Shikaripur News ಸಾಲ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲಿದ್ದ ರೋಗಿ ಹೊರಹಾಕಿ ಮನೆ ಸೀಜ್ ಮಾಡಿದ ಘಟನೆ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದ್ದು ಅವರಿಗೆ ನೆರವಾಗುವವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
ಶಿಕಾರಿಪುರ ಪಟ್ಟಣದ ಖಾಸಗಿ ಬ್ಯಾಂಕ್ವೊಂದರಲ್ಲಿ ಕಳೆದ ಆರು ವರ್ಷಗಳ ಹಿಂದೆ ಚನ್ನಹಳ್ಳಿ ಗ್ರಾಮದ ಲತಾ ನಾಗರಾಜಪ್ಪ 3.60 ಲಕ್ಷ ರೂ. ಸಾಲ ಸಾಲ ಪಡೆದಿದ್ದರು. ಅದರಲ್ಲಿ ಈಗಾಗಲೆ 3.10ಲಕ್ಷ ರೂ. ಮರುಪಾವತಿಸಿದ್ದಾರೆ.
ಇನ್ನೂ 3.65ಲಕ್ಷ ರೂ. ಬಾಕಿ ಇದ್ದು ಅದನ್ನು ಕಟ್ಟುವುದಕ್ಕೆ ಸಮಯ ಕೇಳಿದರೂ ಪ್ರಯೋಜವಾಗಿಲ್ಲ. ಮನೆಯಲ್ಲಿ ಹೆಂಡತಿ, ಮಗ, ಇಲ್ಲದ ಸಂದರ್ಭದಲ್ಲಿ ಪ್ಯಾರಲಿಸಿಸ್ ಪೀಡಿತ ನಾಗರಾಜಪ್ಪ ಅವರಿಗೆ ಮನೆಯಿಂದ ಹೊರಗೆ ಕಳುಹಿಸಿ ಮನೆಯ ಹಿಂಬಾಗಿಲು, ಮುಂಬಾಗಿಲು ಸೀಜ್ ಮಾಡಲಾಗಿದ್ದು ಕುಟುಂಬ ಕಂಗಾಲಾಗಿದೆ.
Shikaripur News ಇಡೀ ಕುಟುಂಬ ಅವರಿವರ ಮನೆಯಲ್ಲಿ ಊಟ ಮಾಡುತ್ತಿದ್ದು ಮಗ ದೇವಸ್ಥಾನ ಕಟ್ಟೆಮೇಲೆ ಮಲಗಿದರೆ, ಗಂಡ ಹೆಂಡತಿ ಮತ್ತೊಬ್ಬರ ಮನೆಯಲ್ಲಿ ರಾತ್ರಿ ಆಶ್ರಯ ಪಡೆದಿದ್ದಾರೆ. ಬೆಳಗ್ಗೆ ಆಗುತ್ತಿದ್ದಂತೆ ಹೆಂಡತಿ, ಮಗ ಕೂಲಿ ಕೆಲಸಕ್ಕೆ ಹೋದರೆ ನಾಗರಾಜಪ್ಪ ಅವರಿವರ ಮನೆ ಕಟ್ಟೆ ಮೇಲೆ ಕಾಲಕಳೆಯುತ್ತಿದ್ದಾರೆ.
ಕುಟುಂಬದ ಯಜಮಾನ ನಾಗರಾಜಪ್ಪ ಅವರಿಗೆ 2 ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಅಂದಿನಿಂದ ಸಾಲದ ಕಂತು ಕಟ್ಟುವುದು ವಿಳಂಬವಾಗಿದೆ.
ಕುಟುಂಬಕ್ಕೆ ಇದ್ದ 10 ಗುಂಟೆ ಜಮೀನು ಮಾರಾಟ ಮಾಡಿದ್ದು ಹಣ ಬಾರದೆ ಸಮಸ್ಯೆ ಇನ್ನಷ್ಟು ಬಿಗುಡಾಯಿಸಿದೆ. ನಿತ್ಯ ನುಂಗುವ ಗುಳಿಗೆಯೂ ಮನೆಯೊಳಗೆ ಇದ್ದು ಅದನ್ನಾದರೂ ತೆಗೆದುಕೊಡಿ ಎನ್ನುವ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಮನೆಯಿದ್ದರೂ ಬೇರೊಬ್ಬರ ಮನೆ ಆಶ್ರಯದಲ್ಲಿ ಇರಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿರುವ ಕುಟುಂಬಕ್ಕೆ ತಾಲೂಕು ಆಡಳಿತ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.