Wednesday, October 2, 2024
Wednesday, October 2, 2024

Sapna Book House ಪುಸ್ತಕ ಪ್ರಪಂಚದ ಶಹನ್ ಶಾ: ಸುರೇಶ್ ಶಾ

Date:

ಲೇ: ಕೆ .ರಾಜಕುಮಾರ್

Sapna Book House ಪುಸ್ತಕಗಳೊಂದಿಗೆ ಕಳೆದ ಐದು ದಶಕಗಳ ಕಾಲ ತಳಕು ಹಾಕಿಕೊಂಡ ಹೆಸರು; ಸುರೇಶ್ ಶಾ. ಪುಸ್ತಕಲೋಕದ ಮಹತ್ತ್ವಾಕಾಂಕ್ಷಿ . ಬೆಂಗಳೂರಿನ ಬೀದಿ ಬದಿಯಲ್ಲಿ ಪುಸ್ತಕ ಹರಡಿ ಮಾರುತ್ತಿದ್ದ ಸುರೇಶ್, ದುಡಿಮೆಯನ್ನೇ ಮಂತ್ರವಾಗಿಸಿಕೊಂಡು, ಬೆವರು ಬಸಿದು ಪುಸ್ತಕಗಳಿಗಾಗಿಯೇ ಭವ್ಯ ಸಪ್ನಸೌಧವೊಂದನ್ನು ಕಟ್ಟಿದವರು.

ಸಾಹಿತ್ಯವೆಂದರೆ ಪರಿಷತ್ತು, ಸಿನಿಮಾ ಎಂದರೆ ಡಾ. ರಾಜ್‌ಕುಮಾರ್ ಎಂಬ ಜನಪ್ರಿಯ ಸಮೀಕರಣಗಳಿದ್ದಾಗ, ಪುಸ್ತಕವೆಂದರೆ ಸಪ್ನ ಎಂಬ ಸಮೀಕರಣವೂ ಸಾಧ್ಯವಾಗುವಂತೆ ಮಾಡಿದವರು! ಇದಕ್ಕಾಗಿ ಅವರು ತಮ್ಮ ಇಡೀ ಬದುಕನ್ನು ತೇದರು. ತಮ್ಮ ಕನಸನ್ನು ಹಂತಹಂತವಾಗಿ ನನಸಾಗಿಸಿಕೊಂಡರು.

ಇದಕ್ಕಾಗಿ ಸುರೇಶ್ ಶಾ ಅವರು ಶ್ರಮಿಸಿದ್ದು ಸರಿಯಾಗಿ ಅರ್ಧ ಶತಮಾನ. ಇಡೀ ಭಾರತದಲ್ಲಿ ಸಪ್ನ ಬುಕ್ ಹೌಸನ್ನು ಸರಿಗಟ್ಟುವಂತಹ, ಕನಿಷ್ಠ ಅದರ ಹತ್ತಿರಕ್ಕೆ ಸರಿದು ನಿಲ್ಲುವಂತಹ ಇನ್ನೊಂದು ಮಳಿಗೆ ಇಲ್ಲ. ಪುಸ್ತಕಗಳ ಸಂಖ್ಯೆ, ವಿಷಯ ವೈವಿಧ್ಯ, ಬಗೆಬಗೆಯ ಗಾತ್ರ ಹೀಗೆ ಯಾವ ಸಂಗತಿಯಲ್ಲೂ ಸಪ್ನಾಗೆ ಸರಿಗಟ್ಟುವ ಪುಸ್ತಕ ಭಂಡಾರ ಇನ್ನೊಂದಿಲ್ಲ.

ಕನ್ನಡ ಪುಸ್ತಕ ಮಳಿಗೆಗಳಿಗೆ ಅಸ್ಮಿತೆ ತಂದುಕೊಟ್ಟವರು ಸುರೇಶ್ ಶಾ. ಕನ್ನಡ ಪುಸ್ತಕಗಳ ಸೀಮಿತ ಮಾರುಕಟ್ಟೆಯನ್ನು ಅಪಾರವಾಗಿ ವಿಸ್ತರಿಸಿದವರು. ಕನ್ನಡ ಪುಸ್ತಕವೊಂದರ ಸಾವಿರ ಪ್ರತಿಗಳ ಮಾರಾಟಕ್ಕೆ ಹತ್ತು ವರ್ಷ ಬೇಕಾಗುತ್ತದೆ ಎಂಬ ಸಾರಸ್ವತಲೋಕದ ರೂಢಿಗತ ನಂಬಿಕೆಯನ್ನು ತೊಡೆದು ಹಾಕಿದರು.

