ಲೇಖನ: ರಾಕೇಶ್ ಡಿಸೋಜ
ಮೊಬೈಲ್: ೯೪೪೮೩ ೪೩೨೧೧
Klive Special Article ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ, ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋಽ.. ಎಂದು ಸುರಿಯುವ ಮಳೆ ಇದು ಮುಂಗಾರು ಮಳೆಗಾಲದಲ್ಲಿ ಕಾಣುವ ಪ್ರಮುಖ ದೃಶ್ಯಾವಳಿ. ಎಲ್ಲೆಡೆ ಮಳೆಯದ್ದೇ ಕಾರುಬಾರು.
ಹೀಗೆ ಜೂನ್ ತಿಂಗಳ ಮೊದಲ ವಾರದಲ್ಲಿ ನೈರುತ್ಯ ಮುಂಗಾರಿನ ಮೂಲಕ ದೇಶಾದ್ಯಂತ ೪ ತಿಂಗಳ ಪಯಣಕ್ಕೆ ಇದು ಮುನ್ನುಡಿ ಬರೆಯುತ್ತಿದೆ. ಅದೇ ರೀತಿ ರಾಜ್ಯದ ಮಳೆನಾಡು ಭಾಗದಲ್ಲಿ ಪ್ರತಿ ವರ್ಷ ಅದರ ಅಬ್ಬರ ಜೋರಾಗಿಯೇ ಇರುತ್ತಿತ್ತು. ಈ ರೀತಿಯ ಮುಂಗಾರು ಮಳೆಯ ಹನಿಗಳನ್ನು ಕಣ್ತುಂಬಿಕೊಳ್ಳುವ ಜೊತೆ ಜೊತೆಗೆ ತುಂಗೆಯ ತಟದಲ್ಲಿ ವಾಸಿಸುತ್ತಿದ್ದ ಜನತೆಗೆ ನೆರೆಯ ಭಯ ಸದಾ ಕಾಡುತ್ತಿರುತ್ತಿತ್ತು.
ಇಲ್ಲಿನ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ೧೯೨೮ರಿಂದ ಈಚೆಗೆ ಜುಲೈ ೧೬ರಂದು ಮಳೆಯ ಆರ್ಭಟದ ನಡುವೆಯೇ ಕಾರ್ಮೆಲ್ ಮಾತೆಯ ಉತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸತೊಡಗಿದರು.
ಕಾರ್ಮೆಲ್ ಮಾತೆಯ ಉತ್ಸವದ ಹಿನ್ನೆಲೆ: ಜು.೧೬; ಈ ದಿನ ವಿಶ್ವದೆಲ್ಲೆಡೆಯ ದೇವ ಮಾತೆಯ ಭಕ್ತರಿಗೆ ಶುಭದಿನ. ಅಂದು ಕಾರ್ಮೆಲ್ ಬೆಟ್ಟದ ಮೇಲೆ ದೇವ ಮಾತೆ ಪ್ರತ್ಯಕ್ಷವಾಗಿ ಮನುಕುಲಕ್ಕೆ ದರ್ಶನ ನೀಡಿದ್ದರು. ಈ ಕಾರಣದಿಂದಲೇ ವಿಶ್ವದೆಲ್ಲೆಡೆ ಕಾರ್ಮೆಲ್ ಮಾತೆಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಅಂತೆಯೇ ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಕ್ರಿ.ಶ. ೧೯೨೮ರಲ್ಲಿ ಇಲ್ಲಿನ ಜೀವನದಿ ತುಂಗೆಯು ಉಕ್ಕಿ ಹರಿದು ನೂರಾರು ಮಂದಿ ಜನಸಾಮಾನ್ಯರು, ಸಾವಿರಾರು ಪ್ರಾಣಿಪಕ್ಷಿಗಳು ಹಾಗೂ ಅಪಾರ ಪ್ರಮಾಮದ ಆಸ್ತಿಪಾಸ್ತಿ ನಾಶವಾಗಿತ್ತು.
ಹೀಗೆ ಜಲಪ್ರಳಯವಾದಾಗ ನಗರದ ಹೃದಯಭಾಗದಲ್ಲಿದ್ದ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಜಾತಿ-ಧರ್ಮದ ಬೇಧವಿಲ್ಲದೆ ಪ್ರವಾಹ ಪೀಡಿತರಿಗೆ ಆಶ್ರಯ ನೀಡಿ, ಚರ್ಚ್ನ ಅಂದಿನ ಧರ್ಮಕೇಂದ್ರದ ಗುರುಗಳು ಮತ್ತು ಮೇರಿ ಇಮ್ಯಾಕ್ಯುಲೇಟ್ ಕನ್ಯಾಸ್ತಿ ಮಠದ ಸಿಸ್ರ್ಸ್ಗಳು ನಿರಾಶ್ರಿತರಿಗೆ ಊಟೋಪಚಾರದ ವ್ಯವಸ್ಥೆಯ ಜೊತೆಗೆ ಅನಾರೋಗ್ಯ ಪೀಡಿತರಿಗೆ ಶುಶ್ರೂಷೆಯನ್ನೂ ಸಹ ನೀಡುತ್ತಿದ್ದರು. ಆದರೆ ಪ್ರಕೃತಿಯ ಮುನಿಸು ಕಡಿಮೆಯಾಗದೆ ದಿನದಿಂದ ದಿನಕ್ಕೆ ಮಳೆಯ ಆರ್ಭಟ ಹೆಚ್ಚಿತು. ಈ ಕಾರಣದಿಂದ ತುಂಗೆಯ ಒಡಲು ತುಂಬಿ, ಜೀವನದಿಯಲ್ಲಿ ಪ್ರವಾಹ ಉಂಟಾಯಿತು.
ಈ ಸಂದರ್ಭದಲ್ಲಿ ಚರ್ಚ್ನಲ್ಲಿ ಆಶ್ರಯ ಪಡೆದಿದ್ದ ನೆರೆ ನಿರಾಶ್ರಿತರು ಸೇರಿದಂತೆ ಜಾತಿ-ಧರ್ಮದ ಬೆಧವಿಲ್ಲದೆ ನಗರದ ವಿವಿಧ ಸ್ಥಳಗಳಿಂದ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಬಂದು ಕಾರ್ಮೆಲ್ ಮಾತೆಯ ಸನ್ನಿಧಿಯಲ್ಲಿ ಸೇರಿ ಪ್ರಕೃತಿ ವಿಕೋಪದಿಂದ ತಮ್ಮನ್ನು ರಕ್ಷಿಸಲು ಪರಿಪರಿಯಾಗಿ ಬೇಡಿಕೊಂಡು ಕಣ್ಣೀರಿಟ್ಟು ಪ್ರಾರ್ಥಿಸಿ, ಹರಕೆಹೊತ್ತರು.
ನಂತರ ಮಳೆರಾಯ ತನ್ನ ಆರ್ಭಟವನ್ನು ಕಡಿಮೆಗೊಳಿಸತೊಡಗಿದ, ಹಾಗೆಯೇ ತುಂಗೆಯ ಪ್ರವಾಹವು ನಿಧಾನವಾಗಿ ಇಳಿಯಿತು ಎಂಬ ಬಲವಾದ ನಂಬಿಕೆ ಅಂದಿನಿAದ ಇಂದಿನವರೆಗೂ ಮಾತೆಯ ಭಕ್ತರಲ್ಲಿದೆ. ಈ ಕಾರಣದಿಂದಾಗಿ ಅಂದಿನಿಂದ ಪ್ರತಿವರ್ಷವೂ ಕಾರ್ಮೆಲ್ ಮಾತೆಯ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ರಾಜ್ಯದ ವಿವಿಧ ಭಾಗದಿಂದ ಕ್ರೈಸ್ತರು, ಹಿಂದೂ-ಮುಸ್ಲಿಂಮರು ಕಾರ್ಮೆಲ್ ಮಾತೆಯ ಉತ್ಸವವನ್ನು ಆಚರಿಸಲು ಮಲೆನಾಡಿದ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿರುವ ಇಂದಿನ ಸೇಕ್ರೆಡ್ ಹಾರ್ಟ್ ಪ್ರಧಾನಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಮೆಲ್ ಮಾತೆಗೆ ಹೂವು, ಧೂಪ, ಮೇಣದ ಭತ್ತಿ, ದವಸ-ಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿ ಧನ್ಯತಾಭಾವ ಹೊಂದುತ್ತಿದ್ದಾರೆ.
