ, ಮಾಜಿ ಶಾಸಕರು.
ಪಶ್ಚಿಮಘಟ್ಟಗಳ ಶರಾವತಿ, ಬೇಡ್ತಿ, ಅಘನಾಶಿನಿ, ವರದಾ, ಯೋಜನೆ, ನದಿ ತಿರುವು, ಇಲ್ಲಿನ ಸೂಕ್ಷ್ಮ ಪ್ರದೇಶಗಳಿಗೆ ಆಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿ ಹೋರಾಟ ತೀವ್ರಗೊಳಿಸುವ ಮೂಲಕ ವಿರೋಧಿಸಬೇಕು ಎಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶಿಸರ ಅವರು ಹೇಳಿದರು.
ಜನವಿರೋಧಿ ಮತ್ತು ಪರಿಸರ ವಿರೋಧಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು ವಿಶ್ರಾಂತ ನ್ಯಾಯಮೂರ್ತಿಗಳಾದ ಗೋಪಾಲಗೌಡರು ತಿಳಿಸಿದರು.
ನಮ್ಮ ಹೋರಾಟ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸ್ಥಗಿತಗೊಳಿಸುವ ತನಕ ಹೋರಾಟದಲ್ಲಿ ವಿಶ್ವಾಸವಿಟ್ಟು ಗಟ್ಟಿಯಾಗಿರಬೇಕು ಎಂದು ಭ್ರಷ್ಟಾಚಾರ ಮತ್ತು ಭೂಕಬಳಿಕೆಗಳ ವಿರುದ್ಧದ ಹೋರಾಟಗಾರರಾದ ಎಸ್.ಆರ್. ಹಿರೇಮಠ ಅವರು ತಿಳಿಸಿದರು.
