Volleyball tournament ಪದವಿಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಕೂಲ್ ಆಫ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ 67ನೇ ರಾಷ್ಟ್ರಮಟ್ಟದ 19ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟವನ್ನು 2024ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ನಗರದ ನೆಹರೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ರೀಡಾಕೂಟದಲ್ಲಿ ತಜ್ಞ ಹಾಗೂ ನುರಿತ ತೀರ್ಪುಗಾರರನ್ನು ನಿಯೋಜಿಸಲು ಕ್ರಮವಹಿಸಲಾಗಿದೆ. ತೀರ್ಪುಗಾರರು ಪಾರದರ್ಶಕವಾಗಿ ತೀರ್ಪು ನೀಡುವಂತೆ ನೋಡಿಕೊಳ್ಳಲು ಸೂಚಿಸಿರುವುದಾಗಿ ಅವರು ನುಡಿದರು.
ದೇಶದ 28ರಾಜ್ಯಗಳ ಕ್ರೀಡಾಪಟುಗಳು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಅವರ ನಿರೀಕ್ಷೆಯ ಊಟೋಪಹಾರ, ವಸತಿ ಹಾಗೂ ಯಾವುದೇ ಅಡಚಣೆ ಉಂಟಾಗದ0ತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲಾಗಿದೆ. ಆಹ್ವಾನಿತ ಕ್ರೀಡಾಪಟುಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ಮೂರು ದಿನಗಳ ಕಾಲ ಪ್ರಾಥಮಿಕ ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂಧಿಗಳನ್ನು ಶಿಪ್ಟ್ ಆಧಾರದ ಮೇಲೆ ನಿಯೋಜಿಸಲಾಗಿದೆ. ಮಹಿಳಾ ಕ್ರೀಡಾಳುಗಳು ತಂಗುವ ಸ್ಥಳಗಳ ಮೇಲ್ವಿಚಾರಣೆಗಾಗಿ ಜವಾಭ್ದಾರಿಯುತ ಮಹಿಳಾ ಅಧಿಕಾರಿ ಸಿಬ್ಬಂಧಿಗಳನ್ನು ನಿಯೋಜಿಸಲು ಸೂಚಿಸಲಾಗಿದೆ.
ಅಲ್ಲದೇ ತಂಗುವ ಸ್ಥಳಗಳಲ್ಲಿ ವಿಡಿಯೋ ಕ್ಯಾಮರಾಗಳನ್ನು ನಿಯೋಜಿಸಲು ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ತಂಗುವ ಸ್ಥಳಗಳ ಸ್ವಚ್ಚತೆ, ಶುದ್ಧ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯಗಳ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚಿಸಿದ ಅವರು, ಶಿವಮೊಗ್ಗಕ್ಕೆ ಆಗಮಿಸುವ ಕ್ರೀಡಾಳುಗಳಿಗೆ ಎಲ್ಲಾ ಮಾಹಿತಿ ಇರುವ ಕೈಪಿಡಿಯನ್ನು ಎಲ್ಲಾ ರಾಜ್ಯಗಳ ಕ್ರೀಡಾತಂಡಗಳ ಮುಖ್ಯಸ್ಥರಿಗೆ ತಲುಪಿಸುವಂತೆ ಹಾಗೂ ಅಗತ್ಯ ಮಾಹಿತಿಗಾಗಿ ಸಂಪರ್ಕಿಸುವ ಅಧಿಕಾರಿಗಳ ಮಾಹಿತಿ ಒದಗಿಸುವಂತೆ ಹಾಗೂ ಇದರೊಂದಿಗೆ ಜಿಲ್ಲೆಯ ವಿಶೇಷತೆ ಮತ್ತು ಭೌಗೋಳಿಕವಾಗಿ ಪರಿಚಯಿಸುವ ಮಾರ್ಗದರ್ಶಿಕೆ ನೀಡುವಂತೆ ಅವರು ಸಲಹೆ ನೀಡಿದರು.
Volleyball tournament ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಶೇಷವಾಗಿ ಪ್ರತಿಬಾರಿಯೂ ಊಟದ ಮಾದರಿಯನ್ನು ಪಡೆದು ತಪಾಸಣೆ ನಡೆಸುವಂತೆ ಸೂಚಿಸಿದ ಅವರು, ಈ ಕಾರ್ಯಕ್ರಮದ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ಹಲವು ಸಮಿತಿಗಳನ್ನು ನಿಯೋಜಿಸಲಾಗಿದ್ದು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು, ನಿರಂತರವಾಗಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೃಷ್ಣಪ್ಪ, ಶಿಕ್ಷಣ ಇಲಾಖೆ ಕ್ರೀಡಾ ವಿಭಾಗದ ಉಪನಿರ್ದೇಶಕ ಗುಬ್ಬಿಗೂಡು ರಮೇಶ್, ಜಿಲ್ಲಾ ಕ್ರೀಡಾಧಿಕಾರಿ ಮಂಜುನಾಥ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹಾಗೂ ಕ್ರೀಡಾಕೂಟದ ಅತಿಥ್ಯ ನೀಡುತ್ತಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
