K.S. Eshwarappa ಬಿಜೆಪಿಗೆ ಲಿಂಗಾಯಿತರು ಬೆಂಬಲಿಸಿದರೆ ಸಾಕೇ? ಹಿಂದುಳಿದ ನಾಯಕರಿಗೆ ಎಂಎಲ್ ಸಿ ಸ್ಥಾನವನ್ನಾದರೂ ಕೊಡಿ. ಅವರನ್ನು ತುಳಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನಗೆ ಬಿಎಸ್ ವೈ ವಿರುದ್ಧ ದ್ವೇಷವಿಲ್ಲ. ಆದರೆ ಪಕ್ಷ ಹಾಳಾಗುತ್ತಿರುವುದು ನೋಡಲಾಗುತ್ತಿಲ್ಲ. ಯಡಿಯೂರಪ್ಪನವರಿಗೆ ಎಂಎಲ್ ಎ, ಎಂಪಿ ಟಿಕೆಟ್ ಕೊಡಲು ಅವಕಾಶ ಇರುವ ಕಡೆ ಕೊಡಿ. ಬಿಎಸ್ ವೈ ಗೆ ಪ್ರಾರ್ಥಿಸುವೆ. ನೀವು ಕೇಂದ್ರದಲ್ಲೇ ಇರಿ, ಮಗ ಕೇಂದ್ರ ಸಚಿವ ಮತ್ತು ಸಿಎಂ ಆಗಲಿ, ಅಭ್ಯಂತರವಿಲ್ಲ. ಆದರೆ ಒಂದೇ ಕುಟುಂಬಕ್ಕೆ ಎಲ್ಲವೂ ಸಿಗುವುದು ಎಷ್ಟು ಸರಿ? ಉಳಿದವರ ಗತಿ ಏನು? ಬಿಜೆಪಿಯಲ್ಲಿ ಶುದ್ದೀಕರಣವಾಗಬೇಕೆಂಬ ಅಭಿಲಾಷೆ ಇದೆಯಲ್ಲ ಅದಕ್ಕೆ ಉತ್ತರವೇನು? ಲಿಂಗಾಯಿತ ಸಮಾಜದ ಪ್ರಭಾವಿ ಆದ ನೀವು ಹಿಂದುಳಿದ ನಾಯಕರನ್ನು ಯಾಕೆ ಬೆಳೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ವಿಷಯವನ್ನು ಅಮಿತ್ ಶಾ, ಮೋದಿ ಬಳಿ ಸುಮಾರು ಒಂದು ಗಂಟೆ ಹೇಳಿರುವೆ. ಆದರೆ ಏನೂ ಆಗಲಿಲ್ಲ ಎಂಬ ಕಾರಣಕ್ಕೆ ನಾನು ಲೋಕಸಭೆ ಚುನಾವಣೆ ಸ್ಪರ್ಧಿಸಿದೆ. ಗೆಲ್ಲಲಿಲ್ಲ, ಆದರೆ ಚರ್ಚೆ ಆಗಿದೆ. ಇದಕ್ಕೆ ಸರಿಯಾದ ದಿಕ್ಕು ಸಿಗಲಿದೆ. ೩೫ ವರ್ಷ ಈ ಪಕ್ಷಕ್ಕಾಗಿ ದುಡಿದಿರುವೆ. ಹಲವಾರು ಜನ ಚುನಾವಣೆ ಸೋತ ಮೇಲೂ ಜನ ಬೆಂಬಲಿಸುತ್ತಿದ್ದಾರೆ ಎಂದರು.
ಈ ಬಾರಿ ಒಬ್ಬ ಕುರುಬರಿಗೂ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಈ ಬಗ್ಗೆ ಚರ್ಚೆ ಆಗಲಿ ಎಂದು ನಾನು ಸ್ಪರ್ಧಿಸಿದ್ದೆ. ಆದರೆ ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ. ಕಳೆದ ಬಾರಿ ಬಿಜೆಪಿ ೨೫ ಸ್ಥಾನ ಗೆದ್ದಿತ್ತು. ಈ ಬಾರಿ ೧೭ ಕ್ಕೆ ಕುಸಿದಿದೆ. ಇದಕ್ಕೆ ಯಾರು ಕಾರಣ? ವಿಧಾನ ಸಭೆ ಚುನಾವಣೆಯಲ್ಲಿ ದಲಿತ ಮತ್ತು ಹಿಂದುಳಿದ ಸಮಾಜ ಪಕ್ಷವನ್ನ ತಿರಸ್ಕರಿಸಿದ್ದಕ್ಕೆ ೬೬ಕ್ಕೆ ಕುಸಿದೆವು ಎಂದು ಆರೋಪಿಸಿದರು.
ನಿರ್ದೋಷಿ ಆದರೂ ಸಚಿವ ಸ್ಥಾನ ಕೊಡಲಿಲ್ಲ:
ಸಂತೋಷ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ನನ್ನಮೇಲೆ ಆರೋಪ ಬಂತು. ಆದರೆ ರಾಜೀನಾಮೆ ನೀಡಿದೆ. ಸರ್ಕಾರದ ಅವಧಿ ಮುಗಿಯುವ ಮುಂಚೆ ೮ ತಿಂಗಳು ಉಳಿದಾಗ ನನ್ನ ಆರೋಪದ ಬಗ್ಗೆ ನಿರ್ದೋಷಿ ಎಂದು ಬಂದರೂ ಮತ್ತೆ ಸ್ಥಾನ ಸಿಗಲಿಲ್ಲ. ಯಾಕೆ ಎಂದು ಪ್ರಶ್ನಿಸಿದ ಅವರು, ವಿಧಾನ ಸಭಾ ಚುನಾವಣೆಯ ವೇಳೆ ಟಿಕೆಟ್ ಕೈತಪ್ಪಿಹೋಯಿತು. ಮನೆಗೆ ಬಂದ ನಾಯಕರು ನಿಮಗೆ ಮತ್ತು ಪುತ್ರನಿಗೆ ಏನಾದರೂ ಮಾಡಲಾಗುತ್ತದೆ ಎಂಬ ಭರವಸೆ ನೀಡಿದರು. ನನಗೆ ಸಂಘಟನೆಯಲ್ಲಿ ಜವಬ್ದಾರಿ ಕೇಳಿದಾಗ ಕೊಡುವುದಾಗಿ ಹೇಳಿ ಪುತ್ರ ಕಾಂತೇಶ್ ಗೆ ಹಾವೇರಿಯ ಲೋಕಸಭಾ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು.
K.S. Eshwarappa ಬ್ರಿಗೇಡ್ ಬೇಡ ಎಂದ್ರು, ನಿರ್ದೋಷಿ ಎಂದು ಬಂದರೂ ಸಚಿವ ಸ್ಥಾನ ನೀಡಲಿಲ್ಲ. ಪುತ್ರನಿಗೆ ಟಿಕೇಟ್ ಕೊಡುವುದಾಗಿ ಹೇಳಿ ಯಾಕೆ ಕೊಡಲಿಲ್ಲ ಎಂದು ಕೇಳಿದರು.