Bapuji Institute of Hi-Tech Education ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೃತಕ ಬುದ್ಧಿಮತ್ತೆಯಿಂದಾಗಿ 85 ಮಿಲಿಯನ್ ಉದ್ಯೋಗಗಳು ಹೋಗುವ ಅಂದಾಜಿದ್ದರೂ ಆತಂಕ ಪಡಬೇಕಾದ ಕಾರಣವಿಲ್ಲ, ಏಕೆಂದರೆ ಇದು 97 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಅತಿಥಿ ಉಪನ್ಯಾಸಕ ಡಾ. ರಂಗರಾಜ್. ಜಿ. ಅಭಿಪ್ರಾಯಪಟ್ಟರು.
ಅವರಿಂದು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ವಾಣಿಜ್ಯ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ರಾಜ್ಯಮಟ್ಟದ ವಿದ್ಯಾರ್ಥಿಗಳ ಪ್ರಬಂಧ ಮಂಡನೆ ವಿಚಾರ ಸಂಕಿರಣ ‘ಪ್ರಜ್ಞಾ’ದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಮಾಹಿತಿಗಳ ಮಹಾಪೂರದ ವಿಶ್ಲೇಷಣೆ ಇಲ್ಲದೆ ವಾಣಿಜ್ಯ ಮತ್ತು ನಿರ್ವಹಣೆ ಸಾಧ್ಯವಿಲ್ಲ, ದೊಡ್ಡ ಪ್ರಮಾಣದ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಕೃತಕ ಬುದ್ಧಿಮತ್ತೆಯು ಸುಲಭವಾಗಿ ಕ್ಷಿಪ್ರವಾಗಿ ವಿಶ್ಲೇಷಿಸಬಲ್ಲದು, ಕೃತಕ ಬುದ್ಧಿಮತ್ತೆಯಲ್ಲಿ ಯಂತ್ರಗಳು ಹೊಸಹೊಸದನ್ನು ಸ್ವಯಂ ಕಲಿತು ಮಾಡಬಲ್ಲವಾಗಲಿವೆ, ಆರ್ಥಿಕತೆ, ಉತ್ಪಾದನೆ, ಮಾರುಕಟ್ಟೆ, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಎಲ್ಲ ಕ್ಷೇತ್ರದಲ್ಲೂ ನುರಿತ ಸಲಹೆಗಾರರಾಗಿ ಯಂತ್ರಮಾನವರು ಬರಲಿದ್ದಾರೆ, 407 ಬಿಲಿಯನ್ ಡಾಲರ್ ಅಂದರೆ ಸುಮಾರು 35 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ವಾರ್ಷಿಕ ಮಾರುಕಟ್ಟೆಯನ್ನು ಕೃತಕಬುದ್ಧಿಮತ್ತೆ ಹೊಂದಲಿದೆ, ಮಾನವರು ಬದಲಾಗಲು ಬಯಸದಿದ್ದರೂ, ಒಪ್ಪದಿದ್ದರೂ ತಂತ್ರಜ್ಞಾನಗಳು ಬದಲು ಮಾಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ವಿದ್ಯಾರ್ಥಿಗಳೇ ಬರೆದ ಪ್ರಬಂಧಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲ ಡಾ. ಬಿ. ವೀರಪ್ಪನವರು ವಾಣಿಜ್ಯ ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ದೈನಂದಿನ ಔದ್ಯಮಿಕ ವಿದ್ಯಮಾನಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು.
Bapuji Institute of Hi-Tech Education ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ರಾಜ್ಯ ಮಟ್ಟದ ಈ ವಿಚಾರ ಸಂಕಿರಣದಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು 65ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.
ವಿಚಾರ ಸಂಕಿರಣದ ವಿವರಗಳನ್ನು ಜ್ಞಾನೇಶ್ವರ ಸುಳಕೆ ನೀಡಿದರು. ತೀರ್ಪುಗಾರರಾಗಿ ಡಾ.ವಾಸುದೇವ ನಾಯಕ್, ಡಾ.ಸುಜಿತ್ ಕುಮಾರ್ ಎಸ್ ಹೆಚ್, ಡಾ. ಶ್ರುತಿ ಮಾಕನೂರು, ಡಾ. ಪ್ರಕಾಶ್ ಅಳಲಗೇರಿ, ಮೊಹಮ್ಮದ್ ಮುಂತಕ್ವೀಮ್, ಡಾ.ವಿನಾಯಕ ಪಾಟೀಲ್,ಡಾ.ರಮೇಶ್ ಚಂದ್ರಹಾಸ, ವಿಶಾಲ್ ಬೆಂಚಳಿ ಮುಂತಾದವರು ಆಗಮಿಸಿದ್ದು, ಅದಿಲ್ ಅತ್ತರ್ ಹಾಗೂ ಲಕ್ಷ್ಮಿ ಆರ್. ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸ್ಫೂರ್ತಿ ಸಿ ಕೆ, ಪ್ರಜ್ಞಾ ಎನ್ ಸಿ ಹಾಡಿದರೆ ಅತಿಥಿಗಳ ಪರಿಚಯವನ್ನು ಜಿ ವೈಷ್ಣವಿ ಮಾಡಿದರು. ವಿಚಾರ ಸಂಕಿರಣದ ನಿರ್ವಹಣೆಯನ್ನು ಬಿ ಬಿ ಮಂಜುನಾಥ, ಶ್ವೇತಾ ಬಿ ವಿ, ಲತಾ ಓ ಹೆಚ್, ನಾಗರಾಜ ಎಂ ಎಸ್, ಮಂಜುಳಾ ಎ ಎನ್, ನರೇಂದ್ರ ಡಿ ಆರ್, ಪ್ರಜ್ವಲ್ ಎ ಆರ್ ಮಾಡಿದರು. ಪ್ರಜ್ಞಾ ಪಾಟೀಲ್ ವಂದನೆ ಸಲ್ಲಿಸಿದರು.
-ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-