SRIVIJAYA KALANIKETHANA TRUST ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಆಗಿದ್ದು, ಆರೋಗ್ಯ ಜಾಗೃತಿಗೆ ಆದ್ಯತೆ ನೀಡಬೇಕು ಎಂದು ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಸಹ್ಯಾದ್ರಿ ಪ್ರೌಢಶಾಲೆ ಸಭಾಂಗಣದಲ್ಲಿ ಡಾ. ಪವಿತ್ರಾ ಅವರ ಶ್ರೀ ವಿಜಯ ಕಲಾನಿಕೇತನ ವತಿಯಿಂದ ಆಯೋಜಿಸಿದ್ದ ಒಂದು ವಾರದ “ಆನಂದ ಆರೋಗ್ಯ” ವಿಶೇಷ ನೃತ್ಯ ಪ್ರಾತ್ಯಕ್ಷಿಕಾ ಮಾಲಿಕಾ ಉದ್ಘಾಟಿಸಿ ಮಾತನಾಡಿ, ಮಾನಸಿಕ ಒತ್ತಡ ಮಾಡಿಕೊಳ್ಳದೇ ಆರೋಗ್ಯ ಸದೃಢವಾಗಿಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯೆ ಡಾ. ಪವಿತ್ರಾ ಮಾತನಾಡಿ, ನೃತ್ಯವನ್ನು ಬೆಸೆಯುವುದರ ಮುಖಾಂತರ ಮಕ್ಕಳ ಮನೋವಿಕಾಸಕ್ಕೆ ಒತ್ತು ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಕನ್ನಡ ಕಾವ್ಯಗಳನ್ನು, ಕವಿಗಳನ್ನು, ಕನ್ನಡ ಇತಿಹಾಸ ಸಂಸ್ಕೃತಿ ಪರಂಪರೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಕನ್ನಡ ಸಾಹಿತ್ಯವನ್ನು ಹೆಚ್ಚು ಯುವಸಮುದಾಯಕ್ಕೆ ತಲುಪಿಸುವ ಆಶಯ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾದ್ಯಂತ ಕನ್ನಡ ಕಾವ್ಯಗಳನ್ನು ಆಯ್ದ ನೃತ್ಯ ಮಾಲಿಕೆ ಮುಖಾಂತರ ಪ್ರಸ್ತುತ ಪಡಿಸಲಾಗುವುದು. ವಿವಿಧ ಶಾಲೆ, ಸಂಘ ಸಂಸ್ಥೆಗಳಲ್ಲಿ ಒಂದು ವಾರಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶ್ರೀನಿಧಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೊಳಿಗ ವಾಸಪ್ಪಗೌಡ ಮಾತನಾಡಿ, ಕಲೆ ಹಾಗೂ ವಿದ್ಯೆಗೂ ಪೂರಕ ಸಂಬಂಧ ಇದ್ದು, ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳಿಂದ ತುಂಬಾ ಅನುಕೂಲವಾಗುತ್ತದೆ. ಮಕ್ಕಳ ಮನಸ್ಸು ವಿಕನಸಗೊಳ್ಳುತ್ತದೆ ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್ ಮಾತನಾಡಿ, ವೈದ್ಯೆ ಡಾ. ಪವಿತ್ರಾ ಅವರ ಪ್ರಯತ್ನ ಶ್ಲಾಘನೀಯ. ಮಕ್ಕಳಿಗೆ ನೃತ್ಯದ ಮುಖಾಂತರ ಅತ್ಯಂತ ಪ್ರಮುಖ ವಿಷಯಗಳ ಅರಿವು ಮೂಡುತ್ತದೆ ಎಂದು ತಿಳಿಸಿದರು.
SRIVIJAYA KALANIKETHANA TRUST ವೇದಿಕೆಯಲ್ಲಿ ಆಡಳಿತಾಧಿಕಾರಿ ಟಿ.ಪಿ.ನಾಗರಾಜ್, ಗುರುಮೂರ್ತಿಗೌಡ, ಮುಖ್ಯಶಿಕ್ಷಕ ಕುಮಾರಸ್ವಾಮಿ, ಸಲ್ಮಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.