Friday, December 5, 2025
Friday, December 5, 2025

CM Siddaramaiah ಹೈದ್ರಾಬಾದ್ ಫಿಲಂ ಸಿಟಿಯ ಮಾದರಿಯಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ- ಸಿದ್ಧರಾಮಯ್ಯ.

Date:

CM Siddaramaiah ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆ ಹಾಗೂ‌ ಭಾಷೆಯ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿ ಹಾಗೂ ಸಬ್ಸಿಡಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸೋಮವಾರ(ನ.3) 2018 ಹಾಗೂ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಮೊದಲಿನಂತೆ ಮೌಲ್ಯಯುತ, ಸಾಮಾಜಿ ಕ‌ಳಕಳಿ ಇರುವ ಚಿತ್ರಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಸಿನಿಮಾ‌ ಪ್ರಭಾಶಾಲಿ‌ ಮಾಧ್ಯಮ. ಜನರು‌ ಹಾಗೂ ಸಮಾಜದ‌ಮೇಲೆ‌ ಪರಿಣಾಮ‌ ಬೀರುತ್ತವೆ. ಆದ್ದರಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗುವ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.

ಹಿಂದೆ ನಾಯಕ ನಟರು ಆದರ್ಶವಾಗಿದ್ದರು. ಜನರು ಅವರಂತೆ ಬದುಕು ರೂಪಿಸಿಕೊಳ್ಳುತ್ತಿದ್ದರು. ನಟರು ಪರದೆಯಲ್ಲಿ ಇರುವಂತೆಯೇ ನಿಜ ಜೀವನದಲ್ಲಿಯೂ ನಡೆದುಕೊಂಡರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗುತ್ತೀರಿ ಎಂದರು.

ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ:

CM Siddaramaiah ಸರಕಾರ‌ ಚಿತ್ರೋದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹಿಸಲು ಸಬ್ಸಿಡಿ ನೀಡಲಾಗುತ್ತಿದೆ. ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ ನೀಡಲು ಸರಕಾರ ಹಿಂದೇಟು ಹಾಕುವುದಿಲ್ಲ; ಆದರೆ ಸಬ್ಸಿಡಿಗಾಗಿ ಸಿನಿಮಾ ನಿರ್ಮಾಣ ಮಾಡದೇ ಸಮಾಜಮುಖಿ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಿವಿಮಾತು ಹೇಳಿದರು.

ಚಲನಚಿತ್ರಗಳ ಸಬ್ಸಿಡಿ ಪ್ರಕ್ರಿಯೆ ‌ನಿರಂತರವಾಗಿ ನಡೆಯುತ್ತಿದ್ದು, ಆಯಾ ವರ್ಷದಲ್ಲಿಯೇ ಸಬ್ಸಿಡಿ ನೀಡಲು ಕ್ರಮ ವಹಿಸಲಾಗುವುದು ಎಂದರು.

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ:

ಮೈಸೂರು ನಗರದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ 160 ಎಕರೆ ಪ್ರದೇಶವನ್ನು ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ಡಿಪಿಆರ್ ಪೂರ್ಣಗೊಳಿಸಿದ ಬಳಿಕ ಟೆಂಡರ್ ಕರೆದು ಪಿಪಿಪಿ ಮಾದರಿಯಲ್ಲಿ ಹೈದ್ರಾಬಾದ್ ಫಿಲಂ ಸಿಟಿಯಂತೆ ಮೈಸೂರಿನಲ್ಲಿ ಚಿತ್ರನಗರಿಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದರು.

ಮೈಸೂರು ಸಾಂಸ್ಕೃತಿಕ ನಗರ ಎಂದು ಕರೆಯಲಾಗುತ್ತದೆ. ನಗರದಲ್ಲಿ 2018 ಹಾಗೂ 2019ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಹಿಂದಿನ ಸರಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ 2018 ಹಾಗೂ 2019ರ ಪ್ರಶಸ್ತಿ ನೀಡಲಾಗುತ್ತಿದೆ.

ಕೆಲವೇ ದಿನಗಳಲ್ಲಿ 2021ನೇ ಸಾಲಿನ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಇನ್ನು ಮುಂದೆ ಈ ರೀತಿ ವಿಳಂಬವಾಗಲು ಅವಕಾಶ ನೀಡುವುದಿಲ್ಲ. ಆಯಾ ಸಾಲಿನಲ್ಲಿಯೇ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತೇವೆ.
ಐದಾರು ವರ್ಷ ವಿಳಂಬವಾಗಿ ಪ್ರಶಸ್ತಿ ನೀಡಿದರೆ ಅರ್ಥವಿರುವುದಿಲ್ಲ ಎಂದು ಹೇಳಿದರು.

