Constitution ಶತಮಾನಗಳಿಂದ ಮಾನವರ ಘನತೆ, ಸಮಾನತೆ, ಸಾಮಾಜಿಕ ನ್ಯಾಯವನ್ನು ನಿರಾಕರಿಸಲ್ಪಟ್ಟಿದ್ದ ಭಾರತದ ಕರಾಳ ಚರಿತ್ರೆಯ ಅರಿವಿದ್ದ ಬಾಬಾಸಾಹೇಬರು, ತಾವು ಬರೆದ ಸಂವಿಧಾನದ ಮೂಲಕ ಭಾರತದ ಎಲ್ಲಾ ಪ್ರಜೆಗಳಿಗೂ ಮಾನವ ಹಕ್ಕು, ಅಧಿಕಾರ, ಸಾಮಾಜಿಕ ನ್ಯಾಯ ದೊರೆಯುವಂತೆ ಮಾಡಿದ್ದು ಮಹತ್ವದ ಸಂಗತಿಯಾಗಿದೆ. ಈ ಕಾರಣಕ್ಕಾಗಿ ಭಾರತದ ಸಮಸ್ತ ನಾಗರೀಕರು ಬಾಬಾಸಾಹೇಬರಿಗೆ ಸದಾ ಕೃತಜ್ಞರಾಗಿರಬೇಕು. ಸಂವಿಧಾನದಲ್ಲಿ ಮಹಿಳೆ, ದುಡಿಯುವ ವರ್ಗದ ಹಿತವನ್ನು ಸಂರಕ್ಷಿಸಲಾಗಿದೆ. ಸಂವಿಧಾನ ಸಭೆಯಲ್ಲಿ ಮಹತ್ವದ ಪಾತ್ರವಹಿಸಿದ “ದಾಕ್ಷಾಯಿಣಿ ವೇಲಾಯುಧನ್, ಬೇಗಂ ಐಜಾಜ್ ರಸೂಲ್, ದುರ್ಗಾಬಾಯಿ ದೇಶ್ಮುಹಖ್, ಹನ್ಸ ಮೆಹ್ತಾ, ಅಮೃತ್ ಕೌರ್, ಅಮ್ಮು ಸ್ವಾಮಿನಾಥನ್, ಹ್ಯಾನಿ ಮಸ್ಕರೇನಸ್, ವಿಜಯಲಕ್ಷ್ಮಿ ಪಂಡಿತ್, ಸುಚೇತಾ ಕೃಪಲಾನಿ, ರೇಣುಕಾ ರಾಯ್, ಪೂರ್ಣಿಮಾ ಬ್ಯಾನರ್ಜಿ, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ, ಸರೋಜಿನಿ ನಾಯ್ಡು” ಪ್ರಮುಖರು. ಮಹಿಳಾ ಪರವಾದ ಚಿಂತನೆಯನ್ನು ಹೊಂದಿದ್ದ ಬಾಬಾಸಾಹೇಬರು “ಸಂವಿಧಾನದ ಅನುಚ್ಛೇದ 14ರಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನವಾಧ ಕಾನೂನಿನ ರಕ್ಷಣೆಯನ್ನು; ಅನುಚ್ಛೇದ 15ರಲ್ಲಿ ಲಿಂಗಭೇದ ಆಧಾರದ ಮೇಲೆ ತಾರತಮ್ಯ ಧೋರಣೆಯನ್ನು ತೋರಬಾರದೆಂಬ; ಅನುಚ್ಛೇದ 18ರಲ್ಲಿ ಸರ್ಕಾರಿ ನೌಕರಿ ಅಥವಾ ಯಾವುದೇ ಹುದ್ದೆಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನೀತಿ ಅನುಸರಿಸಬಾರದೆಂದು; ಅನುಚ್ಛೇದ 21ರಲ್ಲಿ ಮಹಿಳೆಯರು ಮಾನವ ಘನತೆಯಿಂದ ಬದುಕುವ ಹಕ್ಕನ್ನು; ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಬೇಕೆಂದು; ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಪ್ರತ್ಯೇಕ ಕಾನೂನುಗಳನ್ನು ಮತ್ತು ಯೋಜನೆಗಳನ್ನು ರೂಪಿಸಲು ಅಧಿಕಾರವನ್ನೂ; ಮಹಿಳೆಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡುವ, ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ, ನೌಕರಸ್ಥ ಮಹಿಳೆಯರಿಗೆ ಹೆರಿಗೆ ರಜೆ ಹಾಗೂ ಹೆರಿಗೆ ಕಾಲದಲ್ಲಿ ಪೂರ್ಣ ಭತ್ಯೆ ಕಲ್ಪಿಸುವ ಹಕ್ಕನ್ನು; ಅನುಚ್ಛೇದ 23-24ರಲ್ಲಿ, ವೇಶ್ಯಾವೃತ್ತಿ ನಿಷೇಧ, ವರದಕ್ಷಿಣೆ ನಿಷೇಧ, ಸತಿಸಹಗಮನ ಪದ್ಧತಿ ನಿಷೇಧ ಅಧಿನಿಯಮಗಳನ್ನು; ಅನುಚ್ಛೇದ 51(ಎ)ನಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕೆಂದು; ಅನುಚ್ಛೇದ 243ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕಡ್ಡಾಯ ಮೀಸಲಾತಿ ಒದಗಿಸಬೇಕೆಂದು ಹೇಳಿದ್ದಾರೆ”. ಭಾರತದ ಎಲ್ಲಾ ಜಾತಿ, ಧರ್ಮ, ಸಮುದಾಯದ ಮಹಿಳೆಯರ ಜಾಗೃತಿ ಹಾಗೂ ಸಬಲೀಕರಣಕ್ಕೆ ಕಾರಣವಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಭಾರತ ಸಂವಿಧಾನಕ್ಕೆ ಈ ದೇಶದ ಮಹಿಳೆಯರು ಕೃತಜ್ಞರಾಗಿರಬೇಕು.
