DC Shivamogga ಮಗುವಿನ ಉಳಿವು, ವಿಕಾಸ ಮತ್ತು ಆರೈಕೆಯ ಪ್ರಾಮುಖ್ಯತೆ ಬಗ್ಗೆ ಜನಜಾಗೃತಿ ಮೂಡಿಸುವ ಸದುದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನವೆಂಬರ್ 15 ರಿಂದ 21 ರ ವರೆಗೆ ರಾಷ್ಟ್ರೀಯ ನವಜಾತಶಿಶು ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಏರ್ಪಡಿಸಲಾಗಿದ್ದ ವೈದ್ಯಾಧಿಕಾರಿಗಳ ಜೊತೆಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಾಪ್ತಾಹದ ಸಂದರ್ಭದಲ್ಲಿ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವೇದಿಕೆಗಳು, ಸಮುದಾಯ ವ್ಯಾಪ್ತಿ, ಮನೆಗಳು ಮತ್ತಿತರರಿಗೆ ಪೋಷಣೆಯ ಮಾಹಿತಿ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಗುಣಮಟ್ಟ, ಸುರಕ್ಷತೆ, ಸೌಲಭ್ಯ, ನವಜಾತ ಶಿಶುಗಳ ಆರೈಕೆಯ ಸಂಪರ್ಕ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದ ಚಟುವಟಕೆಗಳನ್ನು ಆಯೋಜಿಸುವಂತೆ ಜಿಲ್ಲೆಯ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಅನಾರೋಗ್ಯಪೀಡಿತ ನವಜಾತ ಶಿಶುಗಳಿಗೆ ದಿನದ 24 ಗಂಟೆಯು ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಜಿಲ್ಲಾದ್ಯಾಂತ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಸೂಚಿಸಲಾಗಿದೆ. ನವಜಾತಶಿಶುಗಳ ಆರೈಕೆ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳುವಂತೆ ಹೆರಿಗೆ ಕೊಠಡಿಗಳು ಮತ್ತು ಪ್ರಸೂತಿ ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿನವಜಾತ ಶಿಶುಗಳ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಕಡಿಮೆ ತೂಕದ ಮತ್ತು ಅನಾರೋಗ್ಯದ ನವಜಾತಶಿಶುಗಳಿಗೆ ಹಾಗೂ ಮನೆಯಲ್ಲಿ ಹೆರಿಗೆಯಾದ ನವಜಾತ ಶಿಶುಗಳಿಗೆ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ವಿಶೇಷ ನವಜಾತ ಶಿಶುಗಳ ಆರೈಕೆಯ ಘಟಕಗಳನ್ನು ಸ್ಥಾಪಿಸಲಾಗಿದ್ದು, ಮನೆ ಆಧಾರಿತ ನವಜಾತ ಶಿಶುಗಳ ಆರೈಕೆ ಕಾರ್ಯಕ್ರಮದಡಿಯಲ್ಲಿ ಆಶಾ ಕಾರ್ಯಕರ್ತೆಯರು 42 ದಿನಗಳವರೆಗೆ ಮನೆಭೇಟಿ ನೀಡಿ ಅಪಾಯದ ಚಿಹ್ನೆಗಳನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳ ಮುಖಾಂತರ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ ಎಂದವರು ತಿಳಿಸಿದರು.
ಹೆಚ್ಚು ಗಮನ ನೀಡಿ ಆರೈಕೆ ಸೇವೆಯನ್ನು ನೀಡುವುದು ಮತ್ತು ದೂರದ ಕುಗ್ರಾಮಗಳಲ್ಲಿನ ಕುಟುಂಬಗಳು, ವರ್ಗಗಳು, ನಿರ್ಗತಿಕರು, ಕಾರ್ಮಿಕರು ,ಕೊಳಗೇರಿ ನಿವಾಸಿಗಳು, ಅಂಗವಿಕಲರು, ಅಸಂಘಟಿತ ವಲಯದ ಕಾರ್ಮಿಕರುಗಳಿಗೆ ಆರೈಕೆ ಪಡೆಯಲು 6 ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅರಿವು ಮೂಡಿಸುವುದು. ಹೆಣ್ಣು ಮಗುವಿಗೆ ಸಾಕಷ್ಟು ಗಮನ & ಆರೈಕೆ ನೀಡಲು ಸಲಹೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸೂಚಿಸಿರುವುದಾಗಿ ಅವರು ತಿಳಿಸಿದರು.
