University of Agricultural and Horticultural Sciences ಗ್ರಾಮೀಣ ಉತ್ಪನ್ನಗಳನ್ನು ಆಧರಿಸಿ ಮಲೆನಾಡಿನಲ್ಲಿ ವೈವಿಧ್ಯಮಯ ಉದ್ದಿಮೆಗೆ ವಿಫುಲ ಅವಕಾಶಗಳಿವೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಆರ್.ಸಿ.ಜಗದೀಶ್ ಅಭಿಪ್ರಾಯಪಟ್ಟರು.
ಸಾಗರ ಪಟ್ಟಣದ ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ಕಾಲೇಜಿನ ದೇವರಾಜ ಅರಸು ಕಲಾಕೇಂದ್ರದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಾಣಿಜ್ಯ ವಿಭಾಗ ಮತ್ತು ರಾಯಲ್ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಯಾವುದೇ ಉದ್ದಿಮೆಯ ಯಶಸ್ಸಿಗೆ ಕೌಶಲ್ಯ ಅತ್ಯಗತ್ಯ ಎಂದರು.
ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬ ಆಸಕ್ತಿ ಕಾಲೇಜು ದಿನಗಳಲ್ಲಿ ಮೊಳಕೆಯೊಡೆಯಬೇಕು. ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ವಿಶೇಷ ಗುಣಗಳಿರುತ್ತವೆ. ಅವರ ಆಸಕ್ತಿಗೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪೋಷಣೆ ಮಾಡಬೇಕು. ಪ್ರತಿ ಗ್ರಾಮದಲ್ಲೂ ಉದ್ದಿಮೆ ಮಾಡಬೇಕು ಎಂಬ ಗುರಿ ಇರಬೇಕು. ದೇಶದಲ್ಲಿ ಪ್ರತಿವರ್ಷ 7 ಕೋಟಿ ವಿದ್ಯಾರ್ಥಿಗಳು ಹೊರಬರುತ್ತಾರೆ. ಅವರೆಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ಕೆಲವರು ಐಎಎಸ್, ಐಪಿಎಸ್ ಮಾಡುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವೀ ಉದ್ದಿಮೆದಾರರಾಗಲು ಸಾಧಕರ ಸಂಪರ್ಕ, ಕೌಶಲ್ಯ, ಹಣಕಾಸು ಲಭ್ಯತೆ ಇತ್ಯಾದಿ ಹುಡುಕಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಬದಲಾದ ಕಾಲಘಟ್ಟದಲ್ಲಿ ಗೂಗಲ್ನಲ್ಲಿ ನಮಗೆ ಬೇಕಾದ ಮಾಹಿತಿ ಸಿಗುತ್ತದೆ. ಉದ್ಯಮ ನಡೆಸಲು ಹಲವಾರು ತರಬೇತಿ ಸಂಸ್ಥೆಗಳೂ ಇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಉಚಿತ ತರಬೇತಿಗೆ ಯೋಜನೆಗಳಿವೆ. ಸರ್ಕಾರದಿಂದಲೂ ಅನೇಕ ಸವಲತ್ತುಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ತರಬೇತಿ ಮಾಹಿತಿ ಕೇಂದ್ರಗಳಿಲ್ಲ. ಕೃಷಿಗೆ ಸಂಬಂಧಿಸಿ 800 ಸ್ಟಾರ್ಟ್ಪ್ಗಳಿವೆ. ಮಲೆನಾಡಿನಲ್ಲಿ ಹಲಸು, ಅಗರಬತ್ತಿ ತಯಾರಿಕೆ, ಜೇನುಪೆಟ್ಟಿಗೆ ಇಟ್ಟು ತುಪ್ಪ ತಯಾರಿಕೆ, ಬೆಲ್ಲದ ಚಹಾ, ಚಿಕ್ಕಿ ತಯಾರಿಕೆ, ಕಬ್ಬು ಬೆಳೆಯ ಮೌಲ್ಯವರ್ಧನೆ, ಗೇರುಬೀಜ ಪ್ರೊಸೆಸಿಂಗ್, ಗೇರು ಹಣ್ಣಿನಿಂದ ಜ್ಯೂಸ್ ಇತ್ಯಾದಿ ತಯಾರಿಕೆ, ಕುರಿ ಸಾಕಾಣಿಕೆ, ಸಸ್ಯ ನರ್ಸರಿ, ಅಣಬೆ ಉತ್ಪನ್ನ, ವಿವಿಧ ರೀತಿಯ ಅವಲಕ್ಕಿ ತಯಾರಿಕೆ ಹೀಗೆ ವೈವಿಧ್ಯಮಯ ಉದ್ದಿಮೆಗಳಿಗೆ ಅವಕಾಶಗಳಿವೆ. ಕೆಲವು ವಸ್ತುಗಳ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಕಂಡುಕೊಳ್ಳಬೇಕು. ಉತ್ತಮ ಕೌಶಲ್ಯದಿಂದ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿ, ಈ ಕಾಲೇಜಿನಿಂದ ಈವರೆಗೆ ಸುಮಾರು 60 ಸಾವಿರ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹಲವಾರು ಜನರು ಸ್ವಂತ ಉದ್ದಿಮೆ ಮಾಡಿ ಹತ್ತಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಪ್ರಸ್ತುತ ಈ ವಿದ್ಯಾಲಯದಲ್ಲಿ 2500 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ನಾವು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ವಿಶ್ವವಿದ್ಯಾಲಯ ಮಟ್ಟದ ಕಾರ್ಯಕ್ರಮ ಮಾಡುವ ಮೂಲಕ ತರಗತಿಯ ಹೊರಗಿನ ವಿಷಯಗಳ ಕುರಿತು ಅರಿವು ಮೂಡಿಸುತ್ತಿದ್ದೇವೆ. 60 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿರುವ ಅತ್ಯುತ್ತಮ ಗ್ರಂಥಾಲಯ ಈ ಕಾಲೇಜಿನಲ್ಲಿದೆ. ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ವಾತಾವರಣ ಈ ಶಿಕ್ಷಣ ಸಂಸ್ಥೆಯಲ್ಲಿದೆ ಎಂದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಪಡೆದವರು ಸ್ವಯಂ ಉದ್ಯೋಗ ಮಾಡಿ ಹತ್ತಾರು ಜನರಿಗೆ ಉದ್ಯೋಗ ಕೊಡಬೇಕು ಎಂಬ ಗುರಿ ಹೊಂದಬೇಕು. ಕೃಷಿ ವಿಶ್ವವಿದ್ಯಾಲಯವು ವಿವಿಧ ರೀತಿಯ ರೈತಸ್ನೇಹಿ ಸಂಶೋಧನೆ ಕೈಗೊಳ್ಳಬೇಕು. ಇದರಿಂದ ಕಡಿಮೆ ಖರ್ಚಿನಲ್ಲಿ ರೈತಾಪಿ ಕೆಲಸಗಳು ಆಗುವಂತಾಗಬೇಕು. ವಿದ್ಯಾರ್ಥಿಗಳು ಸ್ವಂತ ಉದ್ಯೋಗ ಮಾಡುವತ್ತ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಯಶಸ್ವೀ ಉದ್ದಿಮೆದಾರರಾದ ರಾಯಲ್ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ನ ಅಬ್ದುಲ್ ಜಲೀಲ್, ಫೆನಿಕ್ಸ್ ಪ್ಯೂರಿಫೈಡ್ ವಾಟರ್ನ ಬಿ.ಎ.ಇಂದೂದರ, ಸುಗಂಧಿ ಅಗರಬತ್ತಿಯ ಎಸ್.ಚಂದ್ರಮೋಹನ್, ಶ್ರೀ ರಾಘವೇಂದ್ರ ಮೆಡಿಕಲ್ ಗ್ರೂಪ್ನ ರಾಜೇಶ್ ಸಿ.ಆರ್., ಸಹ್ಯಾದ್ರಿ ನರ್ಸರಿಯ ಗಿರೀಶ್ ಹಕ್ರೆ, ಎನ್.ಜಿ.ಪ್ರೈವೇಟ್ ಕೇರ್ ನ ವಾಣಿ ಅರುಣ್, ಸಿರಿ ಫುಡ್ಸ್ ಎಂಡ್ ಬ್ರಿವರೇಜ್ನ ಗಿರೀಶ್ ಕೆ.ಎಚ್., ಲಕ್ಸ್ ಇವೆಂಟ್ ಪ್ಲೇನರ್ನ ಸಮರ್ಥ ಬಡ್ಕುಮನೆ, ಶ್ರೀ ಸಿದ್ದಿವಿನಾಯಕ ಹೋಮ್ ಕ್ಯಾಟರಿಂಗ್ನ ರಾಮಚಂದ್ರ ಎಸ್.ಕೆ. ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಆರ್.ಜಯಂತ್, ಖಜಾಂಚಿ ಕೆ.ವೆಂಕಟೇಶ್ ಕವಲಕೋಡು ಹಾಜರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀಶ್ ಎ.ಎಸ್. ಸ್ವಾಗತಿಸಿದರು. ಲಕ್ಷ್ಮೀ ಸನ್ಮಾನಿತರನ್ನು ಪರಿಚಯಿಸಿದರು. ಡಾ.ಸುಮುಖ ಪಿ.ಎಸ್. ವಂದಿಸಿದರು. ಡಾ.ರಾಘವೇಂದ್ರ ನಿರೂಪಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ `ಉದ್ದಿಮೆಯಲ್ಲಿ ಎದುರಾಗುವ ತೊಂದರೆಗಳೇನು ?’ ವಿಷಯ ಕುರಿತು ನಾರಿಶಕ್ತಿ ಪ್ರಶಸ್ತಿ ಪುರಸ್ಕೃತ ನೊಮಿಟೊ ಕಾಮದಾರ್ ಮಾತನಾಡಿದರು. ಮಲ್ಲಿಕಾ ಆಟೊ ಸೆಂಟರ್ನ ಗುರುಪ್ರಸಾದ್ ಕೆ., ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್.ಜಯಂತ್ ಉಪಸ್ಥಿತರಿದ್ದರು.
ಉದ್ಯಮಶೀಲತೆಯ ಅವಕಾಶಗಳು ಕುರಿತ ಗೋಷ್ಠಿಯಲ್ಲಿ ಮಂಜುನಾಥ ಸುವರ್ಣಗದ್ದೆ ಮಾತನಾಡಿದರು. ಉದ್ಯಮಿಗಳಾದ ಎಸ್.ರವೀಂದ್ರ ಭಟ್, ಇಂದೂದರ ಬಿ.ಎ., ಗಿರೀಶ್ ಹಕ್ರೆ, ಕೆ.ವೆಂಕಟೇಶ್ ಭಾಗವಹಿಸಿದ್ದರು.