Malenadu Siri Seva Trust ವಿದ್ಯೆಯಿಂದ ಪ್ರಭುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಎಂಬ ಸಂದೇಶವನ್ನು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶನವಾಗಿವೆ ಎಂದು ಮಲೆನಾಡು ಸಿರಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜು ಹಿರಿಯಾವಲಿ ಹೇಳಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಮಲೆನಾಡು ಸಿರಿ ಸೇವಾ ಟ್ರಸ್ಟ್ ಹಾಗೂ ಬಿಎಸ್ಎನ್ಡಿಪಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡ ನಾರಾಯಣ ಗುರು ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದ ಜೊತೆಗೆ ಆಧುನಿಕ ವಿಜ್ಞಾನಕ್ಕೂ ಸಹ ನಾರಾಯಣ ಗುರುಗಳು ಪ್ರೋತ್ಸಾಹ ನೀಡಿದರು. ಅಂದಿನ ಕಾಲಘಟ್ಟದಲ್ಲಿದ್ದ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧವಾಗಿ ಹೋರಾಡುವ ಮೂಲಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಪ್ರಸ್ತುತ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾವಂತರನ್ನು ಹೊಂದಿದ ನಾಡಾಗಿದೆ. ನಾರಾಯಣಗುರುಗಳು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಒಗ್ಗೂಡಿಸಲು ಹಾಗೂ ಸರ್ವರ ಏಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದರು.
ನಾರಾಯಣಗುರುಗಳ ಜಯಂತಿಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಾ ಇರುವವರನ್ನು ಗುರುತಿಸುವ ಕೆಲಸವನ್ನು ಸಂಘಟನೆಯಿAದ ಮಾಡಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಜಿಲ್ಲಾ ಮಟ್ಟದ ಕ್ರಿಯಾಶೀಲ ಪ್ರಶಸ್ತಿ ಪುರಸ್ಕೃತ ಎಚ್.ಕೆ.ಬಿ. ಸ್ವಾಮಿ ಮಾತನಾಡಿ, ನಾರಾಯಣಗುರುಗಳು ಸಮಸಮಾಜದ ನಿರ್ಮಾಣದ ಜೊತೆಗೆ ಸಮಾಜದ ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು.
ಒಂದು ಸಮುದಾಯದವರು ಇತರೆ ಸಮುದಾಯದವರನ್ನು ಗುರುತಿಸಿ ಸನ್ಮಾನಿಸುವುದು ವಿರಳ. ನಾರಾಯಣ ಗುರುಗಳ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಟ್ಟದ ಕ್ರೀಯಾಶೀಲ ಪತ್ರಕರ್ತ ಪ್ರಶಸ್ತಿ ಪುರಸ್ಕೃತ ಎಚ್.ಕೆ.ಬಿ. ಸ್ವಾಮಿ, ಪತ್ರಕರ್ತ ನೋಪಿ ಶಂಕರ್, ಪ್ರಗತಿಪರ ಯುವ ಕೃಷಿಕ ಅರುಣಕುಮಾರ್ ಕೊಡಕಣಿ, ಬಿಎಸ್ಎನ್ಡಿಪಿ ಸಂಘಟನೆ ಮಹಿಳಾ ಜಿಲ್ಲಾಧ್ಯಕ್ಷೆ ರೇಣುಕಾ ಲೋಕೇಶ್, ನಾರಾಯಣಗುರು ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ನಾರಾಯಣರಾವ್ ಹುಲ್ತಿಕೊಪ್ಪ, ಶಿಕ್ಷಕ ಈರಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.
Malenadu Siri Seva Trust ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಲೂಕು ಬಗರ್ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಈಡಿಗ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತಿç, ಮುಖ್ಯಾಧಿಕಾರಿ ಎಚ್.ವಿ. ಚಂದನ್, ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ಜೆ. ಹಳೇಸೊರಬ, ಬುಕ್ಕೇಶ್ ಯಲಸಿ, ಕೆರಿಯಪ್ಪ ಹಳೇಸೊರಬ, ವೇಣುಗೋಪಾಲ್, ನಾಗರಾಜ್ ಜಯಂತಿಗ್ರಾಮ, ಎಸ್.ಡಿ. ನಾಯ್ಕ್, ಗ್ರಾಪಂ ಅಧ್ಯಕ್ಷೆ ಅನುಸೂಯ ಹರೀಶಿ, ಜಯಮ್ಮ ತಡಗಣಿ, ಸುಮಂಗಲ ಕೆಂಚಿಕೊಪ್ಪ ಸೇರಿದಂತೆ ಇತರರಿದ್ದರು.
