Vidyabhinava Vidyaranya Bharati Swami ಇತ್ತೀಚೆಗೆ ರಾಜ್ಯದ ವಿವಿಧ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವ ಪ್ರಕರಣಗಳನ್ನು ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್ನ ಪೀಠಾಧಿಪತಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಖಂಡಿಸಿದ್ದು, ಈ ಘಟನೆಗಳು ತಮಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತ ಹಲವು ಭಿನ್ನ ಭಿನ್ನ ಸಂಸ್ಕೃತಿಗಳನ್ನು ಭಾವೈಕ್ಯದಿಂದ ಒಗ್ಗೂಡಿಸಿಕೊಂಡು ಬಂದಿರುವ ರಾಷ್ಟ್ರ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿ ಮತ್ತು ಕೋಮು ಪ್ರಚೋದನೆ ಮಾಡುತ್ತಾ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡುವ ಕೃತ್ಯಗಳು ನಡೆಯುತ್ತಿವೆ.
ಇಲ್ಲಿ ಎಲ್ಲ ಜಾತಿಗೂ ಅದರದೇ ಆದ ವೈಶಿಷ್ಟ್ಯ-ಸಂಸ್ಕೃತಿ, ಸಂಸ್ಕಾರ ಇರುತ್ತದೆ. ಜನಿವಾರ-ಶಿವದಾರಗಳು ಕೇವಲ ಜಾತಿಯ ಸಂಕೇತಗಳಲ್ಲ. ಅವರ ಇಡೀ ಬದುಕು. ಜಾತ್ಯತೀತತೆಯ ಹೆಸರಿನಲ್ಲಿ ಯಾವುದೇ ಜಾತಿ-ಧರ್ಮದ ಅವಹೇಳನ, ತಿರಸ್ಕಾರ ಸರಿಯಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಈ ಪ್ರಕರಣ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ನೋವುಂಟು ಮಾಡಿಲ್ಲ. ಇಡೀ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದೆ. ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳದೇ ಇಂತಹ ಕೃತ್ಯಗಳು ಮುಂದೆ ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಒತ್ತಾಯಿಸಿದ್ದಾರೆ.
Vidyabhinava Vidyaranya Bharati Swami ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿನಃ
ಪೀಠಾಧಿಪತಿಗಳು
ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ
ಶಂಕರಾಚಾರ್ಯ ಮಹಾಸಂಸ್ಥಾನಮ್, ಕೂಡಲಿ, ಶಿವಮೊಗ್ಗ.