Pace College ಪೇಸ್ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ವಿಜ್ಞಾನ ಎಂಬ ವಿಷಯದ ಕುರಿತಾದ ಅಂಶಗಳನ್ನು ಮಕ್ಕಳೇ ಪ್ರಸ್ತುತ ಪಡಿಸುವ ಮೂಲಕ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.
ಅಗಾಧವಾದ ಜ್ಞಾನರಾಶಿಯನ್ನು ಹೊಂದಿದ ಸಂಸ್ಕೃತ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವುದರ ಜೊತೆಗೆ ಬಹು ಹಿಂದೆಯೇ ಸಂಸ್ಕೃತ ಗ್ರಂಥಗಳಲ್ಲಿ ಹೇಳಿದ ವಿಜ್ಞಾನದ ಸಂಗತಿಗಳಾದ ವೇದಗಣಿತ, ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ,ಜೀವಶಾಸ್ತ್ರ ಹಾಗೂ ಆಯುರ್ವೇದ ವಿಜ್ಞಾನದ ಸಂಗತಿಗಳನ್ನು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳೇ ಪ್ರಸ್ತುತಪಡಿಸುವ ಮೂಲಕ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿತವಾದ ಅಂಶಗಳನ್ನು ತಿಳಿಸಿಕೊಟ್ಟರು.
ಬಹು ಹಿಂದೆಯೇ ನಮ್ಮ ಪೂರ್ವಜರು ವಿಜ್ಞಾನದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ.
ದಶಾವತಾರದ ವಿಷಯದಲ್ಲಿ ಜೀವರಾಶಿಯ ಬೆಳವಣಿಗೆಯ ಸಂಗತಿಯಾಗಿರಬಹುದು, ಪೈಥಾಗೋರಸ್ ನ ಪ್ರಮೇಯವಾಗಿರಬಹುದು, ರಸಾಯನಶಾಸ್ತ್ರದ ಪಾದರಸದ ಕುರಿತಾಗಿರಬಹುದು, ಲೋಹ ಶುದ್ಧೀಕರಣ, ವೇದಗಣಿತ, ಭೌತಶಾಸ್ತ್ರದ ಬೆಳಕಿನ ವೇಗವೇ ಮೊದಲಾದ ಸಂಗತಿಗಳನ್ನು ಬಹು ವಿಸ್ತಾರವಾಗಿ ತಿಳಿಸುವಲ್ಲಿ ಯಶಸ್ವಿಯಾದರು.
ವಿಜ್ಞಾನದ ವಿದ್ಯಾರ್ಥಿಗಳಾದ ನಾವು ಇವುಗಳಿಂದ ಪ್ರೇರೇಪಿತರಾಗಿ ಜರ್ಮನಿಯೇ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಸ್ಕೃತಕ್ಕೆ ಮಹತ್ವವನ್ನು ನೀಡುತ್ತಿದ್ದಾರಲ್ಲ ಅದರಂತೆ ನಾವು ಕೂಡ ಸಂಸ್ಕೃತಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರಕುವಂತೆ ಮಾಡಬಹುದು ಎಂದು ಹೇಳಿದರು. ಇದನ್ನು ದ್ವಿತೀಯ ಪಿ. ಯು ವಿದ್ಯಾರ್ಥಿಗಳಾದ ನಂದನ್ ಕೌಡಿಕಿ, ನಚಿಕೇತ್, ಅಭಿನವ್ ಶರ್ಮಾ, ಚನ್ನರಾಜ್, ಶ್ರಿಯಾ, ಅಮೃತ ಹಾಗೂ ಕೇದಾರ್ ಇವರುಗಳು ವಿಜ್ಞಾನದ ವಿಷಯದ ಕುರಿತಾಗಿ ಪ್ರಸ್ತುತಪಡಿಸಿದರು.
Pace College ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿಗಳು , ಕಾಲೇಜಿನ ಪ್ರಾಚಾರ್ಯರೂ ಆದ ಪ್ರೊ.ಬಿ.ಎನ್. ವಿಶ್ವನಾಥಯ್ಯನವರು ವಿದ್ಯಾರ್ಥಿಗಳ ಈ ಕಾರ್ಯವನ್ನು ಶ್ಲಾಘಿಸುತ್ತಾ ಸಂಸ್ಕೃತ ದಿನದ ಪ್ರಯುಕ್ತ ಆಚರಿಸಿದ ಕಾರ್ಯಕ್ರಮ ಅರ್ಥಗರ್ಭಿತವಾಗಿತ್ತು. ವೈಜ್ಞಾನಿಕವಾದ ಈ ಸಂಸ್ಕೃತ ಭಾಷೆಯ ಮಹತ್ವವನ್ನು ಭಾರತದಲ್ಲಿ ಎಲ್ಲರೂ ತಿಳಿದು ಇದನ್ನು ಇನ್ನೂ ಅಧಿಕವಾಗಿ ಅಧ್ಯಯನ ಮಾಡುವಂತೆ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಮೈತ್ರೇಯಿ, ಕೇಶವಮೂರ್ತಿ, ಬಸವರಾಜು ಕೆ.ಆರ್., ಪ್ರಭಂಜನ್ ಅವರು ಉಪಸ್ಥಿತರಿದ್ದರು.
ಸೈಯದ್ ಮೂಸಾ ಸ್ವಾಗತಿಸಿದರು, ಕುಮಾರಿ ಶರಣ್ಯ ಪ್ರಾರ್ಥಿಸಿದರು, ಸೂರ್ಯಕುಮಾರ್ ವಂದಿಸಿದರು, ರಿಷಿ ಹಾಗೂ ಫಲ್ಗುಣಿ ಕಾರ್ಯಕ್ರಮ ನಿರೂಪಿಸಿದರು. ಸಮೃದ್ಧಿ ನಾಯಕ್, ಮುಂಗಾರು, ಅಮೂಲ್ಯ ಬಾಯರ್ ಹಾಗೂ ರಕ್ಷಾ ರಾವ್ ಸಂಸ್ಕೃತ ಗೀತೆಗಳ ಗಾಯನ ಮಾಡಿದರು.