B.Y.Raghavendra ಶಿವಮೊಗ್ಗ ಜಿಲ್ಲೆಯಲ್ಲಿ ನರೇಗಾ ಯೋಜನೆಯ ವ್ಯವಸ್ಥಿತ ಅನುಷ್ಟಾನದಲ್ಲಿ ಅನೇಕ ಲೋಪಗಳಿದ್ದು, ಅವುಗಳನ್ನು ಸರಿಪಡಿಸುವಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಗಮನಹರಿಸಬೇಕಲ್ಲದೆ ಸರ್ಕಾರಕ್ಕೆ ಸಭೆಯ ನಡಾವಳಿಯನ್ನು ಸಲ್ಲಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನರೇಗಾ ಯೋಜನೆಯಡಿಯಲ್ಲಿ ಉದ್ಯೋಗಚೀಟಿ ಪಡೆದವರಿಗೆ ಪಾವತಿಸುವ ಹಣದಲ್ಲಿ ಅಕ್ರಮಗಳಿಗೆ ಅವಕಾಶವಾಗಿರುವುದನ್ನು ಸಮಿತಿ ಸದಸ್ಯರು ಗಮನಕ್ಕೆ ತಂದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಲ್ಲದೆ ಕ್ರಿಯಾಯೋಜನೆಯಲ್ಲಿನ ಅನೇಕ ಲೋಪಗಳಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಕ್ರಿಯಾಯೋಜನೆ ತಯಾರಿಸುವ ಮುನ್ನ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ನಂತರ ಕ್ರಿಯಾಯೋಜನೆ ರೂಪಿಸಬೇಕು ಎಂದರು. ಶಿವಮೊಗ್ಗ-ಆನವಟ್ಟಿ ಮಾರ್ಗದಲ್ಲಿ ಸವಳಂಗ ಮತ್ತು ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿ 57ರಲ್ಲಿ ಅಳವಡಿಸಿರುವ ಟೋಲ್ಸುಂಕವಸೂಲಿ ಗೇಟುಗಳು ಅವೈಜ್ಞಾನಿಕವಾಗಿದೆ. ಇದು ಸರಿಯಲ್ಲ. ಅಲ್ಲದೇ ಸಾರ್ವಜನಿಕರ ಶೋಷಣೆಗೆ ಅವಕಾಶ ನೀಡಿದಂತಾಗಿದೆ. ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಈ ಗೇಟುಗಳನ್ನು ಅಳವಡಿಸಿ ಅನೇಕ ವರ್ಷಗಳೇ ಸಂದಿವೆ. ಇವುಗಳನ್ನು ತ್ವರಿತವಾಗಿ ತೆರೆವುಗೊಳಿಸಬೇಕು ಎಂದು ದಿಶಾ ಸಮಿತಿ ಸದಸ್ಯ ಶಿಕಾರಿಪುರದ ಕೆ.ಎಸ್.ಗುರುಮೂರ್ತಿ ಅವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 15ರಲ್ಲಿನ ಸಕ್ಕರೆ ಕಾರ್ಖಾನೆ ಸಮೀಪ ದುಮ್ಮಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ-ಮುಂಗಟ್ಟು ಇಟ್ಟುಕೊಂಡಿರುವಲ್ಲಿ ಆಗಾಗ್ಗೆ ಆಕಸ್ಮಿಕ ಅಪಘಾತಗಳು ನಡೆಯುತ್ತಲೇ ಇವೆ. ಇವುಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸರ್ಜಿ, ವಿಧಾನ ಪರಿಷತ್ ಸದಸ್ಯರಾದ ಡಾ|| ಧನಂಜಯ ಅವರು ಹೇಳಿದರು.
ದುಮ್ಮಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಹಲವು ದಶಕಗಳಿಂದ ವಾಸವಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟು ಬೇರೆಡೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಚನ್ನಗಿರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮಗಳ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕರಾದ – ಎಸ್.ಎನ್.ಚನ್ನಬಸಪ್ಪನವರು ತಿಳಿಸಿದರು.