ಕನ್ನಡ ಕೃತಿಗಳ ಮಾರಾಟದ ಸಾಧ್ಯತೆಗಳನ್ನು ಪರಿಚಯಿಸಿದರು, ವಿಸ್ತರಿಸಿದರು. ಕನ್ನಡ ಪುಸ್ತಕೋದ್ಯಮ ಎಂಬುದು ದುಃಸ್ವಪ್ನವಲ್ಲ, ಇಲ್ಲಿಯೂ ಸಹ ‘ಕಮಾಯ್’ ಉಂಟು ಎಂಬುದನ್ನು ಸ್ವತಃ ಸಾಕಾರಗೊಳಿಸಿ ಇತರರಿಗೆ ಮನಗಾಣಿಸಿದವರು. ಇಲ್ಲಿ; ಸುರಿದ ಕಾಸನ್ನು ಬಾಚಿಕೊಳ್ಳಲೂ ಸಾಧ್ಯ ಎಂದು ತೋರಿಸಿಕೊಟ್ಟವರು. ಪುಸ್ತಕ ಎನ್ನುವುದು ಸಂಸ್ಕೃತಿ, ಅಷ್ಟೇ ಅಲ್ಲ; ಅದೊಂದು ಉದ್ಯಮವೂ ಹೌದು ಎಂದ ಸುರೇಶ್, ಅದನ್ನೇ ಸಾಧಿಸಿ ತೋರಿ ನೂರಾರು ಜನರಿಗೆ ಉದ್ಯೋಗಭಾಗ್ಯ ಕಟಾಕ್ಷಿಸಿದರು.

ನಾಡಿನ 19 ಕಡೆ ಸಪ್ನ ಬುಕ್ ಹೌಸ್‌ನ ಶಾಖೆಗಳು ಬಿಳಲು ಬಿಟ್ಟುಕೊಂಡವು.

ಕನ್ನಡ ಪುಸ್ತಕವೆಂದರೆ ಅರಣ್ಯರೋದನವಲ್ಲ, ಅದೊಂದು ಮಹಾಸಂಭ್ರಮವೆಂದು ಮನಗಾಣಿಸಿದವರೂ ಅವರೇ! ಇತರ ಪ್ರಕಾಶನ ಸಂಸ್ಥೆಗಳೂ, ತಮ್ಮ ಜಡತ್ವ ಕೊಡವಿಕೊಂಡು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುವಂತಹ ಪ್ರೇರಣೆಯನ್ನು ಒದಗಿಸಿದರು.

ಕನ್ನಡಿಗರು ಕೊಂಡು ಓದುವುದಿಲ್ಲ ಎಂಬ ಆರೋಪವನ್ನು ಅಳಿಸಿ, ಅವರ ಹೆಸರಿಗೆ ಅಂಟಿಕೊಂಡಿದ್ದ ಕಳಂಕವನ್ನು ತೊಡೆದವರಲ್ಲಿ ಅವರು ಪ್ರಮುಖರು. ಸಪ್ನದಲ್ಲಿ ಕನ್ನಡ ಪುಸ್ತಕಗಳ ಜತೆಗೆ, ಇಂಗ್ಲಿಷ್ ಪುಸ್ತಕ, ಆಟಿಕೆ, ಭಿತ್ತಿಪಟ, ಬೋಧನೋಪಕರಣ, ಉಡುಗೊರೆ, ಪಠ್ಯಪುಸ್ತಕ, ಧ್ವನಿಸುರುಳಿ, ಸಿಡಿ ರಾಮ್ಸ್‌ಗಳಿಗೂ ಪ್ರತ್ಯೇಕ ವಿಭಾಗಗಳು ನಿಗದಿಗೊಂಡವು. ಸುರೇಶ್ ಶಾ; ತಾವು ಕ್ರಮಿಸುವ ಮಾರ್ಗಕ್ಕಿಂತ ಗೆಲುವು ಮತ್ತು ಯಶಸ್ಸಿಗೆ ಪ್ರಾಮುಖ್ಯ ನೀಡಿದರು.

