H.B.Manjunath ಸಂವಿಧಾನದತ್ತ ಹಕ್ಕುಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕರ್ತವ್ಯಗಳಿಗೂ ಕೊಟ್ಟಲ್ಲಿ ಮಾತ್ರ ರಾಷ್ಟ್ರಾಭಿವೃದ್ಧಿ ಸಾಧ್ಯವಿದ್ದು ಕರ್ತವ್ಯ ಪ್ರಜ್ಞೆಯ ಜಾಗೃತಿ ಹಾಗೂ ಅನುಷ್ಠಾನಗಳು ಸುಸಂಸ್ಕೃತಿಯ ಲಕ್ಷಣಗಳು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಹೇಳಿದರು.
ದಾವಣಗೆರೆ ನಗರದ ಸರ್ಕಾರಿ ಮಾಜಿ ಪುರಸಭೆ ಪದವಿಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಎನ್ ಎಸ್ ಎಸ್ ಹಾಗೂ ಇಕೋ ಕ್ಲಬ್ ಚಟುವಟಿಕೆಗಳ ಸಮಾರೋಪ ಭಾಷಣ ಮಾಡುತ್ತಾ ಭಾರತದಲ್ಲಿರುವ ಯುವ ಸಂಪತ್ತಿನ ಅಗಾಧತೆ ಹಾಗೂ ಸಾಮರ್ಥ್ಯದ ಬಗ್ಗೆ ವಿಶ್ವವೇ ಗಮನಿಸುತ್ತಿದ್ದರೂ ನಮ್ಮ ಯುವಕ ಯುವತಿಯರಿಗೆ ಏಕೋ ಸ್ವಸಾಮರ್ಥ್ಯದ ಅರಿವಾಗುತ್ತಿಲ್ಲ, ಬದಲಾಗಿ ಮೊಬೈಲ್ ಘೀಳಿನಲ್ಲಿ ಕೊಚ್ಚಿ ಹೋಗುತ್ತಿದ್ದಾರೆ, ಯಾವುದೇ ಆಧುನಿಕ ತಂತ್ರಜ್ಞಾನ ಸಾಧನ ಸಲಕರಣೆಗಳು ಕೇವಲ ಮನರಂಜನೆಗೆ ಸೀಮಿತವಾದಲ್ಲಿ ಅಪಾಯ, ಬದಲಾಗಿ ವಿಧಾಯಕ ಕಾರ್ಯಗಳಿಗೆ ಬಳಕೆಯಾದಲ್ಲಿ ಮಾತ್ರ ಸಾರ್ಥಕತೆ, ಹೀಗೆ ಬಳಸುವುದೂ ಸುಸಂಸ್ಕೃತಿಯ ಲಕ್ಷಣ, ಐದು ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಶಕ್ತಿಯಾಗುವಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ ವಿಪುಲ ಅವಕಾಶಗಳಿದ್ದು ಯುವ ಜನತೆ ಧೃತಿಗೆಡಬೇಕಾಗಿಲ್ಲ, ಶೈಕ್ಷಣಿಕ ಸಾಧನೆಗಳೊಂದಿಗೆ ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಂಡು ತಾವು ಬೆಳೆದು ದೇಶವನ್ನು ಬೆಳೆಸಬೇಕಿದೆ ಎಂದರಲ್ಲದೆ ಮುನ್ಸಿಪಲ್ ಹೈಸ್ಕೂಲಿನ ಸ್ಥಾಪನೆ, ಇದರ ಆವರಣದಲ್ಲಿ ನಡೆದ ಸ್ವಾತಂತ್ರ ಹೋರಾಟದ ರೋಚಕ ಘಟನೆ ಮುಂತಾದುವನ್ನು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಹಮ್ಮದ್ ಅಯೂಬ್ ಪೈಲ್ವಾನ್ ರವರು ಬಡತನ ಸಹಜ ಆದರೆ ಪೋಷಕರ ತ್ಯಾಗ ಸರ್ಕಾರದ ಶೈಕ್ಷಣಿಕ ಸವಲತ್ತು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು ದೇಶದ ಭವಿಷ್ಯವನ್ನೂ ರೂಪಿಸಬೇಕು ಎಂದರು.
H.B.Manjunath ಅರ್ಥಶಾಸ್ತ್ರ ಉಪನ್ಯಾಸಕ ಜಯ್ಯಪ್ಪನವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವರ್ಷಿತಾ ಪ್ರಾರ್ಥನೆಯನ್ನು ಹಾಡಿದರೆ ಆಂಗ್ಲ ಭಾಷಾ ಉಪನ್ಯಾಸಕ ನೂರ್ ಅಹ್ಮದ್ ಸ್ವಾಗತ ಕೋರಿದರು. ಶಾಲಾ ವರದಿಯನ್ನು ಉಪನ್ಯಾಸಕಿ ಉಮಾದೇವಿ ವಾಚಿಸಿದರು. ಶೇಖ್ ಅಹಮದ್ ಮುಂತಾದ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಜಯ್, ವರ್ಷಿತಾ ಮುಂತಾದವರು ಭಾಗವಹಿಸಿದ್ದು ವಂದನೆಗಳನ್ನು ಉಪನ್ಯಾಸಕಿ ಸುಮಿತ್ರಾರ ಅರ್ಪಿಸಿದರು. ಹೈಸ್ಕೂಲಿನ ಹಳೆಯ ವಿದ್ಯಾರ್ಥಿ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಬದ್ಧಿ ಸಹಾ ಆಗಮಿಸಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.