Health and Family Welfare Development ಸಮಾಜದಲ್ಲಿ ನಾವೆಲ್ಲ ದೇಹ ಮಾತ್ರವಲ್ಲ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ವಕೀಲರ ಸಂಘ ಶಿವಮೊಗ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಮಾನಸಿಕ ಆರೋಗ್ಯದ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸುಖ, ದುಖ ಎಲ್ಲದಕ್ಕೂ ಮನಸ್ಸೇ ಮುಖ್ಯ ಕಾರಣ. ಪ್ರತಿದಿನ ನಾವು ಎಷ್ಟೋ ಜನರನ್ನು ಭೇಟಿಯಾಗುತ್ತೇವೆ, ವ್ಯವಹರಿಸುತ್ತೇವೆ, ವ್ಯಕ್ತಿಗತ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಮಾನಸಿಕವಾಗಿ ನಾವು ಸದೃಢರಾಗಿದ್ದರೆ ನೋವು, ಹತಾಶೆಗೆ ಹೋಗುವುದಿಲ್ಲ.
ಸಮಾಜದಲ್ಲಿ ಕೆಲವರಿಗೆ ಮಾತ್ರ ಮಾನಸಿಕ ರೋಗ ಬರುತ್ತದೆ ಎಂಬ ಭ್ರಮೆಯಲ್ಲಿದ್ದೇವೆ. ನಾವೆಲ್ಲ ಒಂದಿಲ್ಲೊಂದು ಮಾನಸಿಕ ಸಮಸ್ಯೆಯಲ್ಲಿರುತ್ತೇವೆ. ಆದ್ದರಿಂದ ದೇಹಕ್ಕೆ ಕೊಟ್ಟಷ್ಟೇ ಮಹತ್ವನ್ನು ಮನಸ್ಸಿಗೆ ನೀಡಬೇಕು. ಮಾನಸಿಕ ಆರೋಗ್ಯ ಕಾರ್ಯಕ್ರಮಗಳು, ಸೇವೆಗಳ ಸದುಪಯೋಗ ಪಡೆಯಬೇಕು. ಹಾಗೂ ಇಂತಹ ಅಪರೂಪದ ಮಾನಸಿಕ ಅರಿವು ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಹೇಳಿದ್ದಾರೆ.
Health and Family Welfare Development ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಮಾರ್ಗದರ್ಶಕರಾದ ಎನ್.ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದುವರೆದ ದೇಶಗಳಲ್ಲಿ ಮಾನಸಿಕ ಖಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಾನಸಿಕ ಖಾಯಿಲೆಯೇ ನಂ.1 ಆಗುವ ಸಾಧ್ಯತೆ ಇದೆ. ಆದ್ದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ.ದೈಹಿಕ ಖಾಯಿಲೆಗೆ ವೈದ್ಯರನ್ನು ಹುಡುಕಿ ಚಿಕಿತ್ಸೆ ಪಡೆದು ಅದನ್ನು ಎಲ್ಲರ ಹತ್ತಿರ ಹಂಚಿಕೊಳ್ಳುತ್ತೇವೆ. ಆದರೆ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡುವ, ಕಳಂಕವೆಂಬಂತೆ ನೋಡುತ್ತೇವೆ. ಕೀಳರಿಮೆಯೂ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲೇ ಗಂಡ ಹೆಂಡತಿಯೊಂದಿಗೆ, ಮಕ್ಕಳೊಂದಿಗೆ ಹೇಗೆ ಮಾತನಾಡಬೇಕೆಂದು ತಿಳಿಯದೆ ಜಗಳಗಳಾಗುತ್ತವೆ, ಪರಸ್ಪರರ ನಡುವೆ ಸಂಬಂಧ ನಿರ್ವಹಿಸುವಲ್ಲಿ ಸೋಲುತ್ತಿದ್ದೇವೆ.