ವಿದ್ಯಾರ್ಥಿಯಾಗಿದ್ದಾಗ ಪ್ರತಿದಿನ ಸಿನಿಮಾ ನೋಡುತ್ತಿದ್ದೆ ಎಂದು ಮೆಲುಕು ಹಾಕಿದ ಮುಖ್ಯಮಂತ್ರಿಗಳು, ಹಿಂದಿನ ಕಾಲದಲ್ಲಿ ನಟರು, ನಿರ್ದೇಶಕರು, ನಿರ್ಮಾಕರ ಸಂಖ್ಯೆ ಕಡಿಮೆ ಇತ್ತು. ವರ್ಷಕ್ಕೆ ಐದಾರು ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಈಗ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರ ಸಂಖ್ಯೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಯಾಗಿದ್ದಾಗ ಪ್ರತಿದಿನ ಸಿನಿಮಾ ನೋಡುತ್ತಿದ್ದೆ. ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದ ಸಿನಿಮಾ ನೋಡಲಾಗುತ್ತಿಲ್ಲ ಎಂದರು.

ಡಾ.ರಾಜಕುಮಾರ್ ಅವರು ಪರದೆಯಲ್ಲಿರುವಂತೆ ನಿಜ ಜೀವನದಲ್ಲಿಯೂ ಇರುತ್ತಿದ್ದರು. ಅವರು ನಟಿಸಿದ ಸಿನಿಮಾಗಳು ಸಮಾಜದ ಮೇಲೆ‌ ಅಗಾಧವಾದ ಪರಿಣಾಮ ಬೀರಿವೆ.
ಇದೇ ರೀತಿಯಲ್ಲಿ ಎಲ್ಲ ನಟ-ನಟಿಯರು, ಕಲಾವಿದರು ಬದುಕಬೇಕು. ಜನರಿಗೆ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.
2018 – 19 ನೇ ಸಾಲಿನ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಡಾ.ವಿಷ್ಣುವರ್ಧನ್ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಿಗೆ ಕೂಡ ಅಭಿನಂದನೆ ಸಲ್ಲಿಸಿದರು.

ಕನ್ನಡ ಚಿತ್ರರಂಗದಿಂದ‌ ಬಹುತ್ವ ರಕ್ಷಣೆ:

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು, ಕನ್ನಡ ಚಲನಚಿತ್ರ ರಂಗವು ಕೇವಲ ಮನರಂಜನೆಗೆ ಸೀಮಿತವಾಗಿರದೆ ಬಹುತ್ವದ ರಕ್ಷಣೆಗೆ ಪರಿಣಾಮಕಾರಿ ಕೊಡುಗೆ ನೀಡಿದೆ. ದಾರಿ ತಪ್ಪಿ ಹೋಗುತ್ತಿದ್ದ ಸಮಾಜವನ್ನು ಹಾಗೂ ಯುವಸಮುದಾಯದ ಮನಪರಿವರ್ತನೆಗೆ ಶ್ರಮಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಸಮುದ್ರವನ್ನು ಹೊರತುಪಡಿಸಿದರೆ ಸಿನಿಮಾ ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಅನುಕೂಲ ಮತ್ತು ಪರಿಸರವನ್ನು ಮೈಸೂರು ಹೊಂದಿದೆ.
ಅಂತರ್ ರಾಷ್ಟ್ರೀಯ ಮಟ್ಟದ ಚಲನಚಿತ್ರ ನಗರ(ಫಿಲಂ ಸಿಟಿ) ಡಿಪಿಆರ್ ಹಂತದಲ್ಲಿದೆ. ಅದು ಕಾರ್ಯಗತಗೊಂಡರೆ ಮೈಸೂರು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚಿತ್ರರಂಗವನ್ನು ಸೆಳೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಚಲನಚಿತ್ರ ರಂಗದ‌ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿರುತ್ತಾರೆ. ಅವರ ಅಧಿಕಾರವಧಿಯಲ್ಲಿಯೇ ಫಿಲಂ ಸಿಟಿ ಒಂದು ಹಂತಕ್ಕೆ ತರಲಾಗುವುದು ಎಂದರು.

