Department of Police ಸದಾ ಒತ್ತಡದಲ್ಲಿ ಇರುತ್ತಿದ್ದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಲ್ಲಿದ್ದ, ಸೃಜನಶೀಲ ಮನಸ್ಸು ಅರಳಿತ್ತು. ತಮ್ಮ ಸ್ವರಚಿತ ಕವನಗಳನ್ನು ಓದಿದ ಪೊಲೀಸ್ ಸಿಬ್ಬಂದಿಗಳು, ಅಕ್ಷರ ಮತ್ತು ಗಾಯನದ ಮೂಲಕ ನೆರೆದಿದ್ದವರ ಹೃದಯ ಸ್ಪರ್ಶಿಸುವಲ್ಲಿ ಸಫಲರಾಗಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಿದ್ದ 240 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಇಂಥಹ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.
ಖಾಕಿ ಕವಿ ಮಂಜುನಾಥ ವಾಚಿಸಿದ ರಸ್ತೆ ಸುರಕ್ಷತೆ ಕವನ, ಉಮಾಪತಿ ಗಂಗಾರಾಮ್ ವಾಚಿಸಿದ ಮಾದರಿಯಾಗು ಓ ನನ್ನ ಅಣ್ಣ ಕವನ, ಸಾಗರದ ಪೊಲೀಸ್ ಸಿಬ್ಬಂದಿ ಗೀತಾ ಸಾಗರ್ ವಾಚಿಸಿದ ಪೊಲೀಸ್ ನವರು ಏನ್ ಮಾಡ್ತಾ ಇದಾರೆ ಸ್ವಾಮಿ ಎಂಬ ಸಾರ್ವಜನಿಕರ ಅಸಡ್ಡೆಯ ಪ್ರಶ್ನೆಗಳು ಮತ್ತು ಪೊಲೀಸರ ಒತ್ತಡದ ಬಗೆಗಿನ ಕವನ ಕೇಳುಗರ ಮೆಚ್ಚುಗೆ ಗಳಿಸಿತು. ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ರವಿಕುಮಾರ್, ತಿಮ್ಮೇಶಪ್ಪ, ನಾಗಿಬಾಯಿ, ಹರೀಶ್ ಶಿವಮೊಗ್ಗ, ಬಿ.ಬಿ. ಮಂಜುನಾಥ, ಪರಶುರಾಮ, ಸಂತೋಷ ಹೆಚ್.ಜಿ., ಶರತ್ ಸಿ.ಟಿ., ಲಕ್ಷ್ಮಣ್, ಜಾಯ್ ಶಿವಮೊಗ್ಗ, ನಿಂಗೇಶ್ ಡಿ., ಪ್ರಶಾಂತ ಕೆ.ಎಮ್ ಕವನ ವಾಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಮೇಶ್ ಕುಮಾರ್ ಮಾತನಾಡಿ, ಭಾಷಾ ವೈವಿಧ್ಯತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಕಾರ್ಯ ಸಾಹಿತ್ಯ ಹುಣ್ಣಿಮೆಯಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಸವಾಲು ಎದುರಾಗುತ್ತಿದ್ದರು ಸಹ, ಕನ್ನಡದ ಬಗೆಗಿನ ಅನೇಕ ಕ್ರಿಯಾಶೀಲ ಚಟುವಟಿಕೆಗಳು ಭಾಷೆಯನ್ನು ಮತ್ತಷ್ಟು ಶಕ್ತಿಗೊಳಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಸಮಾಜಮುಖಿ ಬರವಣಿಗೆ ಹೆಚ್ಚು ಜನಮೆಚ್ಚುಗೆ ಪಡೆಯುತ್ತದೆ. ಹೊಸ ಸಾಹಿತ್ಯ ಆಸಕ್ತರನ್ನು ತಲುಪಲು ಜನರಿರುವಲ್ಲಿಗೆ ಹೋಗಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದ ಜೊತೆಯಲ್ಲಿ, ಮಾತೃ ಭಾಷೆಯ ಸವಾಲುಗಳನ್ನು ಚರ್ಚಿಸುವ ಹಿನ್ನಲೆಯಲ್ಲಿ ಮನೆ ಮನ ಕಾರ್ಯಕ್ರಮವಾಗಿ ರೂಪಿಸಿದ ಸಾಹಿತ್ಯ ಹುಣ್ಣಿಮೆಯು 20 ವರ್ಷಗಳು ಪೂರೈಸಿದೆ.
ಬಡಾವಣೆಗಳಲ್ಲಿ ಕಾರ್ಯಕ್ರಮ ಮಾಡುವಾಗ ಎಲ್ಲಾ ಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆಗಳು ಹಂಚುತ್ತಿದ್ದೇವೆ. ಒಳಿತು ಮತ್ತು ಕೆಡುಕುಗಳ ನಡುವೆ ಸಾಹಿತ್ಯದ ಮೂಲಕ ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತುವ ಕಾರ್ಯ ಮಾಡೋಣ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷರಾದ ಮಧುಸೂದನ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೂರದರ್ಶನ ಕಲಾವಿದ ಉಮೇಶ್ ಗೌಡ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ನಾಗೇಂದ್ರ ಆಚಾರ್ಯ ಕಥೆಯನ್ನು ವಾಚಿಸಿದರು.
Department of Police ಇದೇ ವೇಳೆ ಖಾಕಿ ಕವಿ ಮಂಜುನಾಥ ಅವರು ರಚಿಸಿದ ಕವನ ಸಂಕಲನ ಆಶಾ ಸುಂದರಿ ಹಾಗೂ ಕಾವ್ಯ ಮಂಜರಿ ಪುಸ್ತಕಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಡಿಎಆರ್ ಇನ್ಸ್ಪೆಕ್ಟರ್ ಸೋಮಶೇಖರಪ್ಪ ಸ್ವಾಗತಿಸಿ, ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಪ್ರಾರ್ಥಿಸಿ, ಕೆ.ಮಂಜಪ್ಪ ನಿರೂಪಿಸಿದರು. ಪೊಲೀಸ್ ಸಿಬ್ಬಂದಿ ಉಮಾಪತಿ, ರವಿಕುಮಾರ್, ಜಿ.ಲಕ್ಷ್ಮಣ, ಗಾಯಕಿ ನಳಿನಾಕ್ಷಿ, ಸುಶೀಲಾ ಷಣ್ಮುಗಂ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
