Thirahalli Police ತೀರ್ಥಹಳ್ಳಿಯಲ್ಲಿ ಪದವಿ ಓದುತ್ತಿದ್ದ ಯುವಕನೊಬ್ಬ ತುಂಗಾ ನದಿಯ ದಡದಲ್ಲಿ ಬೈಕ್ ಬಿಟ್ಟು ಕಣ್ಮರೆಯಾಗಿದ್ದಾನೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.
ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಯದೀಪ್ (೨೪ ವರ್ಷ) ನಾಪತ್ತೆಯಾಗಿದ್ದು, ಆತನ ವಾಟ್ಸಾಪ್ ಸ್ಟೇಟಸ್ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗುತ್ತಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಯದೀಪ್ ತನ್ನ ವಾಟ್ಸಾಪ್ ಸ್ಟೇಟಸ್ಸಿನಲ್ಲಿ “ಇನ್ನು ಸ್ವಲ್ಪ ದಿನದಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಳ್ಳೆಯ ವಿದ್ಯಾರ್ಥಿ ಕೂಡ, ಬ್ಯಾಂಕ್ ಪರೀಕ್ಷೆ ಬರೆಯುವ ಚಾನ್ಸ್ ಕೂಡ ಇತ್ತು. ಆದರೆ ಅದು ನೆನಪು ಮಾತ್ರ.
ಅಪ್ಪ ಅಮ್ಮ ಸಂಜಯ್ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮ ಆಸೆ ನಂಬಿಕೆ ಎಲ್ಲಾ ಹಾಳು ಮಾಡುತ್ತಿದ್ದೀನಿ ಅಂತ ಬೇಜಾರಾಗಬೇಡಿ, ನನ್ನಸಾಲ ನಿಮ್ಮ ಮೇಲೆ ಹಾಕುತ್ತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ನನ್ನ ಬೈಕ್ ಮಾರಿ ಸ್ವಲ್ಪ ಅಡ್ಡಸ್ಟ್ ಮಾಡಿ ಎಲ್ಲರಿಗೂ ಕೊಡಿ.
ಒನ್ ಸೈಡ್ ಲವ್ ಮಾಡಿದ್ದೆ, ಅವಳು ಒಪ್ಪಿಲ್ಲ. ಒಂದು ಸಣ್ಣ ತಪ್ಪು ಇವತ್ತು ನನ್ನನ್ನು ಸಾವಿನ ಕಡೆ ತಳ್ಳುತ್ತಿದೆ.
Thirahalli Police ಒಳ್ಳೆ ಕೆಲಸ ಹುಡುಕುವುದರಲ್ಲೂ ವಿಫಲನಾದೆ. ಇತ್ತೀಚಿನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೇರೇಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ ಊರು ಬಿಡೊದಕ್ಕಿಂತ ಸಾವೇ ಮುನ್ನುಗ್ಗಿ ಕರೆಯಿತು.
ಎಲ್ಲರಿಗೂ ಸಾರಿ, ಪ್ಲೀಸ್ ಕ್ಷಮಿಸಿ ಬಿಡಿ, ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ” ಎಂದು ವಾಟ್ಸಪ್ ಸ್ಟೇಟಸ್ನಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಹುಡುಕುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶವ ಹುಡುಕುವಲ್ಲಿ ನಿರತವಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