Sapna Book House ಆರಂಭದ ದಿನಗಳಲ್ಲಿ ಹಣವಿಲ್ಲದೆ, ಬಂಧು, ಬಳಗದಿಂದಲೇ ಉಪೇಕ್ಷೆಗೆ ಒಳಗಾದ ಕಹಿಯನ್ನು ಅವರು ಮರೆತಿರಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿದರು. ಸಪ್ನನೌಕೆ ಮುಳುಗದೆ, ದೂರ ತೀರ ಸೇರುವಂತೆ ಸದಾ ಕಟ್ಟೆಚ್ಚರ ವಹಿಸಿದರು. ರೂ. 250/- ಮೂಲ ಬಂಡವಾಳದೊಂದಿಗೆ ಪುಸ್ತಕಲೋಕವನ್ನು ಪ್ರವೇಶಿಸಿದವರು. ಸತತ ಶ್ರಮದಿಂದ ‘ರೋಡ್‌ಪತಿ’ಯೊಬ್ಬ ಕರೋಡ್‌ಪತಿಯಾದ ಸಾಹಸಗಾಥೆ ಅವರದು. ಹಾಗಾಗಿ ಸದಾ ಅವರೊಂದು ಬೆರಗು.

ಸುರೇಶ್, ಹೆಚ್ಚಾಗಿ ಓದಿಕೊಂಡವರಲ್ಲ. ಆದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿದರು. ಪುಸ್ತಕ ಸಾರುವ ಸಂಸ್ಕೃತಿಯನ್ನು ತಮ್ಮ ಮಕ್ಕಳ ವ್ಯಕ್ತಿತ್ತ್ವದ ಭಾಗವಾಗುವಂತೆ ಮಾಡಿದರು. ನಿತಿನ್ ಶಾ, ದೀಪಕ್ ಶಾ ಮತ್ತು ಪರೇಶ್ ಶಾ; ಈ ಮೂವರೂ ಕನ್ನಡ ಪುಸ್ತಕೋದ್ಯಮದ ವಾರಸುದಾರರಾಗುವಂತೆ ಮಾಡಿದರು. ಸಪ್ನದ ದಳಪತಿಗಳನ್ನಾಗಿಸಿದರು. ಕಾಯಕನಿಷ್ಠ ಸಿಬ್ಬಂದಿಯನ್ನು ಉಸ್ತುವಾರಿಗೆ ಬಿಟ್ಟರು.

ಶಾ, ಪುಸ್ತಕಲೋಕದ ಜಾದೂಗಾರ. ಸಪ್ನ ಎಂಬ ಹೆಸರಿನಲ್ಲೇ ಕಮಾಲ್ ಇದೆ ನೋಡಿ ಎಂದವರು. ಸಪ್ನದ ಈ ದಣಿಯಲ್ಲಿ ಕಡೆಯತನಕ ಕಾರ್ಮಿಕನೊಬ್ಬ ಜಾಗೃತನಾಗಿದ್ದ! ಕೋಟಿಗಳಿಗೆ ಹೆಡೆಯೆತ್ತಿದರೂ, ಪ್ರತಿದಿನ ಬೆಳಗ್ಗೆ ಕೆಲಸಗಾರರು ಬರುವ ಮುನ್ನ ತಾವೇ ಸ್ವತಃ ಕಸ ಗುಡಿಸಿ, ನೆಲ ಸಾರಿಸಿ ಧೂಳು ಒರೆಸಿ ಪುಸ್ತಕಗಳ ಮೈದಡವಿ ತಣಿಯುತ್ತಿದ್ದ ಅಪರೂಪದ ದಣಿ ಅವರು. ತಮ್ಮ ನಿತ್ಯದ ಈ ಕ್ರಮವನ್ನು ಸ್ವಂತೀ ಪಟಗಳನ್ನು ತೆಗೆದು ಹರಡಿ ಪ್ರಚಾರದ ಸರಕನ್ನಾಗಿಸಿಕೊಳ್ಳಲಿಲ್ಲ.

