Manasadhara Trust ಮಾನಸಾಧಾರ ಟ್ರಸ್ಟ್, ಜನ ಶಿಕ್ಷಣ ಸಂಸ್ಥೆ, ಶಿವಮೊಗ್ಗ ಹಾಗೂ ಅಕ್ಷರ ಫೌಂಡೇಶನ್, ಬೆಂಗಳೂರು ಇವರ ಸಹಯೋಗದಲ್ಲಿ ಗಣಿತ ವಿಷಯದ ಒಂದು ದಿನದ ಕಾರ್ಯಾಗಾರ ಮತ್ತು ಸೌಂದರ್ಯ ವರ್ಧಕ ಕೋರ್ಸ್ ತರಬೇತಿಯ ಉದ್ಘಾಟನಾ ಸಮಾರಂಭವನ್ನು ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶಿವಮೊಗ್ಗದ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎಸ್.ವೈ.ಅರುಣಾದೇವಿಯವರು ಮಾತನಾಡಿ “ಇಂದಿನ ಯುಗದಲ್ಲಿ ಕೇವಲ ಶಾಲಾ ಶಿಕ್ಷಣವೇ ಅಲ್ಲದೇ ಇತರೆ ಕೌಶಲ್ಯಗಳನ್ನು ಕಲಿಯಬೇಕಿದೆ. ಕಂಪ್ಯೂಟರ್ ಕೋರ್ಸ್, ಸೌಂದರ್ಯ ವರ್ಧಕ ಕೋರ್ಸ್, ಹೊಲಿಗೆ ತರಬೇತಿ ಕೋರ್ಸ್ ಇವುಗಳೆಲ್ಲವೂ ಸ್ವಾವಲಂಬಿಗಳಾಗಿ ಬದುಕಲು ಸಹಾಯ ಮಾಡುತ್ತವೆ. ಆದ್ದರಿಂದ ಇಂತಹ ಕೌಶಲ್ಯಗಳನ್ನು ಕಲಿಯಲು ಇಂದಿನ ಯುವ ಜನತೆ ಮನಸ್ಸು ಮಾಡಬೇಕಿದೆ” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬೆಂಗಳೂರಿನ ಅಕ್ಷರ ಫೌಂಡೇಶನ್ ನ ಕಾರ್ಯಕ್ರಮಾಧಿಕಾರಿಗಳಾದ ಶ್ರೀಯುತ ಹನುಮಂತರಾವ್ ಕಣ್ಣಿಯವರು ಮಾತನಾಡಿ “ಗಣಿತ ಕಬ್ಬಿಣದ ಕಡಲೆಯಲ್ಲ, ಸೂಕ್ತ ಬೋಧನೋಪಕರಣಗಳು, ಸರಳ ಚಟುವಟಿಕೆಗಳ ಮೂಲಕ ಕಲಿಸಿದಲ್ಲಿ ಗಣಿತ ಅತ್ಯಂತ ಸರಳ ಹಾಗೂ ಆಸಕ್ತಿದಾಯಕ ವಿಷಯವಾಗುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ ಶಿವಮೊಗ್ಗದ ಹ್ಯಾಪಿ ಹೋಂ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಐರಿನ್ ಕಾರ್ಕಡ್ ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ.ಎ.ಪೈರವರು “ಶಿಕ್ಷಣದೊಂದಿಗೆ ಜೀವನಾವಶ್ಯಕ ಕೌಶಲ್ಯಗಳನ್ನು ಕಲಿಯಬೇಕು. ಶ್ರದ್ಧೆ, ಆಸಕ್ತಿ, ಅನುಕೂಲಕರವಾದ ವಾತಾವರಣ ಇದ್ದಲ್ಲಿ ಕಲಿಕೆ ಸುಲಭವಾಗುತ್ತದೆ. ಇದರಿಂದ ಸ್ವಾವಲಂಬಿಗಳಾಗಿ ಬದುಕಬಹುದು” ಎಂದು ಅಭಿಪ್ರಾಯಪಟ್ಟರು.
Manasadhara Trust ಕಾರ್ಯಕ್ರಮದಲ್ಲಿ ಕು.ಗೌತಮಿ ಪ್ರಾರ್ಥನೆಯನ್ನು ನೆರವೇರಿಸಿದರೆ ಮನಸ್ಫೂರ್ತಿ ಕಲಿಕಾ ಕೇಂದ್ರದ ಸಂಯೋಜಕರಾದ ಶ್ರೀಮತಿ ರಂಗನಾಯಕಿಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕು.ಶಿಲ್ಪಾರವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಎ ಎಸ್ ಡಿ ವಿಭಾಗದ ಸಂಯೋಜಕರಾದ ಸವಿತಾ ರಾಣಿ.ಸಿ.ಜಿರವರು ವಂದಿಸಿದರು. ಖ್ಯಾತ ಮನೋವೈದ್ಯೆ ಡಾ.ಪ್ರೀತಿ.ವಿ.ಶಾನ್ ಭಾಗ್, ಡಾ.ವಿದ್ಯಾ ರಘುದತ್ತ್, ಮನಸ್ಫೂರ್ತಿ ಕಲಿಕಾ ಕೇಂದ್ರದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನೆರೆದಿದ್ದ ಶಿಕ್ಷಕ ವರ್ಗದವರ ಸಹಯೋಗದೊಂದಿಗೆ ಕಾರ್ಯಕ್ರಮವು ಯಶಸ್ವಿಗೊಂಡಿತು.