DC Shivamogga ನ್ಯೂಮೋನಿಯಾ (ಶ್ವಾಸಕೋಶ ಸೋಂಕಿನ) ನಿರ್ವಹಣೆ :
ಶಿಶು ಮರಣಕ್ಕೆ ಕಾರಣವಾಗುವ ಮಾರಣಾಂತಿಕ ಸೋಂಕುಗಳಲ್ಲಿ ಬಾಲ್ಯಾವಧಿ, ನ್ಯೂಮೋನಿಯಾ(ಶ್ವಾಸಕೋಶ ಸೋಂಕು)ವು ಪ್ರಮುಖವಾದುದಾಗಿದೆ. ಶಿಶುಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯಕ್ಕೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣ ಅವರು ಹೇಳಿದರು.
ಉತ್ತಮ ಆರೋಗ್ಯ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವುದರೊಂದಿಗೆ ಆರೋಗ್ಯ ಸೇವೆಗಳನ್ನು ಬಲಪಡಿಸಿ 2025ರ ವೇಳೆಗೆ ನ್ಯೂಮೋನಿಯಾದಿಂದ ಸಂಭವಿಸುವ ಸಾವುಗಳ ಸಂಖ್ಯೆಯನ್ನು 1000 ಜೀವಂತ ಜನನಕ್ಕೆ 3ಕ್ಕಿಂತಲೂ ಕಡಮೆ ಮಾಡುವ ಉದ್ದೇಶವನ್ನು ಆರೋಗ್ಯ ಇಲಾಖೆ ಹೊಂದಿದೆ.
ಅತೀಸಾರ ಬೇದಿ ನಿಯಂತ್ರಣ ಪಾಕ್ಷಿಕ :
ನವೆಂಬರ್ ೧೫ರಿಂದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವು ಜಿಲ್ಲೆಯಾದ್ಯಾಂತ ನಡಿಯಲಿದೆ. ಮಕ್ಕಳ ಮರಣಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆಗಳಲ್ಲಿ ಇದು ಮುಖ್ಯವಾದುದಾಗಿದೆ. ಆದ ಕಾರಣ ಇದನ್ನು ತಡೆಗಟ್ಟಲು ದೇಶ ರಾಜ್ಯ, ಜಿಲ್ಲಾದ್ಯಾಂತ ಏಕಕಾಲದಲ್ಲ ಅಭಿಯಾನ ರೂಪದಲ್ಲಿ ಸಮುದಾಯ ಜಾಗೃತಿ & ಸೇವೆ ನೀಡಲು ವಿಶೇಷ ಪಾಕ್ಷಿಕ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಈ ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ ಬದ್ಧವಾಗಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಕರಪತ್ರಗಳ ಮೂಲಕ ಎಲ್ಲರಲ್ಲೂ ಅರಿವು ಮೂಡಿಸಿ, ಸಮುದಾಯದ ಸದಸ್ಯರಿಗೂ ಕೈ ತೊಳೆಯುವ ಪ್ರಾತ್ಯಕ್ಷಿಕೆಯ ಸರಿಯಾದ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಲಾಗುವುದ. ಮಕ್ಕಳ ತಾಯಂದಿರಿಗೆ, ಶುಚಿತ್ವ ಮತ್ತು ಎದೆ ಹಾಲುಣಿಸುವ ಕ್ರಮ ಮತ್ತು ಪೂರಕ ಆಹಾರದ ಬಗ್ಗೆ ತಿಳುವಳಿಕೆ ನೀಡುವುದು. ಅತೀಸಾರ ನಿಯಂತ್ರಣದ ಮುಂಜಾಗ್ರತಾ ಕ್ರಮದ ಬಗ್ಗೆ ತಿಳಿಸಲಾಗುವುದು, ತಯಾರಿಕೆ ಮಕ್ಕಳಿಗೆ ನೀಡುವ ಪ್ರಮಾಣದ ಬಗ್ಗೆ ತಾಯಂದಿರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ & ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಬ್ಬಂದಿಗಳಿಗೆ ಆರೋಗ್ಯ ಸಹಾಯಕರಿಂದ ಮಾಹಿತಿ ಒದಗಿಸಲು ಹಾಗೂ ಎಲ್ಲರೂ ಶೌಚಾಲಯ ಬಳಸುವುದು ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಳ್ಳಲು ಸಹ ತಿಳುವಳಿಕೆ ನೀಡಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳೀ, ಆರ್.ಸಿ.ಹೆಚ್. ಅಧಿಕಾರಿ ಡಾ|| ನಾಗರಾಜನಾಯ್ಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಭಂಧಿಗಳು ಉಪಸ್ಥಿತರಿದ್ದರು.