Tuesday, October 1, 2024
Tuesday, October 1, 2024

Global Temperature ಜಾಗತಿಕ ತಾಪಮಾನ‌ ಸಮಸ್ಯೆ ಪರಿಹಾರ ಪ್ರಣಾಳಿಕೆ ಹೊಂದಲು ರಾಜಕೀಯ ಪಕ್ಷಗಳಿಗೆ ಆಗ್ರಹಿಸಿ ಏಪ್ರಿಲ್ 6 ರಂದು ಸಭೆ

Date:

Global Temperature ಜಾಗತಿಕ ತಾಪಮಾನ ನಮ್ಮ ಮನ ಮನೆ ದೇಹ ಮನಸ್ಸು ಸುಡುವ ಮುನ್ನ……

ಎಂದೋ ಆಗಬಹುದು ಎಂದು ಊಹಿಸಿದ್ದ ಜಾಗತಿಕ ತಾಪಮಾನದ ಬಿಸಿ ಈಗ ಭಾರತದೊಳಗೆ, ಕರ್ನಾಟಕವನ್ನು ಪ್ರವೇಶಿಸಿ ನಮ್ಮ ನಮ್ಮ ಮನೆಯೊಳಗೆ ದೇಹ ಸುಡುವಷ್ಟು ಹತ್ತಿರ ಬಂದಿದೆ….

ಅದರ ದುಷ್ಪರಿಣಾಮಗಳು ಮುಂದೆಂದೂ ಆಗಬಹುದು ಎಂದು ಇಡೀ ಆಡಳಿತ ವ್ಯವಸ್ಥೆ ಮತ್ತು ಸಮಾಜ ಭಾವಿಸಿತ್ತು. ಆದರೆ ಅದು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಅತ್ಯಂತ ತೀವ್ರವಾಗಿ ನಮ್ಮನ್ನು ಕಾಡಲು ಪ್ರಾರಂಭಿಸಿದೆ….

ಹಣ ಕೇಂದ್ರಿತ ಅಭಿವೃದ್ಧಿಯ ಹಿಂದೆ ಬಿದ್ದ ಮಾನವ ಸಮಾಜ ಪರಿಸರವನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲ ನಾಶಪಡಿಸುವುದನ್ನು ನಿರಂತರವಾಗಿ ಮಾಡುತ್ತಾ ಸಾಗಿದ್ದರ ಫಲಿತಾಂಶ ಈಗ ನಾವು ಅನುಭವಿಸಬೇಕಾಗಿದೆ…..

ಗಾಳಿ ನೀರು ಆಹಾರ ಕಲುಷಿತವಾಗುತ್ತಿರುವುದಕ್ಕಿಂತ ಅಪಾಯಕಾರಿಯಾಗಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚಾಗುತ್ತಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ….

ಮೊದಲು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ತೀವ್ರ ತಾಪಮಾನ ಈಗ ರಾಜ್ಯದ ಎಲ್ಲಾ ಕಡೆ ಏಕಪ್ರಕಾರವಾಗಿ ವರದಿಯಾಗುತ್ತಿದೆ. ಬಹುತೇಕ 40 ಡಿಗ್ರಿ ಸೆಲ್ಸಿಯಸ್ ನ ಆಸು ಪಾಸಿನಲ್ಲಿ ಕರ್ನಾಟಕ ರಾಜ್ಯ ಕುದಿಯುತ್ತಿದೆ…..

ಪ್ರಾಕೃತಿಕವಾಗಿ, ಸ್ವಾಭಾವಿಕವಾಗಿ ಸಂಭವಿಸುವ ವೈಪರೀತ್ಯ ಗಳಿಗೆ ದೇಹ ಮತ್ತು ಮನಸ್ಸು ಹೇಗೋ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಆದರೆ ಮನುಷ್ಯನ ದುರಾಸೆಯಿಂದ ನಿರ್ಮಿತವಾದ ವ್ಯತ್ಯಾಸಗಳಿಗೆ ಸ್ವತ ಮನುಷ್ಯನೇ ನಿಯಂತ್ರಣ ಕಳೆದುಕೊಂಡು ಆಘಾತಕ್ಕೆ ಒಳಗಾಗುತ್ತಾನೆ…….

ಆದರೆ ಈ ವಿದ್ಯಮಾನಗಳಿಗೆ ನೇರವಾಗಿ ಯಾರನ್ನೋ ಹೊಣೆ ಮಾಡುವುದು ಅಷ್ಟು ಉತ್ತಮ ಅಭಿಪ್ರಾಯವಲ್ಲ. ಏಕೆಂದರೆ ಇಡೀ ವ್ಯವಸ್ಥೆಯ ಪ್ರತಿ ಮಾನವ ಜೀವಿಯು ಇದರ ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ……

