Human Fraternity Forum ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ ಸಮಾಜದಲ್ಲಿ ಬಲವಾಗಿ ಬೇರೂರಿವೆ. ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುವ ಕಾರ್ಯ ಪ್ರಜ್ಞಾವಂತರ ಜವಾಬ್ದಾರಿ ಎಂದು ಮಾನವ ಬಂಧುತ್ವ ವೇದಿಕೆ ಸೊರಬ ತಾಲೂಕು ಅಧ್ಯಕ್ಷ ರಾಜೇಶ್ ಸಿ. ಕಾನಡೆ ಹೇಳಿದರು.
ಆಯನೂರಿನ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಆಸರೆ ಮಹಿಳಾ ಸಂಘ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಹಮ್ಮಕೊಂಡ ಬಸವ ಪಂಚಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಗರ ಪಂಚಮಿ ಹಬ್ಬದ ಆಚರಣೆ ಹೆಸರಿನಲ್ಲಿ ಹುತ್ತ ಮತ್ತು ಕಲ್ಲು ನಾಗರ ಮೂರ್ತಿಗೆ ಹಾಲು, ನೈವೇದ್ಯ ಅರ್ಪಿಸಿ ದುಂದು ವೆಚ್ಚ ಮಾಡುವುದರಿಂದ ಲಕ್ಷಾಂತರ ಲೀಟರ್ ಹಾಲು ಮಣ್ಣು ಪಾಲು ಆಗುತ್ತಿದೆ. ಇದರಿಂದ ಯಾರಿಗೆ ಸಹ ಉಪಯೋಗವಿಲ್ಲ.
ಇದರ ಬದಲಾಗಿ ಬಡ ಮಕ್ಕಳು, ರೋಗಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು, ಹಣ್ಣು ನೀಡಿದರೆ ದೇವರಿಗೆ ನಿಜವಾದ ಪೂಜೆ ಸಲ್ಲಿಸಿದಂತಾಗುತ್ತದೆ. ಮೌಢ್ಯತೆ ವಿರುದ್ಧ ಸಮಾಜದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲರಿಂದ ನಡೆಯಬೇಕು ಎಂದರು.
ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದ್ದು, ಮಾನವತವಾದವೇ ನಮ್ಮ ಧರ್ಮ ಎಂಬ ಉದ್ಧೇಶದಿಂದ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಅಪೌಷ್ಟಿಕತೆಯಿಂದ 2023 ರಲ್ಲಿ ಸುಮಾರು 2.23 ಲಕ್ಷ ಮಕ್ಕಳು ಬಳಲುತ್ತಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೃಢಪಡಿಸಿತ್ತು. ಈ ನಿಟ್ಟಿನಲ್ಲಿ ಹಬ್ಬಗಳಲ್ಲಿನ ಮೌಢ್ಯತೆ ತೊಲಗಿಸಬೇಕು. ಕಲ್ಲಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಪಠ್ಯ ಪರಿಕರಗಳನ್ನು ಮಾನವ ಬಂಧುತ್ವ ವೇದಿಕೆಯಿಂದ ವಿತರಿಸಲಾಯಿತು.
Human Fraternity Forum ಆಸರೆ ಮಹಿಳಾ ಸಂಘದ ಅಧ್ಯಕ್ಷೆ ಆರ್. ಶಿಲ್ಪಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಲತಾ, ಆಸರೆ ಮಹಿಳಾ ಸಂಘದ ಕಾರ್ಯದರ್ಶಿ ವಿಶಾಲಾಕ್ಷಮ್ಮ, ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ. ನಾಗರಾಜಪ್ಪ, ಮಾನವ ಬಂಧುತ್ವ ವೇದಿಕೆ ಗುಡುಗಿನಕೊಪ್ಪ ಗ್ರಾಮ ಸಂಚಾಲಕ ವೀರಭದ್ರ ಸ್ವಾಮಿ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಸೊರಬ ಕಾರ್ಯದರ್ಶಿ ಟಿ.ಎಚ್. ಲತಾ ಸೇರಿದಂತೆ ಅಂಗನವಾಡಿ ಸಿಬ್ಬಂದಿ ಮತ್ತು ಸ್ಥಳೀಯ ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.