ದುಡಿಯುವ ಕಾರ್ಮಿಕ ವರ್ಗಗಳಿಗೆ ಹಕ್ಕುಗಳನ್ನು ಕಲ್ಪಿಸಿಕೊಟ್ಟಿರುವ ನಮ್ಮ ಸಂವಿಧಾನವು; ಕಾರ್ಮಿಕರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದಕ್ಕೆ, ಸಭೆ ಸೇರುವುದಕ್ಕೆ, ಶಾಂತಿಯುತವಾಗಿ ಪ್ರತಿಭಟಿಸುವುದಕ್ಕೆ, ಧರಣಿ ನಡೆಸಲು, ಮುಷ್ಕರ ಹೂಡಲು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಸ್ವಾತಂತ್ರ್ಯ ವನ್ನು ಕಲ್ಪಿಸಿಕೊಟ್ಟಿದೆ. ಕಾರ್ಮಿಕರಿಗೆ ದುಡಿಮೆಯ ಅವಧಿಯನ್ನು ನಿಗಧಿಪಡಿಸಿ, ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ. 14 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಕಾರ್ಖಾನೆ ಅಥವಾ ಗಣಿಯಲ್ಲಿ ಕೆಲಸ ಮಾಡಲು ನಿಯೋಜಿಸುವುದು ಅಥವಾ ಅಪಾಯಕಾರಿ ಉದ್ಯೋಗದಲ್ಲಿ ತೊಡಗಿಸುವುದನ್ನು ನಿಷೇಧಿಸಲಾಗಿದೆ. ಸಂವಿಧಾನದ 15,16,17,21,23,43, 45,46,243,೪೫, 330,332,335 ,340,341,342 ಅನುಚ್ಛೇದಗಳು ಅಸ್ಪೃಶ್ಯತೆಯ ನಿರ್ಮೂಲನೆ ಹಾಗೂ ಅಸ್ಪೃಶ್ಯರ ವಿಮೋಚನೆಯನ್ನು ಪ್ರತಿಪಾದಿಸುತ್ತಲೇ; ಧರ್ಮ, ಜನಾಂಗ, ಜಾತಿ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂದಿಸುವ0ತಿಲ್ಲ; ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಬೇಕು; ಯಾರಿಗೂ ಯಾವುದೇ ರೀತಿಯ ತಾರತಮ್ಯ ತೋರುವಂತಿಲ್ಲ; ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಮೀಸಲಾತಿ ಕಲ್ಪಿಸಬೇಕು; ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧ; ಎಲ್ಲಾ ರೀತಿಯ ಶೋಷಣೆಗಳಿಂದ ದುರ್ಬಲ ವರ್ಗಗಳನ್ನು ರಕ್ಷಿಸಬೇಕು ಎಂಬುದನ್ನು ಅಂಗೀರಿಸುತ್ತವೆ.
