Ram Mandir ಕರ್ನಾಟಕದ ಕಲ್ಲೊಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವಾಗಿ ಜಾಗತಿಕವಾಗಿ ಮನ್ನಣೆ ಪಡೆಯಿತು ಎಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಶಿಲ್ಪಿಗಳಲ್ಲಿ ಒಬ್ಬರಾದ ಗಣೇಶ್ ಎಲ್. ಭಟ್ ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹದ ಶಿಲ್ಪಿಗಳಲ್ಲಿ ಒಬ್ಬರಾದ ಗಣೇಶ ಲಕ್ಷ್ಮೀ ನಾರಾಯಣ ಭಟ್ಟ ಇಡಗುಂಜಿ ಮತ್ತು ಇವರಿಗೆ ಸಹಕರಿಸಿದ ಶಿಲ್ಪಿಗಳಿಗೆ ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.
ಕಲಾವಿದ ಕಲ್ಪನೆಯ ಲೋಕದಲ್ಲಿ ತನ್ನನ್ನೇ ಮರೆಯುತ್ತಾನೆ. ಲಲಿತಕಲೆಯಲ್ಲೂ ಈ ಮನಸ್ಥಿತಿ ಇದೆ. ಮಲೆನಾಡಿನ ಈ ಭಾಗದಲ್ಲಿ ಶಿಲ್ಪ ಕೆತ್ತನೆಗೆ ಗುಡಿಗಾರರ ಕೊಡುಗೆ ದೊಡ್ಡದು. ಅದರಲ್ಲೂ ಶ್ರೀಗಂಧದ ಕೆತ್ತನೆ ವಿಗ್ರಹಗಳು ವಿಶ್ವದ ಪ್ರಸಿದ್ಧ ವಸ್ತು ಸಂಗ್ರಹಾಲಯಗಳಲ್ಲಿದೆ. ಪುರಾತನ ಶೈಲಿಯಿಂದ ಆಧುನಿಕ ಶೈಲಿಯವರೆಗೆ ಈ ನೆಲ ಸಾಕ್ಷಿಯಾಗಿದೆ. ವಿವಿಧ ಕಲಾ ಪ್ರಕಾರಗಳಿಗೆ ಈ ಜಿಲ್ಲೆ ಪ್ರಪಂಚಕ್ಕೆ ಶಕ್ತಿ ಕೊಟ್ಟಿದೆ ಎಂದರು.
ಶಿಲ್ಪಕಲೆಯಲ್ಲಿ ಸಿದ್ಧಾಂತ, ಪ್ರಾಯೋಗಿಕ ಶಿಲ್ಪ ನಿರ್ಮಾಣ ಪರಿಣಿತಿ ಎರಡೂ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು. ದೇಶದ ವಿವಿಧ ಕಡೆ ನಡೆದ ಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಿದ್ದೇನೆ. ನನ್ನ ಎಲ್ಲ ಬೆಳವಣಿಗೆಗೆ ಮೂಲ ಸಾಗರ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಗುಡಿಗಾರರ ಸಾಂಪ್ರದಾಯಿಕ ಶೈಲಿಯನ್ನು ಬೇರೆ ಕಡೆ ನೋಡಲು ಸಾಧ್ಯವಿಲ್ಲ. ಈ ಪ್ರಾದೇಶಿಕ ಶೈಲಿ ಮರೆಯಾಗುತ್ತಿದ್ದು, ಇದರ ಪುನರ್ ಸ್ಥಾಪನೆಯಾಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎಸ್.ಭಟ್ ಅವರು ಶಿಲ್ಪಿಗಳನ್ನು ಅಭಿನಂದಿಸಿ ಮಾತನಾಡಿದರು. ಗದಗಿನ ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಣೆಬೆನ್ನೂರಿನ ರಾಮಕೃಷ್ಣಾಶ್ರಮದ ಶ್ರೀ ಪ್ರಕಾಶಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
Ram Mandir ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹದ ಶಿಲ್ಪಿ ಗಣೇಶ ಭಟ್ಟ ಮತ್ತು ಸುನಂದ ದಂಪತಿ ಹಾಗೂ ಅವರಿಗೆ ಸಹಕರಿಸಿದ ಮೌನೇಶ್ ಬಡಿಗೇರ ಹಾವೇರಿ, ಜಯಚಂದ್ರ ಆಚಾರ್ಯ ನಾಳ, ಸಂದೀಪ ನಾಯ್ಕ್ ಇಡಗುಂಜಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸುವಿಧಾ ಸೌಹಾರ್ದ ಸುಪರ್ ಮಾರ್ಕೆಟ್ ಅಧ್ಯಕ್ಷ ಟಿ.ವಿ.ಪಾಂಡುರoಗ, ಒಕ್ಕಲಿಗರ ಸಮಾಜದ ಅಧ್ಯಕ್ಷ ಎಂ.ಟಿ.ಗುoಡಪ್ಪ ಮಾತನಾಡಿದರು.
ಸಂಕಲನ ಬಚ್ಚಗಾರು ಸಂಸ್ಥೆಯ ಶುಂಠಿ ಸತ್ಯನಾರಾಯಣ ಭಟ್, ಸುನಂದ ಗಣೇಶ್ ಹಾಜರಿದ್ದರು.