ಸಪ್ನ ಬುಕ್ ಹೌಸ್; ಸದ್ದಿಲ್ಲದೆ ಸ್ವಚ್ಛತಾ ಅಭಿಯಾನ ಕೈಗೊಂಡಿತು. ಇದು ಒಂದಲ್ಲ, ಎರಡಲ್ಲ, ಐವತ್ತು ವರ್ಷಗಳನ್ನು ಮೀರಿದ ಸುದೀರ್ಘ ಯಾನ. ಅವರು ಕನ್ನಡ ಪುಸ್ತಕಗಳಿಗೆ ಲಕಲಕಿಸುವ ಭಾಗ್ಯವನ್ನು ಪ್ರಸಾದಿಸಿದವರು. ಕನ್ನಡ ಪುಸ್ತಕಗಳೆಲ್ಲ ಒಂದೇ ಸೂರಿನಡಿಯಲ್ಲಿ ಮಾರಾಟಕ್ಕೆ ಲಭ್ಯವಾಗಬೇಕೆಂಬ ಕನ್ನಡಿಗರ ಶತಮಾನದ ನಿರೀಕ್ಷೆ ಕಾರ್ಯಗತವಾಗುವಂತೆ ಮಾಡಿದ ಕಾರ್ಯಕ್ಷಮತೆ ಅವರದು. ಎಂ.ಎಂ. ಕಲ್ಬುರ್ಗಿ, ಚಿದಾನಂದಮೂರ್ತಿ, ವೆಂಕಟಾಚಲ ಶಾಸ್ತ್ರೀ, ಹಂಪನಾ, ನಿಸಾರ್ ಅಹಮದ್, ಸುಮತೀಂದ್ರ ನಾಡಿಗ್ ಅಂತಹವರ ಸಮಗ್ರ ಸಾಹಿತ್ಯವನ್ನು ಹೊರತರುವ ಧೈರ್ಯ ತೋರಿದ್ದೇ ಸಪ್ನ‌‌. ನಮ್ಮ ಹಲವು ವಿಶ್ವವಿದ್ಯಾಲಯಗಳ ಕನ್ನಡ ಪ್ರಸಾರಾಂಗಗಳ ಒಟ್ಟು ಪ್ರಕಟಣೆಗಳ ಸಂಖ್ಯೆಯನ್ನು ಸಪ್ನ ಮೀರಿಸುತ್ತದೆ!

ಸಪ್ನದ ಕನ್ನಡ ವಿಭಾಗದ ಮೊದಲ ವಾರ್ಷಿಕೋತ್ಸವ 30-10-1989ರಂದು ನಡೆಯಿತು. ಇದರ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬ ಪ್ರಶ್ನೆ ಎದುರಾಯಿತು. ಡಾ. ಶಿವರಾಮ ಕಾರಂತರನ್ನು ಕರೆಯಿರಿ ಎಂಬ ಸಲಹೆಯನ್ನು ನಾನು ನೀಡಿದೆ. ಸುರೇಶ್ ಶಾ ಸಮ್ಮತಿಸಿದರು. ಕಾರಂತರಂತಹ ಹಿರಿಯರು ಬರುತ್ತಾರೆಯೇ ಎಂದರು. ಎಲ್ಲ ವಿವರಗಳನ್ನೂ ಒಳಗೊಂಡ ಪತ್ರವನ್ನು ನಾನೇ ಬೆರಳಚ್ಚಿಸಿಕೊಟ್ಟೆ. ಕಾರಂತರು ಬರುತ್ತೇನೆಂದು ಉತ್ತರಿಸಿದರು! ನನ್ನ ನಿರೀಕ್ಷೆ ನಿಜವಾಯಿತು.