Constitution ಅನುಚ್ಛೇದ 36ರಿಂದ 51ರವರೆಗೆ ‘ರಾಜ್ಯ ನೀತಿ ನಿರ್ದೇಶಕ ತತ್ವ’ಗಳನ್ನು ಕುರಿತು ಮಾತನಾಡುವ ಸಂವಿಧಾನವು; “ಸಮಸ್ತ ನಾಗರಿಕರಿಗೂ ಸಮಾನವಾಗಿ ಜೀವನ ನಿರ್ವಹಿಸುವ ಹಕ್ಕನ್ನು ನೀಡಬೇಕು; ಪುರುಷ ಮತ್ತು ಸ್ತ್ರೀಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕಲ್ಪಿಸಬೇಕು. ನಿರುದ್ಯೋಗ, ವೃದ್ಧಾಪ್ಯ, ರೋಗ ಮತ್ತು ಅಸಮರ್ಥತೆಯಿಂದ ಬಳಲುವವರಿಗೆ ಸರ್ಕಾರ ಸಹಾಯ ನೀಡಬೇಕು; ಕೃಷಿ, ಕೈಗಾರಿಕೆ ಮತ್ತು ಇತರೆ ಉದ್ಯೋಗದಲ್ಲಿ ನಿರತರಾದ ಕೆಲಸಗಾರರ ಉತ್ತಮ ಜೀವನ ನಿರ್ವಹಣೆಗಾಗಿ ಸಮರ್ಪಕ ಕೂಲಿ ನೀಡಬೇಕು; ಕೈಗಾರಿಕೆಯ ಆಡಳಿತ ಮಂಡಳಿಯಲ್ಲಿ ಕೆಲಸಗಾರರು ಸಹಾ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು; ಕೃಷಿ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಸುಧಾರಣೆಗೊಳಿಸಿ ಸಂರಕ್ಷಿಸಬೇಕು; ದೇಶದ ಪರಿಸರ, ಅರಣ್ಯ, ವನ್ಯಜೀವಿಗಳನ್ನು ರಕ್ಷಿಸಬೇಕು” ಎಂದು ಹೇಳುತ್ತದೆ.
ಧರ್ಮನಿರಪೇಕ್ಷತೆ, ಧಾರ್ಮಿಕ ಸ್ವಾತoತ್ರ್ಯದ ಹಕ್ಕನ್ನು ಕುರಿತು ಚರ್ಚಿಸುವ ಸಂವಿಧಾನವು, ಯಾವುದೇ ವ್ಯಕ್ತಿ ತನ್ನ ಆತ್ಮಸಾಕ್ಷಿಯಂತೆ ಯಾವುದೇ ಧರ್ಮವನ್ನು ಅವಲಂಬಿಸಿ, ಆಚರಿಸಿ, ಪ್ರಚಾರ ಮಾಡುವ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಿರ್ವಹಿಸುವ ವಿಚಾರದಲ್ಲಿ ಸರ್ವತಂತ್ರ ಸ್ವತಂತ್ರ ಎಂಬುದನ್ನು ವಿವರಿಸುತ್ತಲೇ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದೂ ಸಹ ಹೇಳುತ್ತದೆ.
ಎಲ್ಲಾ ಧರ್ಮೀಯರಿಗೂ ಸಮಾನ ರಕ್ಷಣೆ, ಅವಕಾಶವನ್ನು ಕಲ್ಪಿಸಬೇಕೆಂದು ಹೇಳುವ ಸಂವಿಧಾನವು, ಇಡೀ ಸಮಾಜ ‘ಸರ್ವಜನಾಂಗದ, ಸರ್ವಧರ್ಮೀಯರ, ಸರ್ವಜಾತಿಗಳ ಶಾಂತಿಯ ತೋಟ’ವಾಗಬೇಕೆಂದು ಬಯಸುತ್ತದೆ. ದೇವರು, ಧರ್ಮ, ಮಂದಿರ, ಮಸೀದಿ, ಚರ್ಚು, ಗುರುದ್ವಾರಗಳಿಗೆ ರಕ್ಷಣೆ ನೀಡಿರುವ ಸಂವಿಧಾನವು ಧರ್ಮ ಗ್ರಂಥಗಳಿಗಿoತ ವಿಶೇಷವಾದದ್ದು. ಧರ್ಮ ಗ್ರಂಥಗಳನ್ನು ತಿದ್ದುವ ಹಾಗಿಲ್ಲ. ಆದರೆ ಕಾಲಕ್ಕನುಗುಣವಾಗಿ ಒಟ್ಟು ದೇಶದ, ಬಹುಸಂಖ್ಯಾತರ ಹಿತದೃಷ್ಟಿಯಿಂದ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಳ್ಳಬಹುದ ಎಂಬುದಾಗಿ ಸ್ವತಃ ಸಂವಿಧಾನವೇ ಹೇಳುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಂಡು, ಪ್ರಬುದ್ಧ ಭಾರತವನ್ನು ಕಟ್ಟಿಕೊಳ್ಳುವ ಕಾರಣಕ್ಕಾಗಿ ಜೀವಪರವಾಗಿರುವ ಮಹತ್ವದ ಭಾರತ ಸಂವಿಧಾನವನ್ನು ರಕ್ಷಿಸಿಕೊಳ್ಳುವುದು ಸಮಸ್ತ ಭಾರತೀಯರ ಹೊಣೆಗಾರಿಕೆಯಾಗಿದೆ.
ಇಂತಹ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸಕ್ಕೆ ಸರ್ಕಾರವೇ ಮುಂದಾಗಿದ್ದು ದೇಶದಲ್ಲೇ ಇಂತಹ ವಿನೂತನ ಪ್ರಯತ್ನ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ಅಭಿನಂದನೀಯರು.