Rotary Club Shivamogga ಇಂದು ಆರೋಗ್ಯವೆ ಭಾಗ್ಯ. ಪ್ರತಿನಿತ್ಯದ ಜಂಜಾಟದಿಂದ, ಆಹಾರದ ವ್ಯತ್ಯಾಸದಿಂದಾಗಿ ಮಧ್ಯವಯಸ್ಕರಿಗೆ ಹಲವಾರು ತೊಂದರೆ ಉಂಟಾಗುತ್ತಿದ್ದು, ಅದರ ನಿವಾರಣೆಗೆ ಆಗಿಂದಾಗೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಉಲ್ಬಣ ಆಗುವ ಮುಂಚಿತವಾಗಿ ಪರಿಹಾರ ಕಂಡು ಕೊಳ್ಳಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷರಾದ ರೊ. ರೂಪ ಪುಣ್ಯಕೋಟೆ ಹೇಳಿದರು.
ಕೃತ್ವಿ ಆಯುರ್ವೇದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಂಧಿ ಮತ್ತು ಮೂಳೆ ನೋವುಗಳ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಿಲೆ ಬರುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ರೋಟರಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಮೂಳೆ ಸಾಂಧ್ರತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಡಾ. ಪ್ರಕೃತಿ ಮಂಚಾಲೆ ಮಾತನಾಡಿ, ನಮ್ಮ ಕೃತ್ವಿ ಆಯುರ್ವೇದ ಪ್ರಾರಂಭವಾಗಿ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ನಾಗರೀಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿ, ಗುಫಿಕ್ ಬಯೋ ಸೈನ್ಸ್ ರವರ ಪ್ರಯೋಜಕತ್ವದಲ್ಲಿ ಉಚಿತವಾಗಿ ಬಿ.ಎಂ.ಡಿ.ಪರೀಕ್ಷೆ ಮೂಲಕ ಮಂಡಿ, ಭುಜ, ಕೈ-ಕಾಲು, ಕುತ್ತಿಗೆ, ಕೀಲು ನೋವುಗಳ ತಪಾಸಣೆ ಮಾಡಲಾಗುತ್ತಿದೆ ಎಂದರು.
ತಾಂತ್ರಿಕ ಯುಗದಲ್ಲಿ ಮನುಷ್ಯ ಚಟುವಟಿಕೆಯಿಂದ ದೂರವಾಗುತ್ತಿದ್ದು, ಪೌಷ್ಟಿಕ ಆಹಾರ ಉಪಯೋಗಿಸದಿರುವುದು, ಎಲ್ಲಾ ಕೆಲಸಗಳಿಗೂ ಯಂತ್ರಗಳನ್ನು ಉಪಯೋಗಿಸುತ್ತಿರುವುದರಿಂದ ದೇಹ ದಂಡಿಸುವುದು ಕಡಿಮೆಯಾಗಿ, ಹಲವಾರು ಕೀಲು ನೋವುಗಳು ಚಿಕ್ಕ ವಯಸ್ಸಿನಲ್ಲೆ ಬರುತ್ತಿದೆ. ಅದನ್ನು ತಡೆಗಟ್ಟಲು ಆಗಿಂದಾಗೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಮೂಳೆ ಸವಕಳಿ ತಡೆಗಟ್ಟಲು ಸೊಪ್ಪು, ತರಕಾರಿ, ಮೊಟ್ಟೆ ಯಥೇಚ್ಛವಾಗಿ ಬಳಸಬೇಕು. ಜಂಕ್ ಫುಡ್ ಕಡಿಮೆ ಬಳಸುವುದರೊಂದಿಗೆ, ದೇಹ ದಂಡಿಸಲು ವ್ಯಾಯಾಮ, ಕನಿಷ್ಟ ವಾಯು ವಿಹಾರ ಪ್ರತಿ ನಿತ್ಯ ಒಂದು ಗಂಟೆ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿಯಿಂದ ರೋಗ ಮುಕ್ತರಾಗಿ ಬಾಳಬಹುದು ಎಂದು ಸಲಹೆ ನೀಡಿದರು.
Rotary Club Shivamogga ರೋಟರಿ ಮಾಜಿ ಸಹಾಯಕ ಗವರ್ನರ ಜಿ.ವಿಜಯಕುಮಾರ್, ಆರೋಗ್ಯ ಎಲ್ಲರಿಗೂ ಅತಿಮುಖ್ಯ. ಪ್ರಸ್ತುತ ದಿನದಲ್ಲಿ ಯಾರ ಬಳಿಯೂ ಸಮಯ ಇಲ್ಲದಂತಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಆಗಿಂದಾಗ್ಗೆ ವೈದ್ಯರ ಬಳಿ ಹೋಗಿ ಸಲಹೆ ಪಡೆದುಕೊಳ್ಳದೇ, ಆರೋಗ್ಯದ ಮೇಲೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೌಷ್ಟಿಕಾಂಶಯುಕ್ತ ಆಹಾರದ ಸೇವನೆ ಜೊತೆಗೆ ದೈಹಿಕ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುವುದರಿಂದ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸುಶ್ಮಿತ ಪ್ರಾರ್ಥನೆ ನೆರವೇರಿಸಿಕೊಟ್ಟರು. ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತ ಸ್ವಾಗತಿಸಿ, ಸುರೇಶ್ ನಿರೂಪಿಸಿದರು. ಭಾರದ್ವಾಜ್, ಸತ್ಯನಾರಾಯಣ, ರೇಣುಕಾರಾದ್ಯ, ವಾಗೇಶ್, ವೆಂಕಟೇಶ್ ನಾಯಕ್, ಪದ್ಮಾವತಿ ಮುಂತಾದವರು ಇದ್ದರು. ಸುಮಾರು ಇನ್ನೂರೈವತ್ತು ಮಂದಿ ಈ ಶಿಬಿರದ ಸದುಪಯೋಗ ಪಡೆದುಕೊಂಡರು.