ವಿಶೇಷ ಲೇಖನ: ಸಿ.ಎನ್. ಮಲ್ಲೇಶ್.
ಭಾರತದ ಸಾಮಾಜಿಕ ರಾಷ್ಟ್ರೀಯ ಬದುಕಿನಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಇಂದಿಗೆ ಶತಮಾನೋತ್ಸವದ ಅಂಚಿಗೆ ತಲುಪಿದೆ. 1925ರಲ್ಲಿ ನಾಗಪುರದಲ್ಲಿ ಡಾ. ಕೆ.ಬಿ. ಹೆಡ್ಗೇವಾರ್ ಅವರ ನೇತೃತ್ವದಲ್ಲಿ ಕೆಲವೇ ಮಂದಿಯೊಂದಿಗೆ ಆರಂಭವಾದ ಈ ಸಂಘಟನೆ ಇಂದು ಕೋಟ್ಯಾಂತರ ಸೇವಾವಂತರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸ್ವಯಂಸೇವಾ ಶಕ್ತಿಯೆಂದು ಗುರುತಿಸಲ್ಪಟ್ಟಿದೆ.
RSS ಬೆಳವಣಿಗೆ ರಾಜಕೀಯಕ್ಕಿಂತ ಹೆಚ್ಚು ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಮಂತ್ರವನ್ನು ಅಳವಡಿಸಿಕೊಂಡದ್ದರಿಂದಲೇ ವಿಶಿಷ್ಟವಾಗಿದೆ. ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮೊದಲು ಧಾವಿಸಿ ನೆರವು ನೀಡುವುದು, ಗ್ರಾಮ ನಗರಗಳ ನಡುವೆ ಸೇತುವೆಯಾಗುವುದು, ಸಂಸ್ಕೃತಿ ಮೌಲ್ಯಗಳ ಸಂರಕ್ಷಣೆ, ಶಾಖೆಗಳ ಮೂಲಕ ಶಿಸ್ತಿನ ಜೀವನಶೈಲಿ ಬೆಳೆಸುವುದು ಇವು ಎಲ್ಲವೂ RSS ನ ಸಾಮಾಜಿಕ ಕೊಡುಗೆಗಳಾಗಿವೆ. ಹಿಂದುತ್ವದ ನಿಲುವುಗಳಿಂದ ದೇಶಪ್ರೇಮವನ್ನು ಉತ್ತೇಜಿಸಿ ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸುವ ಕೆಲಸವನ್ನು ಇದು ನಿರಂತರವಾಗಿ ಮಾಡಿದೆ. ಶಿಕ್ಷಣ, ಆರೋಗ್ಯ, ಗ್ರಾಮೋನ್ನತಿ ಸೇರಿದಂತೆ ಅನೇಕ ಸೇವಾ ಚಟುವಟಿಕೆಗಳ ಮೂಲಕ ದೇಶದ ಮೂಲಭೂತ ಅಭಿವೃದ್ಧಿಗೆ ಸಹಕಾರ ನೀಡಿದೆ.
RSS ವಿಶ್ವದಾದ್ಯಂತ ಭಾರತೀಯ ಸಮುದಾಯವಿರುವ ಕಡೆ ಸಂಬಂಧಿತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸೇವಾಭಾವ, ಶಿಸ್ತಿನ ಚಟುವಟಿಕೆ ಮತ್ತು ಸಂಸ್ಕೃತಿ ಸಂರಕ್ಷಣೆಗಳಿಂದ ಇದು ಇತರ ದೇಶಗಳಲ್ಲೂ ವಿಶೇಷ ಗೌರವ ಪಡೆದಿದೆ. RSS ನ ದಿನನಿತ್ಯದ ಶಾಖಾ ಕಾರ್ಯಕ್ರಮಗಳಲ್ಲಿ ದಂಡಾಯಾಮ, ಸಂಸ್ಕೃತಿ ಚರ್ಚೆಗಳು, ವ್ಯಕ್ತಿತ್ವ ನಿರ್ಮಾಣದ ಅಭ್ಯಾಸಗಳು ನಡೆಯುತ್ತವೆ. ಸಮಾಜ ಸೇವೆಯ ಭಾಗವಾಗಿ ದುರಂತ ಸಂದರ್ಭಗಳಲ್ಲಿ ನೆರವು, ಆರೋಗ್ಯ ಮತ್ತು ರಕ್ತದಾನ ಶಿಬಿರಗಳು, ಶಾಲಾ ಶಿಕ್ಷಣ ಕಾರ್ಯಗಳು, ಗ್ರಾಮೋನ್ನತಿ ಯೋಜನೆಗಳು ಕೈಗೊಳ್ಳಲ್ಪಡುತ್ತವೆ. ಹಬ್ಬ ಜಾತ್ರೆಗಳಿಂದ ಹಿಡಿದು ಕಲೆ, ಪುರಾಣ ದರ್ಶನ ಅಧ್ಯಯನಗಳವರೆಗೆ ಸಂಸ್ಕೃತಿ ಸಂರಕ್ಷಣೆ ಮುಖ್ಯ ಗುರಿಯಾಗಿದೆ. ಶಾಂತಿ ಸಭೆಗಳು, ಸಮಾಜ ಸಮರಸ್ಯ ಕಾರ್ಯಕ್ರಮಗಳು, ಏಕತೆ ಮತ್ತು ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸುವ ಕಾರ್ಯಗಳು ನಿರಂತರವಾಗಿವೆ.
