Tirthahalli Court ಜಿಂಕೆ ಬೇಟೆಯಾಡಿದ ಆರೋಪ ಹಾಗೂ ಅದರ ಮಾಂಸ ಸಾಗಣೆಗೆ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಕೋರ್ಟ್ ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.
ಪ್ರಕರಣ ಸಂಬಂಧ ಒಟ್ಟು ನಾಲ್ವರಿಗೆ ತೀರ್ಥಹಳ್ಳಿಯ ಒಂದನೇ ಹೆಚ್ಚುವರಿ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿ ಆದೇಶ ಮಾಡಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಮಕ್ಕಿಬೈಲು ಗ್ರಾಮದ ಪ್ರಕಾಶ ಗೌಡ , ಹರೀಶ ಗೌಡ , ಎಸ್.ಅಂಬರೀಷ ಹಾಗೂ ಸಿಂಗನಬಿದಿರೆ ಸಮೀಪದ ಶೆಡ್ಗಾರು ಗ್ರಾಮದ ದಯಾನಂದ ಗೌಡ ಶಿಕ್ಷೆಗೊಳಗಾದವರು ಎಂದು ತಿಳಿದು ಬಂದಿದೆ.
Tirthahalli Court 2018ರ ಆಗಸ್ಟ್ 2ರಂದು ಸಕ್ರೆಬೈಲು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಶೆಡ್ಗಾರು ರಸ್ತೆಯಲ್ಲಿ ಬರುತ್ತಿದ್ದ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ, ಅದರಲ್ಲಿ ಬೇಟೆ ಪತ್ತೆಯಾಗಿತ್ತು. ಅದರಲ್ಲಿದ್ದ ಚೀಲವೊಂದರಲ್ಲಿ 15 ಕೆ.ಜಿ. ಜಿಂಕೆ ಮಾಂಸ, ಕತ್ತಿ ಹಾಗೂ ಚೂರಿ ಪತ್ತೆಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಮುಗಿದು ಕೋರ್ಟ್ ಆರೋಪಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.