Karnataka Union Of Working Journalists Association ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ರೋಚಕ ಹಾಗೂ ರಂಜನಾತ್ಮಕ ಸುದ್ದಿಗಳಿಗೆ ಆದ್ಯತೆ ಕೊಡದೆ ರಚನಾತ್ಮಕತೆಯ ಬಗ್ಗೆ ಗಮನ ನೀಡಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ವತಿಯಿಂದ ಏರ್ಪಾಡಾಗಿದ್ದ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ಹಿರಿಯ ಪತ್ರಕರ್ತ ದಿ ಹರಡಿಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಎಷ್ಟೇ ವ್ಯಾಪಕವಾದರೂ ಭಾರತದಲ್ಲಿ ಮುದ್ರಣ ಮಾಧ್ಯಮದ ಬೇಡಿಕೆಗೆ ಕುಂದು ಉಂಟಾಗಿಲ್ಲ, ಏಕೆಂದರೆ ಮುದ್ರಣ ಮಾಧ್ಯಮದ ಬಗ್ಗೆ ಜನರಲ್ಲಿ ಇನ್ನೂ ವಿಶ್ವಾಸ ಉಳಿದುಕೊಂಡಿದೆ, ದೃಶ್ಯ ಮಾಧ್ಯಮಗಳು ಹಾಗೂ ಜಾಲತಾಣಗಳು ಅವಸರದ ಸರಕಾದರೆ ಮುದ್ರಣ ಮಾಧ್ಯಮವು ದಿನಪೂರ್ತಿ ಕೂಲಂಕುಶ ಪರಿಶೀಲಿಸಿ ಮರುದಿನ ಸತ್ಯವಾಗಿದ್ದನ್ನು ಕೊಡುತ್ತವೆ ಎಂಬ ವಿಶ್ವಾಸ ಓದುಗರಲ್ಲಿ ಈಗಲೂ ಇದ್ದು ಇದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು. 1884ರ ಜುಲೈ ಒಂದರಂದು ಮಂಗಳೂರಿನಲ್ಲಿ ಹರ್ಮಿನ್ ಮೋಗ್ಲಿಂಗ್ ರವರು ಮಂಗಳೂರು ಸಮಾಚಾರ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ್ದು ಇಂದಿನ ಪತ್ರಿಕಾ ದಿನಾಚರಣೆಗೆ ಕಾರಣವಾದರೂ ಅದು ಮತಪ್ರಚಾರದ ಪತ್ರಿಕೆಯಾಗಿತ್ತು, ನಿಜವಾಗಿಯೂ ಕರ್ನಾಟಕದಲ್ಲಿ 1888 ರಲ್ಲಿ ಬಿ ನರಸಿಂಗರಾಯರು ಮಂಗಳೂರಿನಲ್ಲಿ ಕನ್ನಡದ ಮೊಟ್ಟ ಮೊದಲ ದಿನಪತ್ರಿಕೆ ಸೂರ್ಯೋದಯ ಪ್ರಕಾಶಿಕವನ್ನು ಆರಂಭಿಸಿದ್ದೇ ನಿಜವಾದ ಕನ್ನಡ ಪತ್ರಿಕೋದ್ಯಮದ ಆರಂಭಯ
ಎನ್ನಬಹುದು, ಇದರ ವರದಿಗಾರಿಕೆಯನ್ನು ಡಿ ವಿ ಗುಂಡಪ್ಪನವರೂ ಮಾಡಿದ್ದರು ಎಂದ ಹೆಚ್ ಬಿ ಮಂಜುನಾಥ್ ಭಾರತ ಪತ್ರಿಕಾ ರಂಗದ ಪಿತಾಮಹ ಬಂಗಾಳದ ರಮಾನಂದ ಚಟರ್ಜಿ ಯವರು 1907ರಲ್ಲಿ ಮಾಡ್ರನ್ ರಿವ್ಯೂ ಆಂಗ್ಲಪತ್ರಿಕೆಯನ್ನು ಪ್ರಾರಂಭಿಸಿದ್ದು ಇತಿಹಾಸವಾಗಿದೆ, ಕರ್ನಾಟಕದ ಗಾಂಧಿ ಎಂದೆ ಜನಪ್ರಿಯ ರಾಗಿದ್ದ ಹರಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ 1906 ರಲ್ಲಿ ಧನುರ್ಧಾರಿ ಎಂಬ ಕನ್ನಡ ಪತ್ರಿಕೆಯನ್ನು ಆರಂಭಿಸಿದರು. Karnataka Union Of Working Journalists Association ಲೋಕಮಾನ್ಯ ಬಾಲಗಂಗಾಧರ ತಿಲಕರು ಕೇಸರಿ ಪತ್ರಿಕೆಯಲ್ಲಿ ಮರಾಠಿಯಲ್ಲಿ ಪ್ರಕಟಿಸುತ್ತಿದ್ದ ರಾಷ್ಟ್ರೀಯತೆಯನ್ನು ಉದ್ದೀಪನ ಗೊಳಿಸುವ ವರದಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹರಡೇಕರ್ ಮಂಜಪ್ಪನವರು ಧನುರ್ದಾರಿಯಲ್ಲಿ ಪ್ರಕಟಿಸುತ್ತಿದ್ದರು. 