RSS ನ ಸಂಘ ಕುಟುಂಬದಡಿ ದಶಕಗಟ್ಟಲೆ ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾ ಭಾರತಿ ಇಂದು 12,000ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದೆ. ಸೇವಾ ಭಾರತಿ ಆರೋಗ್ಯ ಮತ್ತು ಶಿಕ್ಷಣದ ಹಾದಿಯಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಿದೆ. ವಿದ್ಯಾರ್ಥಿ ಚಟುವಟಿಕೆಗಳಲ್ಲಿ ABVP, ಮಹಿಳಾ ಶಕ್ತೀಕರಣದಲ್ಲಿ ರಾಷ್ಟ್ರೀಯ ಸೇವಿಕಾ ಸಮಿತಿ, ಮುಸ್ಲಿಂ ಸಮಾಜದೊಂದಿಗೆ ಸಂವಾದ ನಡೆಸುವ ಮುಸ್ಲಿಂ ರಾಷ್ಟ್ರೀಯ ಮಂಚ್, ವಕೀಲರ ಸಂಘಟನೆಯಾದ ಅಧಿವಕ್ತಾ ಪರಿಷತ್ ಮುಂತಾದವು ಪ್ರಮುಖವಾಗಿವೆ. ಒಟ್ಟಾರೆ 50ಕ್ಕೂ ಹೆಚ್ಚು ಅಂಗ ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
RSS ನ ಸದಸ್ಯರ ಸಂಖ್ಯೆ 4–5 ಮಿಲಿಯನ್ ನಡುವೆ ಇರುವುದಾಗಿ ಅಂದಾಜಿಸಲಾಗಿದೆ. 83,000ಕ್ಕೂ ಹೆಚ್ಚು ಶಾಖೆಗಳು ದಿನನಿತ್ಯ ನಡೆಯುತ್ತಿವೆ. 2025ರೊಳಗೆ 1 ಲಕ್ಷ ಶಾಖೆಗಳ ಗುರಿ ಇಟ್ಟುಕೊಂಡಿದೆ. ಹತ್ತಿರದ ಶಾಖೆಗೆ ಹಾಜರಾಗಿ ನಿರಂತರವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಸ್ವಾರ್ಥವಿಲ್ಲದ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಯಾರೇ ಆಗಲಿ ಸ್ವಯಂಸೇವಕ ಆಗಬಹುದು. ಸೇವಾಭಾವ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ತತ್ವ ಅನುಷ್ಠಾನದ ಸಮನ್ವಯ ಮತ್ತು ಜವಾಬ್ದಾರಿತನವೇ ಸ್ವಯಂಸೇವಕರ ಮೌಲ್ಯಗಳು.
