Samanvaya Trust ಮನದಲ್ಲಿ ಇರುವ ನಕರಾತ್ಮಕ ಅಂಶಗಳನ್ನು ಮೊದಲು ದೂರ ಮಾಡಿಕೊಳ್ಳಬೇಕು. ಸಕರಾತ್ಮಕ ಅಲೋಚನೆಯಿಂದ ಪ್ರಯತ್ನ ಪಟ್ಟರೆ ಗುರಿ ತಲುಪುವುದು ನಿಶ್ಚಿತ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ, ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತ ಕೆ.ಎ.ದಯಾನಂದ್ ಹೇಳಿದರು.
ಸಮನ್ವಯ ಸಂಸ್ಥೆಯ 20ನೇ ಸಂವತ್ಸರ “ ಸಮನ್ವಯ ಸಂಗಮ “ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ “ಭರವಸೆಯ ಹೆಜ್ಜೆ” ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಅತಿಯಾದ ಬಳಕೆ ಸಮಯ ವ್ಯರ್ಥಕ್ಕೆ ದಾರಿಯಾಗಬಲ್ಲದು. ಆದರೆ ಮೊಬೈಲ್ ಅನ್ನು ಧನಾತ್ಮಕವಾಗಿ ಬಳಸಲು ಅವಕಾಶವಿದೆ. ಕಲಿಕೆಯ ದೃಷ್ಟಿಯಿಂದ ಮೊಬೈಲ್ ಬಳಸಬೇಕು. ಮೊಬೈಲ್ ಸದ್ಭಳಕೆಯಿಂದ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಸಮನ್ವಯ ಧ್ಯೇಯ ಗೀತೆ ಬಿಡುಗಡೆಗೊಳಿಸಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ಕುಮಾರ್ ಭೂಮರಡ್ಡಿ ಮಾತನಾಡಿ, ಬದುಕಿನ ಅಮೂಲ್ಯ ಘಟ್ಟ, ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಮುನ್ನಡೆದು ಜೀವನ ರೂಪಿಸಿಕೊಳ್ಳಬೇಕು. ನಿಮ್ಮಲ್ಲಿರುವ ಪ್ರತಿಭೆ ಅರಿತುಕೊಂಡು ನಿಮ್ಮ ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು. ಭವ್ಯ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಅಮೃತ್ ನೋನಿ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿ ಮಾತನಾಡಿ, ಧನಾತ್ಮಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡುವ ಸಂಕಲ್ಪ ಮಾಡಬೇಕು. ಮಾದರಿ ವಿದ್ಯಾರ್ಥಿಯಾಗಿ ಇತರರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ಡಿಡಿಪಿಯು ಚಂದ್ರಪ್ಪ ಎಸ್.ಗುಂಡಪಲ್ಲಿ ಮಾತನಾಡಿ, ನಿರಂತರ ಪರಿಶ್ರಮ ಹಾಗೂ ಛಲದಿಂದ ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಗುರಿ ತಲುಪಲು ಸಾಧ್ಯ. ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಸಿದ್ಧತೆ ನಡೆಸಿ ಯಶಸ್ಸು ಹೊಂದಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ. ರಜನಿ ಪೈ ಉಪಸ್ಥಿತರಿದ್ದರು.
ಉದ್ಯಮಿ ವೆಂಕಟೇಶ್ ಎಸ್.ವಿ, ತರಬೇತುದಾರ ಸಾಧನಾ ಮಂಜುನಾಥ್, ಕೃಷಿಕ ದುರ್ಗಪ್ಪ ಅಂಗಡಿ ಹಾಗೂ ಕೆಎಪಿಎಂಸಿ ಪ್ರಾಂಶುಪಾಲೆ ಡಾ. ಸಂಧ್ಯಾ ಕಾವೇರಿ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಸಮನ್ವಯ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. 500ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
20ರಂದು ಗಾನ-ಸನ್ಮಾನ-ಸತ್ಕಾರ ಕಾರ್ಯಕ್ರಮ
Samanvaya Trust ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜುಲೈ 20ರಂದು ಸಂಜೆ 5.30ರಿಂದ ಸಮನ್ವಯ ಸಂಗಮ 2025, ಗಾನ-ಸನ್ಮಾನ-ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮನ್ವಯ ಟ್ರಸ್ಟ್ ಮುನ್ನಡೆಸುತ್ತಿರುವ ಕೆ.ಎ.ದಯಾನಂದ ಐಎಎಸ್ ಸ್ಮರ್ಧಾತ್ಮಕ ಪರೀಕ್ಷೆಗಳ ತಯಾರಿ ಉಚಿತ ವಾಚನಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮನ್ವಯ ಸಂಸ್ಥೆಯ ಜತೆಯಲ್ಲಿ 20 ವರ್ಷಗಳಲ್ಲಿ ಕೆಲಸ ಮಾಡಿರುವ ಮಹಾಪೋಷಕರು, ಪೋಷಕರು, ಸ್ವಯಂಸೇವಕರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಸಮನ್ವಯ ಯೂತ್ ಐಕಾನ್ ಪ್ರಶಸ್ತಿ ನೀಡಲಾಗುವುದು.
21ರಂದು ಗುರುವಂದನಾ ಕಾರ್ಯಕ್ರಮ
ಶಿವಮೊಗ್ಗ ನಗರದ ಸೋಮಿನಕೊಪ್ಪ ರಸ್ತೆಯ ಆರ್ಯವೈಶ್ಯ ಸಮುದಾಯ ಭವನದಲ್ಲಿ ಜುಲೈ 21ರಂದು ಸಂಜೆ 6ಕ್ಕೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮನ್ವಯ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಭಜನಾ ಪರಿಷತ್, ಆರ್.ಜಿ.ಎಸ್.ಸ್ಕೇಟರಿಂಗ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಿರಾಳಕೊಪ್ಪದ ಶ್ರೀ ಶಿವನಾಗ ಪಾರ್ಥ ಅವಧೂತರು ಉಪಸ್ಥಿತರಿರುವರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ, ಅಬ್ದುಲ್ ಮುಜೀಬ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಪಾಲ್ಗೊಳ್ಳುವರು. ಸಮನ್ವಯ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಗಿರಿಜಾದೇವಿ ಉಪಸ್ಥಿತರಿರುವರು. ಆರ್.ಜಿ.ಎಸ್.ಸ್ಕೇಟರಿಂಗ್ನ ಅಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸುವರು.