1908ರಲ್ಲಿ ದಾವಣಗೆರೆಯಲ್ಲಿ ತಮ್ಮ ಸ್ವಂತ ಮುದ್ರಣಾಲಯವನ್ನು ಸಹ ಮಂಜಪ್ಪನವರು ಆರಂಭಿಸಿದರು. ಪ್ರಜಾಪ್ರಭುತ್ವದ ಕಾವಲು ಕಾಯುವವರಂತೆ ನಾಲ್ಕನೇ ಸ್ತಂಭವಾಗಿ ಇರುವ ಪತ್ರಕರ್ತರು ಹಾಗೂ ಮಾಧ್ಯಮದವರು ನಿರಂಕುಶರೇನೂ ಅಲ್ಲ, ಭಾರತೀಯ ದಂಡ ಸಂಹಿತೆಯ 437 ನೇ ವಿಧಿಯ ಸಿ ಆರ್ ಪಿ ಸಿ 1993 ವಿಭಾಗ 95 ರ ಪ್ರಕಾರ ಇವರೂ ದಂಡನಾರ್ಹರು. ಪತ್ರಿಕಾ ಸ್ವಾತಂತ್ರ್ಯವೆಂಬುದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಬರುತ್ತದೆ ಹೀಗಾಗಿ ಪತ್ರಿಕೆಗಳವರಾಗಲಿ ಮಾಧ್ಯಮದವರಾಗಲಿ ಎಚ್ಚರಿಕೆಯಿಂದಲೂ ವ್ಯವಹರಿಸಬೇಕಿದೆ ಎಂದರು.
ಹರಡಿಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿಯವರು ಪತ್ರಿಕೆಯವರು ಮೌಲ್ಯಯುತ ವರದಿಗಾರಿಕೆಯಿಂದ ದೇಶದ ಆರ್ಥಿಕ ಅಭಿವೃದ್ಧಿ ಕಡೆಗೆ ಒತ್ತು ಕೊಡಬೇಕು, ಸರ್ಕಾರವನ್ನು ಉಳಿಸುವ ಅಥವಾ ಬೀಳಿಸುವ ಸಾಮರ್ಥ್ಯ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ಇದೆ, ಪತ್ರಕರ್ತರಿಗೆ ಆರೋಗ್ಯ ವಿಮೆ ಅಪಘಾತ ವಿಮೆ ದೊರೆಯಬೇಕು, ಸವಲತ್ತುಗಳನ್ನು ಒದಗಿಸುವಾಗ ತಾರತಮ್ಯ ಇರಬಾರದು ಎಂದರು.
ಮಾಜಿ ಮಹಾಪೌರ ಚಮನ್ ಸಾಬ್ ಮಾತನಾಡಿ ಪತ್ರಿಕೆಗಳಾಗಲಿ ಮಾಧ್ಯಮಗಳಾಗಲಿ ಸುಳ್ಳಿನ ಸಾಮ್ರಾಜ್ಯವಾಗದೆ ನಿಜ ವರದಿಗಾರಿಕೆಗೆ ಗಮನ ಕೊಡಬೇಕೆಂದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳನ್ನು ಉನ್ನತಿಗೆ ಕೊಂಡೊಯ್ಯುವ ಜವಾಬ್ದಾರಿ ಮಹತ್ತರವಾಗಿದೆ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲಿನ ಜನರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಪ್ರತಿಜ್ಞೆಯನ್ನು ಇಂತಹ ಆಚರಣೆಯ ದಿನ ಮಾಡಬೇಕು ಎಂದರು.
ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಇ ಎಂ ಮಂಜುನಾಥ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ವೃತ್ತಿ ಗೌರವವನ್ನು ವೃದ್ಧಿಸಿ ಕೊಳ್ಳುವಂತಹ ಕಾರ್ಯಗಳು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಂದ ಹೆಚ್ಚಾಗಿ ಆಗಬೇಕು ಎಂದರು.
ಸಂಘದ ಕಾರ್ಯದರ್ಶಿ ಫಕ್ರುದ್ದೀನ್ ನಿರೂಪಿಸಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಹಿರಿಯ ಪತ್ರಕರ್ತ ಚಂದ್ರಣ್ಣ, ಏಕಾಂತಪ್ಪ, ತಿಪ್ಪೇಸ್ವಾಮಿ, ಕೆಜಿ ಶಿವಕುಮಾರ್, ವೇದಮೂರ್ತಿ, ಚೆನ್ನಬಸವ ಶೀಲವಂತ್, ಅನಿಲ್ ಕುಮಾರ್, ಮುದ್ದಯ್ಯ, ಅಲ್ಲಾಭಕ್ಷಿ, ಮಂಜುನಾಥ ಕಾಡಜ್ಜಿ, ಕೃಷ್ಣೋಜಿ ರಾವ್, ನಿಶಾನಿಮಠ್, ಕೃಷ್ಣ ಸಾ ಮುಂತಾದವರು ಭಾಗವಹಿಸಿದ್ದು ಸಂಘದ ಖಜಾಂಚಿ ಬದ್ರಿಪ್ರಸಾದ್ ವಂದನೆ
ಸಲ್ಲಿಸಿದರು.
