Kannada Rajyotsava ಕರುನಾಡು ಕಂಡ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರ ಅಭಿಮಾನಿ ಮತ್ತು ಯುವ ಮುಖಂಡ ಮಂಜುನಾಥ್ ಕೆ.ಟಿ. ತುರುವೆಕೆರೆ ಹೇಳಿದರು.
ಸೊರಬ ಪಟ್ಟಣದ ಸೊಪ್ಪಿನ ಕೇರಿ ಬಡಾವಣೆಯಲ್ಲಿ ಶ್ರೀ ದುರ್ಗಾಂಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಹಮ್ಮಿಕೊಂಡ ಡಾ. ಪುನೀತ್ ರಾಜ್ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುನಿತ್ ರಾಜ್ಕುಮಾರ್ ಅವರು ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು ನೀಡಿದ್ದಾರೆ. ಜೊತೆಗೆ ವೃದ್ಧಾಶ್ರಮಗಳನ್ನು ಸ್ಥಾಪಿಸಿ ನೊಂದ ಹಿರಿಯ ಜೀವಗಳಿಗೆ ಆಶ್ರಯ ಕಲ್ಪಿಸಿದ್ದಾರೆ. ಅವರ ಸಾಮಾಜಿಕ ಸೇವೆ ಸಾರ್ವಕಾಲಿಕವಾದುದು. ಪುನಿತ್ ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ಸಾಮಾಜಿಕ ಕಳಕಳಿ ಇರುತ್ತಿತ್ತು. ಅವರು ಇಲ್ಲದೇ ನಾಲ್ಕು ವರ್ಷಗಳು ಕಳೆದಿವೆ.
ಆದರೆ, ಅವರ ನೆನಪು ಮತ್ತು ಪ್ರೀತಿ ಅಭಿಮಾನಿಗಳಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಸದಾ ಜನಮಾನಸದಲ್ಲಿ ಅಪ್ಪು ಅಜರಾಮರ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೆ. ಪಾಂಡುರಂಗ ಮಾತನಾಡಿ, ಪುನಿತ್ ರಾಜ್ಕುಮಾರ್ ನಮ್ಮನ್ನು ಅಗಲಿಲ್ಲ ಎನ್ನುವುದಕ್ಕೆ ಇಂದಿಗೂ ರಾಜ್ಯ ಹಾಗೂ ಇತರೆಡೆಯೂ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆಯನ್ನು ಆಚರಿಸುತ್ತಿರುವುದೇ ಸಾಕ್ಷಿಯಾಗಿದೆ.
ಅವರು ಸಮಾಜಮುಖಿ ಕಾರ್ಯಗಳನ್ನು ಎಲ್ಲಿಯೂ ಪ್ರಚಾರಕ್ಕೆ ಬಳಸಿಕೊಳ್ಳದೇ ಸಮಾಜಕ್ಕೆ ನೆರವಾದರು. ಇಂದಿಗೂ ಅವರು ಇದ್ದಾರೆ ಎಂಬುದು ಅಭಿಮಾನಿಗಳಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಸೇವೆ ಇಂದಿಗೂ ಪ್ರಸ್ತುತ. ನಗುವಿನ ಒಡೆಯ ಎಂದೇ ಖ್ಯಾತಿ ಪಡೆದ ಅವರ ಹೆಸರು ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.
Kannada Rajyotsava ಪಪಂ ಮಾಜಿ ಸದಸ್ಯ ಶ್ರೀಕಾಂತ್ ಶೇಟ್, ಶ್ರೀ ಭೂತೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ. ಕೆರಿಯಪ್ಪ, ಯುವ ಹೋರಾಟ ಸಮಿತಿಯ ಸುರೇಶ್ ಭಂಡಾರಿ, ಪ್ರಮುಖರಾದ ಪಿ. ಸುರೇಶ್, ಸಂತೋಷ ಸೊಪ್ಪಿನಕೇರಿ, ರಾಜು, ಗಣೇಶ, ಮೋಹನ್ ಭಾರ್ಕಿ, ಪ್ರವೀಣ್, ರಾಮಪ್ಪ ವಕೀಲ, ಮೋಹನ್ ಸೇರಿದಂತೆ ಇತರರಿದ್ದರು.