ಭದ್ರಾವತಿಯಲ್ಲಿ ಅಪರಾಧ ಚಟುಚಟಿಕೆ ಹೆಚ್ಚಾಗಿದ್ದು, ಅದನ್ನು ಕಡಿವಾಣ ಹಾಕಬೇಕಿದೆ. ಇದರೊಟ್ಟಿಗೆ ಅಟ್ರಾಸಿಟಿ ಕಾಯ್ದೆಯು ಕೂಡ ದುರುಪಯೋಗವಾಗುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಸಂಸದ ಬಿ.ವೈ.ರಾಘವೇಂದ್ರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಿಳಿಸಿದರು. ಅಮೃತ್ 1.0 ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ನೀರು ಸರಬರಾಜು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಮೃತ್ 2.0 ಯೋಜನೆಯಡಿಯಲ್ಲಿ ನೀರು ಸರಬರಾಜು ಕಲ್ಪಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.
B.Y.Raghavendra ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ 1000 ಕೋಟಿ ವೆಚ್ಚದ ಯುಜಿಡಿ ಯೋಜನೆ ಅನುಷ್ಠಾನದ ಬಗ್ಗೆ ದೂರುಗಳು ಬರುತ್ತಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಜವಾಭ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸರಿಯಾದ ನೀರು ಸರಬರಾಜು, ಒಳಚರಂಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು. ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಎಲ್ಲಾ ರೀತಿಯ ಶ್ರಮವನ್ನು ವಹಿಸಬೇಕು. ಇಲಾಖೆಯ ಸಚಿವರಿಗೂ ಕೂಡ ಸಂಪರ್ಕ ಮಾಡಿ ಈ ಕುರಿತು ಅಧಿಕಾರಿಗಳು ತಿಳಿಸುವಂತಾಗಬೇಕು ಎಂದರು. ಪಿಎಂಎಜಿವೈ ಯೋಜನೆಯಿಂದ ಎಸ್ಸಿ/ಎಸ್ಟಿ ಕಾಲೋನಿಗೆ ಉತ್ತಮವಾದ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂಗನವಾಡಿ ಕೇಂದ್ರ, ಓಡಾಡಲು ಉತ್ತಮ ರಸ್ತೆ, ಚರಂಡಿ, ಸೋಲರ್ ಲೈಟ್ ಮಾಡಿಕೊಡಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಶಿಕಾರಿಪುರ, ಹಾನಗಲ್ ಮಾರ್ಗವಾದ ಟೋಲ್ಗೇಟ್ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಟೋಲ್ ಗೇಟ್ ವಿರೋಧಿಸಿ ಪ್ರತಿಭಟನೆ ಮಾಡಿದ ಬೆನ್ನಲ್ಲೆ ಸಚಿವರ ಮಟ್ಟದಲ್ಲಿ ಸಭೆ ಮಾಡಲಾಗಿದೆ. ಹಾಗೂ ಸರ್ಕಾರಕ್ಕೂ ಪತ್ರವನ್ನು ಬರೆದಿದ್ದೇವೆ. ಇದು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ಅಧೀಕ್ಷಕ ಜಿ.ಕೆ.ಮಿಥುನ್ಕುಮಾರ್, ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಬಲ್ಕೀಸ್ಬಾನು, ಡಾ|| ಧನಂಜಯ ಸರ್ಜಿ, ಶಾಸಕ ಎಸ್.ಎನ್.ಚನ್ನಬಸಪ್ಪ, ದಿಶಾ ಸಮಿತಿಯ ಹಿರಿಯ ಸದಸ್ಯ ಕೆ.ಎಸ್.ಗುರುಮೂರ್ತಿ ಸೇರಿದಂತೆ ಸಮಿತಿಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
