Eshwara Khandre ಜ್ಞಾನ ಮತ್ತು ಜ್ಞಾಪಕಶಕ್ತಿಯ ಸಮ್ಮಿಲನವೇ ರಸಪ್ರಶ್ನೆ ಸ್ಪರ್ಧೆ. ಇದು ಬುದ್ಧಿ, ಭಾವಕ್ಕೆ ಕಸರತ್ತು ನೀಡುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ನಗರದ ಜಿಕೆವಿಕೆಯ ಸಭಾಂಗಣದಲ್ಲಿಂದು ಬೆಂಗಳೂರು ದೂರದರ್ಶನ ಚಂದನವಾಹಿಯಿಂದ ಪ್ರಸಾರವಾಗುವ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ 5000 ಸಂಚಿಕೆಯೊಂದಿಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರುತ್ತಿರುವ ಸಂದರ್ಭಕ್ಕೆ ಸಚಿವರು ಸಾಕ್ಷಿಯಾದರು.
ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಭಿಕರ ಅಮಿತೋತ್ಸಾಹದ ನಡುವೆ ಉತ್ಸಾಹಭರಿತರಾಗಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಮಾಹಿತಿ ಮತ್ತು ಮನೋರಂಜನೆ ನೀಡುವ ಈ ಕಾರ್ಯಕ್ರಮ ಕಳೆದ 23 ವರ್ಷಗಳಿಂದ ವೀಕ್ಷಕರ ಜ್ಞಾನದಾಹ ತಣಿಸುತ್ತಿದೆ ಎಂದರು.
ಬೆಂಗಳೂರು ದೂರದರ್ಶನ ಆರಂಭವಾದ 1980ರ ದಶಕದಿಂದಲೂ ತನ್ನ ಗಾಂಭೀರ್ಯತೆ, ವೃತ್ತಿ ನಿಷ್ಠೆ ಉಳಿಸಿಕೊಂಡಿದೆ. ವಿಚಾರಪೂರ್ಣ ಮಾಹಿತಿ, ಆರೋಗ್ಯಕರ ಮನರಂಜನೆಯನ್ನು ಉಚಿತವಾಗಿ ಸಮಸ್ತ ಜನತೆಗೆ ನೀಡುತ್ತಿದೆ. ಹಲವು ಪ್ರತಿಭೆಗಳ ಪ್ರಕಾಶಕ್ಕೆ ಅನುವು ಮಾಡಿಕೊಟ್ಟಿದೆ ಎಂದರು.
ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. 75 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದು ಅಚ್ಚರಿ ಎನಿಸಿತು. ಮಾಧ್ಯಮ ತಜ್ಞರಾದ ಡಾ. ನಾ. ಸೋಮೇಶ್ವರ್ ಅಭಿನಂದನಾರ್ಹರು ಎಂದರು.
ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿಯೂ ನಡೆಸಲಾಗಿತ್ತು. ಪ್ರಕೃತಿ, ಪರಿಸರ, ವನ್ಯಜೀವಿಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದಲೂ ಮಾಹಿತಿ ಆಹ್ವಾನಿಸಿ ಅದನ್ನು ತಿಳಿಯಪಡಿಸಲಾಗುತಿದೆ. ಒಟ್ಟಾರೆ ಥಟ್ ಅಂತ ಹೇಳಿ ಕಾರ್ಯಕ್ರಮ ಒಂದು ಜ್ಞಾನಭಂಡಾರ ಎಂದು ಈಶ್ವರ ಖಂಡ್ರೆ ಬಣ್ಣಿಸಿದರು.
Eshwara Khandre ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಭಿಕರಲ್ಲಿ ಆಸಕ್ತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಅಪಾರ ಜನ ಸಮೂಹದ ನಡುವೆ ಗಿನ್ನೆಸ್ ದಾಖಲೆಯ 5 ಸಾವಿರದ ಸ್ಮರಣೀಯ ಸಂಚಿಕೆಯನ್ನು ಚಿತ್ರೀಕರಿಸಲಾಯಿತು. ಸೋಮವಾರ [ಅ.13 ರಂದು] ಈ ಮೈಲಿಗಲ್ಲಿನ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಭಾಷಾ ವಿಜ್ಞಾನ, ನಾಡೋಜ ಪ್ರೊ. ಹಂಪಾ ನಾಗರಾಜಯ್ಯ, ಶಿಕ್ಷಣ ತಜ್ಞ ನಾಡೋಜ ವೊಡೇ ಪಿ ಕೃಷ್ಣ, ಕಲ್ಬುರ್ಗಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ್ ಉಡಿಕೇರಿ, ವಿದುಷಿ ರೇವತಿ ಕಾಮತ್, ದೂರದರ್ಶನ ಕೇಂದ್ರ ದಕ್ಷಿಣ ವಲಯದ ಉಪ ಮಹಾನಿರ್ದೇಶಕರಾದ ಭಾಗ್ಯವಾನ್, ಕಾರ್ಯಕ್ರಮದ ಉಸ್ತುವಾರಿ ಮತ್ತು ನಿರ್ವಹಣೆ ಜವಾಬ್ದಾರಿ ನಿಭಾಯಿಸುತ್ತಿರುವ ಎಚ್.ಎನ್. ಆರತಿ, ಥಟ್ ಅಂತ ಹೇಳಿ ಕಾರ್ಯಕ್ರಮದ ನಿರ್ಮಾಪಕರಾದ ಚಂದ್ರಕಲಾ, ಕಾರ್ಯಕ್ರಮ ನಿರೂಪಕರಾದ ಡಾ. ನಾ. ಸೋಮೇಶ್ವರ್ ಮೊದಲಾದವರು ಪಾಲ್ಗೊಂಡಿದ್ದರು.