ಸೇಕ್ರೆಡ್ ಹಾರ್ಟ್ ಚರ್ಚ್ನ ವಿಶೇಷತೆ: ಶಿವಮೊಗ್ಗ ಜಿಲ್ಲೆಯು ಈ ಮೊದಲು ಚಿಕ್ಕಮಗಳೂರು ಧರ್ಮ ಪ್ರಾಂತ್ಯದ ಆಡಳಿತಕ್ಕೊಳಪಟ್ಟಿತ್ತು. ನಂತರ ನ.೧೪, ೧೯೮೮ ಅಂದಿನ ಮಹಾಧರ್ಮಾಧ್ಯಕ್ಷ (ಅರ್ಚ್ ಬಿಷಪ್)ರಾದ ಪರಮಪೂಜ್ಯ ಅಲ್ಪೋನ್ಸ್ ಮತಾಯಸ್ ಅವರು ಅದನ್ನು ಚಿಕ್ಕಮಗಳೂರು ಧರ್ಮಕ್ಷೇತ್ರದಿಂದ ಬೇರ್ಪಡಿಸಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನೊಳಗೊಂಡು ಶಿವಮೊಗ್ಗ ಧರ್ಮಕ್ಷೇತ್ರವನ್ನು ಅಸ್ಥಿತ್ವಕ್ಕೆ ತಂದರು. ಹೀಗೆ ಸ್ವತಂತ್ರವಾಗಿ ಅಸ್ಥಿತ್ವಕ್ಕೆ ಬಂದ ಶಿವಮೊಗ್ಗ ಧರ್ಮಕ್ಷೇತ್ರದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮಪೂಜ್ಯ ಇಗ್ನೇಷಿಯಸ್ ಪಿಂಟೋ ಅವರು ಧರ್ಮಾಧಿಕಾರ ಸ್ವೀಕರಿಸಿದರು.
Klive Special Article ನಂತರ ಈ ಧರ್ಮಕ್ಷೇತ್ರದ ದ್ವಿತಿಯ ಧರ್ಮಾಧ್ಯಕ್ಷರಾಗಿ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಪ್ರಸ್ತುತ ತೃತೀಯ ಧರ್ಮಾಧ್ಯಕ್ಷರಾಗಿ ಪರಮಪೂಜ್ಯ ಫ್ರಾನ್ಸಿಸ್ ಶೆರಾವೋ ಅವರು ಶಿವಮೊಗ್ಗ ಧರ್ಮಕ್ಷೇತ್ರದ ಪೀಠಾಧಿಕಾರಿಯಾಗಿದ್ದಾರೆ. ಈಗ ಈ ದೇವಾಲಯವು ಶಿವಮೊಗ್ಗ ಧರ್ಮಕ್ಷೇತ್ರದ ಪ್ರಧಾನಾಲಯವಾಗಿ ಮೇಲ್ದರ್ಜೆಗೇರಿದ್ದು, ಅತ್ಯಂತ ಸುಸಜ್ಜಿತವಾದ ಹಾಗೂ ವಿಶ್ವದಲ್ಲೇ ೨ನೇ ಅತಿ ದೊಡ್ಡ ಕ್ರೈಸ್ತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದರಿ ದೇವಾಲಯವನ್ನು ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಾಗಿದ್ದು, ಇಲ್ಲಿ ಪ್ರತಿ ವರ್ಷವು ಯೇಸುವಿನ ಪವಿತ್ರ ಹೃದಯದ ಹಬ್ಬ ಮತ್ತು ಕಾರ್ಮೆಲ್ ಮಾತೆಯ ಉತ್ಸವ ಎರಡನನ್ನೂ ಅದ್ದೂರಿಯಾಗಿ ಆಚರಿಸುತ್ತಿರುವುದು ಈ ದೇವಾಲಯದ ವಿಶೇಷಗಳಲ್ಲೊಂದಾಗಿದೆ.