Global Temperature ಜನಸಂಖ್ಯೆಯ ಹೆಚ್ಚಳ, ಎಲ್ಲೆಂದರಲ್ಲಿ ಟಾರು – ಸಿಮೆಂಟ್ ರಸ್ತೆಗಳು, ಮಿತಿಮೀರಿದ ವಾಹನಗಳು, ಎಲ್ಲೆಲ್ಲೂ ಹವಾನಿಯಂತ್ರಿತ ವ್ಯವಸ್ಥೆ, ಹೊಗೆ ಉಗುಳುವ ಫ್ಯಾಕ್ಟರಿಗಳು, ಎಲ್ಲವನ್ನು ಸುಟ್ಟು ಭಸ್ಮ ಮಾಡುವ ಹಪಾಹಪಿತನ ಹೀಗೆ ಒಂದು ಕಡೆ ಮನುಷ್ಯ ತನ್ನ ಅನುಕೂಲಕರ ಸೌಲಭ್ಯಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ಈ ರೀತಿಯ ಹುಚ್ಚಾಟಗಳನ್ನು ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಎಲ್ಲಾ ಅಭಿವೃದ್ಧಿಯ ಮಾನದಂಡಗಳನ್ನು ಪೂರೈಸಲು ಪರಿಸರದ ಮೇಲೆ ನಿರಂತರ ಅತ್ಯಾಚಾರ ಅಂದರೆ ಕಾಡು ನಾಶ, ಕೆರೆಗಳ ನಾಶ, ಪ್ರಾಣಿ ಪಕ್ಷಿಗಳ ನಾಶ, ನಗರಗಳ ಗಿಡಮರಗಳಿಗೆ ಕೊಡಲಿ ಏಟು, ಅನಾವಶ್ಯಕ ಅಪಾರ್ಟ್ಮೆಂಟ್ ಸಂಸ್ಕೃತಿ, ತನ್ನ ಶ್ರೀಮಂತಿಕೆ ಪ್ರದರ್ಶನಕ್ಕಾಗಿ ವಾಹನಗಳ ಖರೀದಿ ಹೀಗೆ ಊಹಿಸಲು ಅಸಾಧ್ಯವಾದ ಅನೇಕ ತಪ್ಪುಗಳು, ಇದರೆಲ್ಲದರ ಪರಿಣಾಮ ಇಡೀ ವಾತಾವರಣದ ಉಷ್ಣಾಂಶ ಪ್ರತಿವರ್ಷ ಹೆಚ್ಚಾಗುತ್ತಾ ಬಂದು ಈಗ ಅದು ತನ್ನ ಮಿತಿಯನ್ನು ಮೀರಿದೆ……

ಧೂಳು, ಹೊಗೆ, ಬಿಸಿಲ ತಾಪ, ಉಷ್ಣಾಂಶ ಏರಿಕೆ ಇವೆಲ್ಲವೂ ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರಿ ಮನಸ್ಸುಗಳು ಸಂಕುಚಿತಗೊಂಡು ಒಂದು ರೀತಿ ಅಸಹನೀಯ ವಾತಾವರಣದಲ್ಲಿ ಜೀವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ…..

ಈಗಲೂ ಕಾಲ ಮಿಂಚಿಲ್ಲ. ಏನನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಖಂಡಿತವಾಗಿಯು ಜಾಗತಿಕ ತಾಪಮಾನದ ಪ್ರಮಾಣವನ್ನು ಅದರೊಂದಿಗೆ ನಮ್ಮ ರಾಜ್ಯದ ಉಷ್ಣಾಂಶವನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಾಗದಂತೆ ತಡೆಯುವ ಅನೇಕ ಸೂತ್ರಗಳು, ಕಾರ್ಯಯೋಜನೆಗಳು ಈಗಲೂ ಇವೆ…..

ಜನರಿಗೆ, ರಾಜಕೀಯ ಪಕ್ಷಗಳಿಗೆ, ಸರ್ಕಾರಗಳಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಮಾತ್ರ ಬೇಕಾಗಿದೆ. ಅದಿಲ್ಲದೆ ಏನೋ ಉಡಾಫೆಯಾಗಿ ದಿನದೂಡುತ್ತಾ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಕೋವಿಡ್ – 19 ಗಿಂತ ಭಯಂಕರ ದುಷ್ಪರಿಣಾಮವನ್ನು ಈ ತಾಪಮಾನ ನಮಗೆ ಉಂಟು ಮಾಡಬಹುದು….

ಈ ನಿಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಉಷ್ಣಾಂಶ ಏರಿಕೆಯನ್ನು ತಡೆಗಟ್ಟಲು ಶೀಘ್ರವಾಗಿ ಯುದ್ಧೋಪಾದಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂಬುದನ್ನು ಅವರ ಚುನಾವಣಾ ಭರವಸೆಯ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಪ್ರಜ್ಞಾವಂತ, ಪ್ರಬುದ್ಧ ಮನಸ್ಸುಗಳು, ಪರಿಸರ ಪ್ರೇಮಿಗಳು ಇದೆ ಏಪ್ರಿಲ್ 6 ರಂದು, ಶನಿವಾರ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ, ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ವರೆಗೆ ರಾಜಕೀಯ ಪಕ್ಷಗಳಿಗೆ ಒತ್ತಾಯಿಸುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ…..

ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಅಲ್ಲದಿದ್ದರು ನಮ್ಮ ರಾಜ್ಯದ ಮಟ್ಟಿಗಾದರೂ ಪರಿಸರ ಉಳಿಸಿ, ತಾಪಮಾನ ತಡೆಯುವ ಕೆಲಸಕ್ಕೆ ಅಳಿಲುಸೇವೆ ಸಲ್ಲಿಸುವ ಅವಕಾಶ ತಪ್ಪಿಸಿಕೊಳ್ಳಬಾರದಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ…..

ದಯವಿಟ್ಟು ಬನ್ನಿ ಭಾಗವಹಿಸಿ….

ಹೆಚ್ಚಿನ ಮಾಹಿತಿಗಾಗಿ..
ಶ್ರೀ ಆರ್ ಪಿ ವೆಂಕಟೇಶ್ ಮೂರ್ತಿ ಅವರನ್ನು ಸಂಪರ್ಕಿಸಿ.
94484 07561…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...