ಹಿಂದೆಲ್ಲ ಮಾನಸಿಕ ರೋಗಕ್ಕೆ ಮದ್ದಿಲ್ಲ ಎನ್ನುತ್ತಿದ್ದರು, ರೋಗಿಗಳನ್ನು ಜೈಲುವಾಸಿಗಳಂತೆ ಉಪಚರಿಸುತ್ತಿದ್ದರು. ಆದರೆ ಮಾನಸಿಕ ಆರೋಗ್ಯ ಕಾಯ್ದೆ ಜಾರಿಯಾದಾಗಿನಿಂದ ಅವರಿಗೆ ಇತರೆ ರೋಗಿಗಳಂತೆ ಒಂದೇ ವಾರ್ಡಿನಲ್ಲಿ ತಾರತಮ್ಯವಿಲ್ಲದೆ ಉಪಚರಿಸಲಾಗುತ್ತಿದೆ. ಶೇ.90 ರೋಗ ನಿಯಂತ್ರಣದಲ್ಲಿಡಬಹುದು. ಈ ಬಗ್ಗೆ ಎಲ್ಲರಲ್ಲಿ ಅರಿವು ಹೆಚ್ಚಬೇಕು.ಮೊದಲೆಲ್ಲ ಆತ್ಮಹತ್ಯೆ ಅಪರಾಧವಾಗಿತ್ತು. ಈ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಗೆ ಮಾನಸಿಕ ಆರೋಗ್ಯದ ಅವಶ್ಯಕತೆ ಇದೆ ಎಂದು ಚಿಕಿತ್ಸೆ ನೀಡಲಾಗುತ್ತದೆ. ಯವುದೇ ಮಾನಸಿಕ ರೋಗಿಯನ್ನು ಅವಮಾನಿಸುವಂತಿಲ್ಲ. ಕಾಯ್ದೆ ಅವರಿಗೆ ಹಲವಾರು ಹಕ್ಕುಗಳನ್ನು ನೀಡಿದೆ.
ಪ್ರಸ್ತುತ ಮಾನಸಿಕ ಅಸ್ತವ್ಯಸ್ತತೆಯೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಗಂಡ ಹೆಂಡತಿ ಒಟ್ಟಿಗಿದ್ದರೆ ಅದೇ ಕೂಡು ಕುಟುಂಬವೆಂಬಂತೆ ಆಗಿದೆ. ಶೇ.50 ಪ್ರಕರಣಗಳು ವೈವಾಹಿಕ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಸಮರ್ಪಕ ಲೈಂಗಿಕ ಶಿಕ್ಷಣ ಇಲ್ಲದಿರುವುದು, ಸಂಬಂಧ ನಿರ್ವಹಣೆ ವೈಫಲ್ಯದ ಕಾರಣಗಳಿಗಾಗಿದೆ. ಆದ್ದರಿಂದ ಯುವಜನತೆಗೆ ಸಮರ್ಪಕವಾದ ಲೈಂಗಿಕ ಶಿಕ್ಷಣ ನೀಡುವುದು ಪ್ರಮುಖವಾಗಿದೆ. ಟಿವಿ ಇತರೆ ಮಾಧ್ಯಮಗಳಲ್ಲಿ ಇರುವಂತೆ ಬದುಕು ಇರುವುದಿಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈದ್ಯರು ತಂಬಾಕು, ಕುಡಿತ ಮಾತ್ರವಲ್ಲ ಮೊಬೈಲ್ ಗೀಳಿನ ಬಗ್ಗೆ ಈಗಿನಿಂದಲೇ ಎಚ್ಚರಿಸಬೇಕು ಎಂದು ಹೇಳಿದ್ದಾರೆ.
ಹಾಗೆಯೇ ಸದಾ ಒತ್ತಡದಲ್ಲಿರುವ ಸರ್ಕಾರಿ ಅಧಿಕಾರಿ/ಉದ್ಯೋಗಿಗಳು ಮಾನಸಿಕ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬೇಕು. ಹಾಗೂ ವಿವಿಧ ಇಲಾಖೆಗಳು ತಮ್ಮ ಸುತ್ತಮುತ್ತಲಲ್ಲಿ ಕಂಡು ಬರುವ ಮಾನಸಿಕ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.