ಹಿಂದುಳಿದ ಸಮಾಜಗಳು ಒಗ್ಗಟ್ಟಾಗಬೇಕಿದೆ. ಆ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಸಹಯೋಗದೊಂದಿಗೆ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ಸಮಾಜಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿಯಾಗಿದೆ. ಅದರೆ ಈ ಸಮಾಜಗಳು ಆರ್ಥಿಕವಾಗಿ , ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿರುವುದು ವಿಷಾದನೀಯ. ಆದರಿಂದ ನೀವೆಲ್ಲಾ ಮುಂದೆ ಬರಬೇಕು ಎಂದರು.
ಈ ಸಮಾಜವು ಕೇವಲ ಸೇವೆಗೆ ಮಾತ್ರ ಸಿಮೀತವಾಗದೆ ಆರ್ಥಿಕವಾಗಿ ಸದೃಢವಾಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಅದರ ಫಲವನ್ನು ನೀವೆಲ್ಲಾ ಪಡೆಯಬೇಕು. ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರು.
೨೫೦೦ ವರ್ಷಗಳ ಇತಿಹಾಸ ಈ ಸಮಾಜಕ್ಕೆ ಇದೆ. ಶರಣ ಬಸವೇಶ್ವರರು ಸೇರಿದಂತೆ ಅನೇಕರಿಗೆ ತಮ್ಮ ಆಸ್ಥಾನದಲ್ಲಿ ಸ್ಥಾನ ನೀಡಿದ ಬಿಜ್ಜಳದೇವನು ಕೂಡ ಈ ಸಮಾಜಕ್ಕೆ ಸೇರಿದವರು. ಅಂತಹ ಶ್ರೇಷ್ಠ ಕುಲದಲ್ಲಿ ಹುಟ್ಟಿದ ನೀವೇ ಧನ್ಯರು. ಸವಿತಾ ಮಹರ್ಷಿ ಅವರ ಸಾಹಿತ್ಯ, ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ. ಅವರು ಹೇಳಿದಂತೆ ಕಾಯಕಕ್ಕೆ ಮೌಲ್ಯ ಕೊಡಬೇಕು. ಗೌರವ ಕೊಡಬೇಕು ಎಂದು ಹೇಳಿದರು.
Guarantee scheme ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಡಾ. ಬಿ. ಆರ್.ಅಂಬೇಡ್ಕರ್ರವರು ಸಂವಿಧಾನ ರಚಿಸಿದ ಉದ್ದೇಶವೇ ಇಂತಹ ಸಮಾಜಗಳು ತಮ್ಮ ಹಕ್ಕನ್ನು ಪಡೆಯಬೇಕೆಂದು. ಆ ನಿಟ್ಟಿನಲ್ಲೆ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವ ಮತ್ತು ಅಗತ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ. ಹಿಂದುಳಿದ ಸಮಾಜಗಳು ಈ ಜಗತ್ತಿನಲ್ಲಿ ಮುಂದೆ ಬರಬೇಕೆಂದರೆ ಶಿಕ್ಷಣ ಪಡೆಯಲೆಬೇಕು. ನಿಮ್ಮೊಳಗಿನ ಕೀಳರಿಮೆ ಬಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹಾಗೂ ಹೋರಾಟದ ಹಾದಿಯಲ್ಲಿ ಎಲ್ಲವನ್ನು ಪಡೆಯಬೇಕು ಎಂದ ಅವರು ಉಜ್ವಲ ಭವಿಷ್ಯ ಮುಂದಿನ ದಿನಗಳಲ್ಲಿ ನಿಮಗಾಗಿ ಕಾಯುತ್ತಾ ಇದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಜಿ. ರಘುನಂದನ್ ಮಾತನಾಡಿ, ಶಿವನ ಬಲಗಣ್ಣಿನಿಂದ ಹುಟ್ಟಿದವರು ನಾವು. ನಮ್ಮ ವೃತ್ತಿಯನ್ನು ಗೌರವದಿಂದ ಮಾಡುತ್ತಿದ್ದೇವೆ. ನಮ್ಮನ್ನು ನಿಂದನೆ ಮಾಡುವವರು ಹೊಗಳುವ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೂ ನಮ್ಮ ಕಾಯಕವನ್ನು ಶ್ರದ್ದೆಯಿಂದ ಮಾಡುತ್ತಾ ಹೋಗಬೇಕು. ನಾವು ಹುಟ್ಟಿರೋದೆ ಪ್ರಕೃತಿಯಿಂದ ಅದರೊಟ್ಟಿಗೆ ನಡೆಯೋಣ. ನಾವು ನಮಗಾಗಿ ಕೆಲಸ ಮಾಡದೆ ಸಮಾಜಕ್ಕಾಗಿ ದುಡಿಯುತ್ತಿದ್ದೇವೆ ಎಂದರು.
ನಾವೆಲ್ಲಾ ಭಾರತೀಯರು, ಹಿಂದುಗಳು ಎಂದೆಲ್ಲಾ ಹೇಳಿಕೊಳ್ಳುತ್ತೇವೆ. ಆದರೆ ಹಿಂದೂಗಳೇ ನಮ್ಮನ್ನು ತಿರಸ್ಕಾರ ಮಾಡುತ್ತಿದ್ದಾರೆ. ಅವರನ್ನೆಲ್ಲಾ ಶುದ್ಧ ಮಾಡುವ ನಮ್ಮನ್ನು ಅಶುದ್ದರಂತೆ ಕಾಣುತ್ತಾರೆ. ವೃತ್ತಿಯಿಂದ ಮಾತ್ರ ಬೇರೆ ಬೇರೆಯಾಗಿದ್ದೇವೆ. ಆದರೆ ನಾವೆಲ್ಲ ಒಂದೇ. ಹಿಂದುಳಿದ ಸಮಾಜಗಳೆಲ್ಲಾ ಒಗ್ಗೂಡಬೇಕು. ವೈಯಕ್ತಿಕ ಯೋಚನೆ ಬಿಟ್ಟು, ಸಮಾಜದ ಬಗ್ಗೆ ಯೋಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷರಾದ ಎಂ.ಜಿ.ಬಾಲು, ತಾಲ್ಲೂಕು ಸವಿತಾ ಸಮಾಜ ಅಧ್ಯಕ್ಷರಾದ ಬಿ.ಎನ್.ಧರ್ಮರಾಜ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್ ಹಾಗೂ ಸಮಾಜದ ಮುಖಂಡರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Guarantee scheme ಗ್ಯಾರಂಟಿ ಯೋಜನೆಗಳ ಲಾಭವನ್ನು ಸವಿತಾ ಸಮಾಜದವರೂ ಪಡೆಯಬೇಕು- ಸಿಎಸ್.ಚಂದ್ರ ಭೂಪಾಲ್
Date: