National Farmer’s Day ನಾಡಿಗೆ ಅನ್ನ ನೀಡುವ ರೈತರಿಗೆ ಕೃತಜ್ಞತೆ ಹೇಳಲು ಸರ್ಕಾರ ‘ರೈತ ದಿನ’ ಆಚರಿಸುವ ನಿರ್ಧಾರ ಕೈಗೊಳ್ಳಲಿ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಆಗ್ರಹಿಸಿದರು.
ಸೊರಬಪಟ್ಟಣದ ತಾಲೂಕು ಕಚೇರಿ ಮುಂಭಾಗ ಸರ್ಕಾರದಿಂದ ರಾಷ್ಟ್ರೀಯ ರೈತ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸುವಂತೆ ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ನಾನಾ ಸಂತರು, ಮಹಾಪುರುಷರ ಜಯಂತಿಯಂತೆ ನಾಡಿಗೆ ಅನ್ನ ನೀಡುವ ಕೃಷಿಕರನ್ನು ಗೌರವಿಸಲು ರೈತ ದಿನ ಆಚರಿಸದಿರುವುದು ವಿಷಾದನೀಯ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದಿಂದ ರೈತದಿನಾಚರಣೆಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಈಗಾಗಲೇ ಸಮಿತಿಯಿಂದ ಕಳೆದ 2016ರಿಂದಲೂ ರೈತ ದಿನಾಚರಣೆ ಆಚರಿಸುತ್ತಾ ಮನವಿ ಸಲ್ಲಿಸುತ್ತಲೆ ಬರಲಾಗುತ್ತಿದೆ.
ಸರ್ಕಾರದಿಂದಲೇ ರೈತ ದಿನ ಆಚರಿಸಿ ಈ ಮೂಲಕ ವಿಶೇಷ ಯೋಜನೆಗಳನ್ನು ಅಂದು ಸರ್ಕಾರ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
National Farmer’s Day ಪಟ್ಟಣದ ಪುರಸಭೆ ಮುಂಭಾಗದ ವೃತ್ತ ಸೇರಿದಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ರೈತ ವೃತ್ತ ಸ್ಥಾಪಿಸಬೇಕು. ರೈತ ದಿನಾಚರಣೆಯಂದು ಉತ್ತಮ ರೈತರನ್ನು ಗೌರವಿಸಬೇಕು. ಪ್ರತಿ ಗ್ರಾಮಗಳಲ್ಲಿ ಎರಡು ಎಕರೆ ಒಕ್ಕಲು ಕಣ ನಿರ್ಮಿಸಬೇಕು. ಗೋಮಾಳಗಳನ್ನು ಜಾನುವಾರುಗಳಿಗೆ ಮೀಸಲಿರಿಸಬೇಕು.
ಅಧಿವೇಶನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಡಿ. 15ರಿಂದ ಪುರಸಭೆ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಉಪಾಧ್ಯಕ್ಷ ಕೆ.ವಿ. ದತ್ತಾತ್ರೇಯ, ಕಾರ್ಯದರ್ಶಿ ಶರತ್ ಸ್ವಾಮಿ, ಪ್ರಮುಖರಾದ ಶಿವಯೋಗಿಸ್ವಾಮಿ ಸುತ್ತೂರುಮಠ, ಶಿವಾನಂದ, ಹನುಮಂತ, ರಮೇಶ್, ರಾಜು ಎಲ್. ಶೇಟ್, ಲೋಹಿತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