RSS ನ ಕೆಲಸಗಳ ಪರಿಣಾಮಕಾರಿ ಉದಾಹರಣೆಗಳೂ ಅನೇಕರಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾ ಭಾರತಿ ಶಾಲೆಗಳು ಮೂಲಭೂತ ಹಾಗೂ ಮೌಲ್ಯ ಶಿಕ್ಷಣ ನೀಡುತ್ತಿವೆ. ಸೇವಾ ಭಾರತಿ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು, ಸ್ವಚ್ಛತಾ ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಭೂಕಂಪ, ಪ್ರವಾಹ, COVID-19 ಮೊದಲಾದ ಸಂದರ್ಭಗಳಲ್ಲಿ ಸ್ವಯಂಸೇವಕರು ಆಹಾರ, ಔಷಧಿ, ನೆರವು ವಿತರಿಸಿ ಜೀವ ಉಳಿಸಿದ್ದಾರೆ. ಗ್ರಾಮೋನ್ನತಿ ಯೋಜನೆಗಳ ಮೂಲಕ ಸ್ವಾವಲಂಬನೆ, ಪರಿಸರ ಸಂರಕ್ಷಣೆ ಮತ್ತು ಹಸಿರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಯುವ ಶಿಬಿರಗಳು, ವ್ಯಕ್ತಿತ್ವಾಭಿವೃದ್ಧಿ ಮತ್ತು ಮೌಲ್ಯಶಿಕ್ಷಣ ಶಿಬಿರಗಳು ದೇಶಭಕ್ತಿ ಮತ್ತು ನೈತಿಕತೆಯನ್ನು ಬಲಪಡಿಸುತ್ತಿವೆ.
RSS ಶಾಖೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶಿಸ್ತಿನ ಮತ್ತು ರಾಷ್ಟ್ರಭಕ್ತಿಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿವೆ. ವಿಧ್ಯಾಭಾರತಿ ಶಾಲೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ಮೌಲ್ಯಗಳನ್ನು ಪೂರೈಸಲಾಗುತ್ತಿದೆ. ಸೇವಾ ಭಾರತಿ ಆರೋಗ್ಯ ಶಿಬಿರಗಳು, ಗ್ರಾಮಮಟ್ಟದ ಸ್ವಚ್ಛತಾ ಕಾರ್ಯಗಳು ಗಮನ ಸೆಳೆಯುತ್ತವೆ. ಮಹಾಮಾರಿ ಸಂದರ್ಭದಲ್ಲಿ ಆಹಾರ ಔಷಧಿ ವಿತರಣೆ, ಪ್ರವಾಹ ಸಂತ್ರಸ್ತರಿಗೆ ನೆರವು, ರಕ್ತದಾನ ಶಿಬಿರಗಳಲ್ಲಿ ಸ್ವಯಂಸೇವಕರ ತ್ಯಾಗಮಯ ಸೇವೆ ಜಿಲ್ಲೆಯ ಜನರಿಗೆ ನೆನಪಾಗುವಂತಹದು.
RSS ಶತಮಾನೋತ್ಸವವು ಕೇವಲ ಆಚರಣೆಗಷ್ಟೇ ಸೀಮಿತವಾಗದೆ, ಹೊಸ ಪೀಳಿಗೆಗೆ ಮೌಲ್ಯ ಸಂರಕ್ಷಣೆ, ವಿಜ್ಞಾನಾತ್ಮಕ ದೃಷ್ಟಿ, ಮಾನವೀಯ ಮೌಲ್ಯಗಳೊಂದಿಗೆ ಸಮಾಜ ನಿರ್ಮಾಣದ ದಾರಿದೀಪವಾಗಿದೆ. ಅಸಮಾನತೆ ನಿವಾರಣೆ, ಸಾಮಾಜಿಕ ನ್ಯಾಯ ಹಾಗೂ ವಸುದೈವ ಕುಟುಂಬಕಂ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ. RSS ನಮ್ಮದೇ ಸಮಾಜದಿಂದ ಹುಟ್ಟಿದ, ನಮ್ಮದೇ ಜನರ ಸಂಘಟನೆ. ಸೇವಾಭಾವ, ಶಿಸ್ತಿನ ಕಾರ್ಯವಿಧಾನ ಮತ್ತು ರಾಷ್ಟ್ರಪ್ರೇಮ ಇದರ ಬಲ. ಸಮಾಜದ ಏಕತೆ ಮತ್ತು ರಾಷ್ಟ್ರದ ಐಕ್ಯತೆಯನ್ನು ಆಧಾರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಮುಂದಿನ ಶತಮಾನದಲ್ಲಿಯೂ ಭಾರತವನ್ನು ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಕೇಂದ್ರವನ್ನಾಗಿಸುವ ಶಕ್ತಿ ಹೊಂದಿದೆ.
ಸಂಗ್ರಹ ಲೇಖನ: ಸಿ.ಎನ್. ಮಲ್ಲೇಶ್, ವಕೀಲರು, ಶಿವಮೊಗ್ಗ
