Shivaganga Yoga Center ಸರಿಯಾದ ವಿದ್ಯೆ, ಸರಿಯಾದ ಜ್ಞಾನ, ಯೋಗ್ಯವಾದ ಮಾರ್ಗದರ್ಶನ ದಿಂದ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ. ಆದ್ದರಿಂದ ಸನ್ಮಾರ್ಗ, ಒಳ್ಳೆಯ ಚಿಂತನೆ ಮತ್ತು ಉತ್ತಮ ಕಾರ್ಯ ಇವುಗಳಿಂದ ಮನುಷ್ಯನಾದವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯ. ಇಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂತಹ ಒಂದು ಸತ್ಕಾರ್ಯ ನಡೆಯುತ್ತಿರುವುದಕ್ಕೆ ಕಾರಣ ಇಲ್ಲಿನ ಸದ್ಭಕ್ತರು ಮತ್ತು ಯೋಗ ಬಂಧುಗಳು ಎಂದು ವಿಹಂಗಮ ಯೋಗ ಸಂತ ಸಮಾಜ, ವಾರಣಾಸಿಯ ಸದ್ಗುರು ಸಂತ ವಿಜ್ಞಾನ ದೇವ್ ಜಿ ಮಹಾರಾಜ್ ತಿಳಿಸಿದ್ದಾರೆ. ಅವರು ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಮತ್ತು ಹೋಮ ಕಾರ್ಯ ಇವುಗಳಲ್ಲಿ ಪಾಲ್ಗೊಂಡು ಭಕ್ತರಿಗೆ ಯೋಗ ಧ್ಯಾನ ಮತ್ತು ಭಕ್ತಿಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಮಂದಿ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಮಾತನಾಡಿ ಶಿವಮೊಗ್ಗ ನಗರಕ್ಕೆ ಸದ್ಗುರುಗಳು ನಗರದ ಶಾಂತಿ ಮತ್ತು ಸಮೃದ್ಧಿಗೆ ಹರಸಬೇಕೆಂದು ಮನವಿ ಮಾಡಿದರು. ಶಿವಮೊಗ್ಗದ ಶಾಸಕ ಚನ್ನಬಸಪ್ಪನವರು ಅಧ್ಯಕ್ಷತೆ ವಹಿಸಿ ಇಂತಹ ಕಾರ್ಯಕ್ರಮಗಳು ನಗರದಲ್ಲಿ ಆಗಾಗ ನಡೆದರೆ ನಗರದಲ್ಲಿ ಸೌಹಾರ್ದತೆ ವಾತಾವರಣ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾರಂಭದಲ್ಲಿ ಶಶಿರೇಖಾ ಕೆಕೆ ಇವರಿಂದ ಪ್ರಾರ್ಥನೆ ಮತ್ತು ಜಿ ವಿಜಯ ಕುಮಾರ್ ಇವರಿಂದ ಸ್ವಾಗತ ನಡೆಯಿತು.
Shivaganga Yoga Center ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಸಾಹಿತಿ ಎಂ ಎನ್ ಸುಂದರ್ ರಾಜ್ ಮಾತನಾಡಿ ಶಿವಗಂಗಾ ಯೋಗ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವಾರಣಾಸಿಯಲ್ಲಿ ನವಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ 25 ಸಹಸ್ರ ಕುಂಡಗಳಲ್ಲಿ ನಡೆಯುವ ಹೋಮ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿದ್ದು ಗುರುಗಳು ಅದಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸ್ವರ್ವೇದ ಸಂದೇಶ ಯಾತ್ರೆಯನ್ನು ಕೈಗೊಂಡಿದ್ದಾರೆ ಇದರ ಅಂಗವಾಗಿ ಇಂದು ಶಿವಮೊಗ್ಗಕ್ಕೆ ಆಗಮಿಸಿ ಭಕ್ತರನ್ನು ಹರಸುತ್ತಿದ್ದಾರೆ, ಎಂದು ತಿಳಿಸಿದರು.
ಯೋಗಾಚಾರ್ಯ ಸಿವಿ ರುದ್ರಾರಾಧ್ಯ ಅವರು ಮಾತನಾಡಿ ಇಲ್ಲಿ ನಡೆಯುತ್ತಿರುವ ಈ ಜ್ಞಾನ ಮಹಾಯಜ್ಞ ತಮಗೆ ನೀಡಿದ ಒಂದು ಸದವಕಾಶ ಎಂದು ತಿಳಿಸಿದರು. ವೇದಿಕೆಯಲ್ಲಿ ಶ್ರೀಮತಿ ಸುಮಾ ಮತ್ತು ರಶ್ಮಿ ನಾಗರಾಜ್, ಸಂತ ಕಿಶನ್ ಲಾಲ್ ಜಿ, ಮುಕ್ತಿ ರಂಜನ್.. ಕಾಟನ್ ಜಗದೀಶ್. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧ್ಯಾನ ಪ್ರಾರ್ಥನೆ ಮತ್ತು ಭಜನಾ ಕಾರ್ಯಕ್ರಮಗಳು ನಡೆದವು. ಪಾಂಡುರಂಗ ಭಜನಾ ಮಂಡಳಿಯಿಂದ ಭಕ್ತಿಗೀತೆಗಳ ಗಾಯನ ನಡೆಯಿತು.
ಎರಡು ಕುಂಡಗಳಲ್ಲಿ ಹೋಮ ಹವನ ನಡೆದು ಎಲ್ಲ ಭಕ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸ್ವಂತ ವಿಜ್ಞಾನ ದೇವ್ ಜಿ ಮಹಾರಾಜ್ ಇವರಿಗೆ ರೇಷ್ಮೆ ಶಾಲು ಹೊಂದಿಸಿ ಬೃಹತ್ ಈಶ್ವರನ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.
ನ್ಯಾಮತಿ ಚನ್ನಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶ್ರೀ ಓಂಕಾರ ವಂದಿಸಿದರು.
ಆಗಮಿಸಿದ್ದ ಎಲ್ಲ ಭಕ್ತರಿಗೆ ಕೊನೆಯಲ್ಲಿ ಪ್ರಸಾದ ವಿನಿಯೋಗ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಭಕ್ತಿ ಪ್ರವಚನದಲ್ಲಿ ಮಿಂದು ಕೃತಾರ್ಥರಾದರು.
