ಸೊರಬ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿಯಿಂದಾಗುವ ತೊಂದರೆಗಳನ್ನು ಸರಿ ಪಡಿಸಬೇಕೆಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಹಿಂದೂ ಜಾಗರಣಾ ವೇದಿಕೆ, ಬಜರಂಗದಳ ವತಿಯಿಂದ ಪಟ್ಟಣದ ಪುರಸಭೆ ಮುಂಭಾಗ ಕಾಲು ಮುರಿದ ಕರುವನಿಟ್ಟು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಎಚ್.ವಿ. ಚಂದನ್ ಅವರಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಪಟ್ಟಣದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾಗುತ್ತಿದ್ದಂತೆ ರಸ್ತೆಯಲ್ಲಿ ಮಲಗುವುದರಿಂದ ವಾಹನ ಸವಾರರಿಗೆ ತೊಂದರೆ ಆಗಿ ದುರ್ಘಟನೆಗಳು ನಡೆಯುತ್ತಿವೆ.
ಮಂಗಳವಾರದ ಸಂತೆ ಬಂದರೆ ಸಾಕು, ಸಂತೆಯ ಮಾರುಕಟ್ಟೆಯ ತುಂಬ ಬಿಡಾಡಿ ದನಗಳೇ ಇರುತ್ತವೆ. ಕಳೆದ ಎರಡು ದಿನದ ಹಿಂದೆ ಬೀದಿ ದನಗಳು ಕಾದಾಟ ಮಾಡುತ್ತಾ ಬಂದು ಸೊರಬ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಎಸ್. ನಾಗರಾಜ್ ಜೈನ್ ಅವರು ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ ಎಂದರು.
ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಜಕ ಲೋಕೇಶ್ ಕಕ್ಕರಸಿ ಮಾತನಾಡಿ, ಇತ್ತೀಚೆಗೆ ಎಪಿಎಂಸಿ ಸಮೀಪದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಜಾನುವಾರುಗಳು ಮೃತಪಟ್ಟಿವೆ. ಒಂದು ಕರು ಗಾಯಗೊಂಡಿದ್ದು, ಕಳೆದ ೧೫ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಪಟ್ಟಣದಲ್ಲಿ ಅನೇಕ ಅವಘಡಗಳು ಸಂಭವಿಸಿವೆ.
ರಾತ್ರಿ ಸಮಯದಲ್ಲಿ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಮಲಗುತ್ತವೆ. ಈ ಬಗ್ಗೆ ಹಲವು ಬಾರಿ ಮನವಿ ಸಹ ನೀಡಲಾಗಿದೆ. ಜಾನುವಾರುಗಳ ಮಾಲಿಕರಿಗೆ ಎಚ್ಚರಿಕೆ ನೀಡಿ, ಮನೆಯಲ್ಲಿ ಕಟ್ಟಿ ಹಾಕಲು ಆದೇಶ ನೀಡಬೇಕು. ಇಲ್ಲವಾದಲ್ಲಿ ಪುರಸಭೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ವಿ. ಚಂದನ್ ಮಾತನಾಡಿ, ಶೀಘ್ರದಲ್ಲಿಯೇ ಜಾನುವಾರುಗಳ ಮಾಲಿಕರಿಗೆ ನೋಟಿಸ್ ನೀಡಲಾಗುವುದು. ಮಾಲಿಕರಿಲ್ಲದ ಜಾನುವಾರುಗಳನ್ನು ಗೋ ಶಾಲೆಗೆ ಕಳುಹಿಸಲು ಕ್ರಮ ವಹಿಸಲಾಗುವುದು ಎಂದರು.
ಬಜರಂಗದಳ ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ಹಿಂದು ಜಾಗರಣಾ ವೇದಿಕೆ ತಾಲೂಕು ಸಹ ಸಂಚಾಲಕ ರಾಘು ಆಚಾರ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ, ಕಾರ್ಯದರ್ಶಿ ಶರತ್ ಸ್ವಾಮಿ, ಸಹ ಕಾರ್ಯದರ್ಶಿ ನಾಗಪ್ಪ ಬಿದರಗೇರಿ, ಹಾಲೇಶ್, ಕೇಶವ ಪೇಟ್ಕರ್ ಸೇರಿದಂತೆ ಇತರರಿದ್ದರು.