ಅವರು ಬಂದು ಮಳಿಗೆಯ ಅಂದ, ಚೆಂದ ಕಂಡು ಮರುಳಾದರು‌. ವಿಶ್ವದ ಅನೇಕ ಪುಸ್ತಕ ಮಳಿಗೆಗಳನ್ನು ತಾವು ನೋಡಿರುವು ದಾಗಿಯೂ, ಆದರೆ ಪುಸ್ತಕಗಳನ್ನು ಇಷ್ಟು ಆಕರ್ಷಕವಾಗಿ ಎಲ್ಲಿಯೂ ಪ್ರದರ್ಶಿಸಿಲ್ಲವೆಂದು ಅಂದಿನ ತಮ್ಮ ಭಾಷಣದಲ್ಲಿ ಸಾರಿದರು. ಶಿವರಾಮ ಕಾರಂತರು, ಸುರೇಶ್ ಶಾ ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದ ಘಟನೆಗೆ ಅಂದು ಮಾಧ್ಯಮಗಳು ಸಾಕ್ಷಿಯಾದವು. ಅಲ್ಲಿಂದ ಸಪ್ನ ನೆಗೆಯಿತು; ಜಿಗಿಯಿತು, ಚೆಂಗುಚೆಂಗೆಂದು ಹಾರಿತು.

ಸುರೇಶ್ ಶಾ ಈ ಅವಕಾಶವನ್ನು ಬಳಸಿಕೊಂಡರು. ಕಾರಂತರು ತಮ್ಮ ಎಲ್ಲ ಪ್ರಕಟಣೆಗಳನ್ನು ಹೊರತರಲು ಸಪ್ನಕ್ಕೆ ಆಣತಿಯನ್ನಿತ್ತರು. ಅಂದಿನ ಕನ್ನಡ ವಿಭಾಗದ ವ್ಯವಸ್ಥಾಪಕರಾದ ಎಚ್.ಕೆ. ಲಕ್ಷ್ಮೀನಾರಾಯಣ ಅಡಿಗರೊಂದಿಗೆ ಸಾಲಿಗ್ರಾಮದಲ್ಲಿದ್ದ ಕಾರಂತರ ನಿವಾಸಕ್ಕೆ ಭೇಟಿ ನೀಡಿದೆ. ಅವರು ತಮ್ಮ 400+ ಕೃತಿಗಳ ಪ್ರತಿಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಿ ಕಾರಿನಲ್ಲಿ ಇರಿಸಿದರು. ಯಾವುದನ್ನು ಬೇಕಾದರೂ ಪ್ರಕಟಿಸಿ ಎಂದು ಮುಕ್ತ ಅನುಮತಿ ನೀಡಿದರು. ಕಾರಂತರನ್ನು ಸಪ್ನಕ್ಕೆ ಪರಿಚಯಿಸಿ, ಅವರು ಅದರ ಮೊದಲ ವಾರ್ಷಿಕೋತ್ಸವಕ್ಕೆ ಬರಲು ಕಾರಣನಾದ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅನಂತರ ಪ್ರಸಿದ್ಧ ಸಾಹಿತಿಗಳು ತಮ್ಮ ಕೃತಿಗಳು ಸಪ್ನದಿಂದ ಪ್ರಕಟವಾಗಲು ಹಾತೊರೆದು ಸಾಲುಗಟ್ಟಿದರು. ಗುಜರಾತ್ ಮೂಲದ ಸುರೇಶರ ಸಾಧನೆಯಿದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶಾ ಅವರು ಕನ್ನಡಿಗರಿಂದ ಪಡೆದೂ ಹೋದವರು; ಕೊಟ್ಟೂ ಹೋದವರು. ಕೊಟ್ಟಿದ್ದು ಮೂರ್ತರೂಪದಲ್ಲಿ ಕಣ್ಣಮುಂದಿದೆ. ಅವರ ಕೊಡುಗೆಯಿಂದಾಗಿ ಕನ್ನಡ ಹೊತ್ತಗೆಗಳ ದಿಕ್ಕು-ದೆಸೆಯೇ ಬದಲಾಯಿತು. ಅವರು ಕನ್ನಡವನ್ನು ಏರಿಸಿ, ಹಾರಿಸಿ, ಬಗೆಬಗೆಯಲ್ಲಿ ಬಿತ್ತರಿಸಿದರು. ಅವರು ನಮ್ಮ ಕನ್ನಡ ಪುಸ್ತಕೋದ್ಯಮದ ಶಹನ್‌ಶಾ! ಹೌದು ಮೊದಲ ಚಕ್ರವರ್ತಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...