Valmiki Awardee 2025 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪ್ರತಿ ವರ್ಷ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.
ಪ್ರತಿ ವರ್ಷದಂದಂತೆ ಈ ವರ್ಷವೂ ಸಹ ರಂಗಭೂಮಿ, ಸಂಘಟನೆ, ಮಾಧ್ಯಮ, ಸಾಮಾಜಿಕ ಕ್ಷೇತ್ರ ಮತ್ತು ಸಮಾಜ ಸೇವೆಯಲ್ಲಿ ತಮ್ಮದೇ ಅದ ವಿಶಿಷ್ಟ ಸೇವೆ ಸಲ್ಲಿಸಿ ವಾಲ್ಮೀಕಿ ಸಮಾಜಕ್ಕೆ ತಮ್ಮ ಕೊಡಿಗೆಯನ್ನು ನೀಡಿರುವ ಅರ್ಹ ಸಾಧಕರನ್ನು ಗುರುತಿಸಿ ವಾಲ್ಮೀಕಿ ಪ್ರಶಸ್ತಿಯನ್ನು ಸರ್ಕಾರವು ಪ್ರಕಟಿಸಿದೆ.
2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಬೆಂಗಳೂರು ಕೇಂದ್ರ ದ ಮಾಧ್ಯಮ ಕ್ಷೇತ್ರದಿಂದ ಬೆಂಗಳೂರಿನ ನಾಗರಾಜು ಗಾಣದ ಹುಣಸೆ, ಬೆಂಗಳೂರು ವಿಭಾಗ ದಲ್ಲಿ ರಂಗಭೂಮಿ ಕ್ಷೇತ್ರದಿಂದ ಚಿತ್ರದುರ್ಗದ ಚಳ್ಳಕೆರೆಯ ಪಿ. ತಿಪ್ಪೇಸ್ವಾಮಿ, ಮೈಸೂರು ವಿಭಾಗ ದಲ್ಲಿ ಸಂಘಟನೆ ಕ್ಷೇತ್ರದಿಂದ ಕೊಡಗಿನ ವಿರಾಜಪೇಟೆಯ ಶ್ರೀಮತಿ ಜೆ.ಕೆ. ಮುತ್ತಮ್ಮ, ಬೆಳಗಾವಿ ವಿಭಾಗ ದಲ್ಲಿ ಸಮಾಜಸೇವೆ ಕ್ಷೇತ್ರದಿಂದ ವಿಜಯಪುರ ಟೌನ್ ನ ಮಳಸಿದ್ದ ಲಕ್ಷ್ಮಣ ನಾಯಕೋಡಿ ಮತ್ತು ಕಲಬುರಗಿ ವಿಭಾಗ ದಲ್ಲಿ ಸಾಮಾಜಿಕ ಕ್ಷೇತ್ರದಿಂದ ವಿಜಯನಗರ ಜಿಲ್ಲೆಯ+ ಹರಪನಹಳ್ಳಿ ಟೌನ್ ನ ಕೆ. ಉಚ್ಚಂಗಪ್ಪ ಅವರು ಭಾಜನರಾಗಿದ್ದಾರೆ
ರಾಜ್ಯದಲ್ಲಿ ಪ್ರತಿ ವರ್ಷ ಸೀಗೆಹುಣ್ಣಿಮೆ ದಿನದಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಡಾ: ಬಿ.ಆರ್. ಅಂಬೇಡ್ಕರ್, ಡಾ: ಬಾಬು ಜಗಜೀವನರಾಂ ಹಾಗೂ ಶ್ರೀ ಡಿ. ದೇವರಾಜು ಅರಸು ಇವರ ಸ್ಮರಣಾರ್ಥ ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುತ್ತಿರುವ ಮಾದರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪರಿಶಿಷ್ಟ ವರ್ಗದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
Valmiki Awardee 2025 ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಶೈಕ್ಷಣಿಕ ಸಾಮಾಜಿಕ, ಸಾಹಿತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಬೆಂಗಳೂರು, ಮೈಸೂರು. ಬೆಳಗಾವಿ, ಕಲಬುರಗಿ ಕಂದಾಯ ವಿಭಾಗಗಳು ಹಾಗೂ ಬೆಂಗಳೂರು ಕೇಂದ್ರ ಸ್ಥಾನದಿಂದ ತಲಾ ಒಬ್ಬರಂತೆ ಒಟ್ಟು ಐದು ಸಾಧಕರಿಗೆ ನಗದು ಮೊತ್ತ ಹಾಗೂ ಬಂಗಾರದ ಪದಕಗಳನ್ನು ನೀಡಿ ಗೌರವಿಸಲಾಗುವುದು.
2025-26ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಇವರ ಸ್ಮರಣಾರ್ಥ ನೀಡುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಡಾ.ಎ.ಬಿ ರಾಮಚಂದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.
ಸಮಿತಿಯು ಸಭೆಗಳನ್ನು ನಡೆಸಿ ಪ್ರಶಸ್ತಿಗಾಗಿ ಸ್ವೀಕರಿಸಲಾದ ಸುಮಾರು 133 ನಾಮನಿರ್ದೇಶನಗಳನ್ನು ಪರಿಶೀಲಿಸಿ ಅರ್ಹ ಸಾಧಕರನ್ನು ಗುರುತಿಸಿ ಗುರುತಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಸರ್ಕಾರವು ಸಮಿತಿಯ ಶಿಫಾರಸ್ಸನ್ನು ಒಪ್ಪಿ ಅರ್ಹರಿಗೆ ಪ್ರಶಸ್ತಿಯನ್ನು ಘೋಷಿಸಿರುತ್ತದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