ಡಾ.ರಾಜಕುಮಾರ್ ಕನ್ನಡ ಕ್ಷೇತ್ರ ಹಾಗೂ ಕಲಾರಂಗಕ್ಕೆ ನೀಡಿದ ಸೇವೆ ಅದ್ವಿತೀಯವಾದುದು ಎಂದು ಸ್ಮರಿಸಿದ ಸಚಿವ ಮಹದೇವಪ್ಪ, ಇನ್ನುಳಿದ ಸಾಲಿನ ಪ್ರಶಸ್ತಿಗಳ ಆಯ್ಕೆಗಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಆದಷ್ಟು ಬೇಗನೇ ಆ ಪ್ರಶಸ್ತಿಗಳನ್ನು ಕೂಡ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ನೂರಾರು ವರ್ಷಗಳಿಂದ ದಸರಾ ಆಚರಿಸಲಾಗುತ್ತಿದೆ. ಕಳೆದ ಬಾರಿಯ ದಸರಾ ಇತಿಹಾಸದಲ್ಲಿಯೇ ಅತ್ಯುತ್ತಮವಾದ ದಸರಾ ಎಂದು ಜನಮನ್ನಣೆ ಗಳಿಸಿತು. ಜಾತಿ-ಧರ್ಮ ಯಾವುದೇ ಇರಲಿ. ನಾವೆಲ್ಲರೂ ಭಾರತೀಯರು ಎಂಬುದನ್ನು ಸಾರಿತು ಎಂದು ಸಚಿವ ಎಚ್.ಸಿ.ಮಹದೇವಪ್ಪ ಅವರು ಅಭಿಮಾನ ವ್ಯಕ್ತಪಡಿಸಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು, ಕಾರಣಾಂತರಗಳಿಂದ ತಡವಾಗಿದ್ದ ಚಲನಚಿತ್ರ ಪ್ರಶಸ್ತಿಗಳ ವಿತರಣೆ ಸಮಾರಂಭಕ್ಕೆ ಮುಖ್ಯಮಂತ್ರಿಗಳ ಒತ್ತಾಸೆಯಿಂದ ಇದೀಗ ಮುಹೂರ್ತ ಕೂಡಿ ಬಂದಿದೆ ಎಂದರು.
ಕೋವಿಡ್, ನ್ಯಾಯಾಲಯ ಪ್ರಕರಣ ಮತ್ತಿತರ ಕಾರಣಗಳಿಂದ ಪ್ರಶಸ್ತಿ ಘೋಷಣೆಯು ವಿಳಂಬವಾಗಿತ್ತು. ಒಂದೇ ವರ್ಷದ ಅವಧಿಯಲ್ಲಿ ಏಳು ನೂರು ಚಿತ್ರಗಳನ್ನು ವೀಕ್ಷಿಸಿ ನಾಲ್ಕು ವರ್ಷಗಳ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದರು.
2018 ಹಾಗೂ 2019 ನೇ ಸಾಲಿನ ಪ್ರಶಸ್ತಿಗಳ ಆಯ್ಕೆಗಾಗಿ ವಿವಿಧ ಆಯ್ಕೆ ಸಮಿತಿಯ ಅಧ್ಯಕ್ಷರು, ಸದಸ್ಯರ ಅಹರ್ನಿಶಿ ಶ್ರಮದ ಫಲವಾಗಿ ಇಂದು ಅಭೂತಪೂರ್ವ ಸಮಾರಂಭ ನಡೆಯಲು ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.

ಸ್ಮರಣಸಂಚಿಕೆ‌ ಲೋಕಾಪರ್ಣೆ:

2018 ಹಾಗೂ 2019 ನೇ ಸಾಲಿನ ಪ್ರಶಸ್ತಿ ಪುರಸ್ಕೃತ ನಟರು, ನಟಿಯರು, ನಿರ್ದೇಶಕರು, ಸಂಭಾಷಣೆಕಾರರು, ಛಾಯಾಗ್ರಾಹಕರು, ಗೀತರಚನೆಕಾರರು, ಹಿನ್ನೆಲೆ ಗಾಯಕರು, ಕಲಾ ನಿರ್ದೇಶಕರು ಸೇರಿದಂತೆ ಎಲ್ಲ ಕಲಾವಿದರನ್ನು ಪರಿಚಯಿಸುವ ಸ್ಮರಣಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿದರು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರದ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್, ಶಾಸಕರಾದ ರವಿಶಂಕರ್, ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಶಿವಕುಮಾರ್ ಕೆ., ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್,ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಬಿ.ಕಾವೇರಿ, ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ನಟಿ ಉಮಾಶ್ರೀ, ನಟ-ನಿರ್ದೇಶಕರಾದ ರಿಷಬ್ ಶೆಟ್ಟಿ, ಹಂಸಲೇಖ, ರಾಜೇಂದ್ರ ಸಿಂಗ್ ಬಾಬು, ರಾಘವೇಂದ್ರ ರಾಜಕುಮಾರ್, ಡಾರ್ಲಿಂಗ್ ಕೃಷ್ಣ, ವಿ.ಹರಿಕೃಷ್ಣ, ಜೆ.ಕೆ.ಶ್ರೀನಿವಾಸ್ ಮೂರ್ತಿ,ಪಿ.ಶೇಷಾದ್ರಿ, ಬಿ.ಎಸ್.ಬಸವರಾಜ್, ರಿಚರ್ಡ್ ಕ್ಯಾಸ್ಟಲಿನೋ, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ದಿಗ್ಗಜರು, ನೂರಾರು ಕಲಾವಿದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...