Historical Place ನಾಡಿಗೆ ಆದರ್ಶಮಯ ಆಡಳಿತ ನೀಡಿದ ಕೆಳದಿ ಅರಸರ ಸಮಾಧಿಗಳು ಈಗ ನಶಿಸುವ ಸ್ಥಿತಿಗೆ ತಲುಪಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಬಿದನೂರಿನ ಕೊಪ್ಪಲಮಠದ ಕೆಳದಿ ಅರಸರ ಐತಿಹಾಸಿಕ ಸ್ಮಾರಕಗಳ ಒತ್ತುವರಿಯನ್ನು ತೆರವುಗೊಳಿಸಿ ಐತಿಹಾಸಿಕ ಸ್ಥಳವನ್ನು ಸಂರಕ್ಷಣೆ ಮಾಡುವ ಜೊತೆಗೆ ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು , ನಾಡಿಗೆ ಆದರ್ಶಮಯ ಆಡಳಿತ ನೀಡಿದ ಕೆಳದಿ ಅರಸರ ಸಮಾಧಿಗಳು ಈಗ ನಶಿಸುವ ಸ್ಥಿತಿಗೆ ತಲುಪಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಬಿದನೂರಿನ ಕೊಪ್ಪಲಮಠದದಲ್ಲಿ ಸಮಾಧಿಗಳನ್ನು ರಚಿಸಿ, ಸ್ಮಾರಕಗಳನ್ನು ನಿರ್ಮಿಸಲಾಗಿತ್ತು.
ಸೂಕ್ತ ರಕ್ಷಣೆ ಮತ್ತು ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಅವೆಲ್ಲವೂ ಈಗ ಒತ್ತುವರಿಯಾಗಿದೆ. ಸ್ಮಾರಕಗಳಿಗೆ ಹೋಗಲು ರಸ್ತೆ ವ್ಯವಸ್ಥೆ ಸಹ ಇಲ್ಲವಾಗಿದೆ. ನ. 1ರಂದು ಮಹಾಸಭಾ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ತಕ್ಷಣ ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಬೇಕು. ಐತಿಹಾಸಿಕ ಸ್ಮಾರಕವನ್ನು ಉಳಿಸಿ ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಜಿಲ್ಲಾಧಿಕಾರಿಗಳು ಈ ಸ್ಮಾರಕಗಳ ಅಸ್ತಿತ್ವ ರಕ್ಷಣೆ ಬಗ್ಗೆ ತಕ್ಷಣ ಗಮನ ಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ, ಕೊಪ್ಪಲಕೋಟೆಯಲ್ಲಿ ಎಲ್ಲವನ್ನೂ ಒತ್ತುವರಿ ಮಾಡಿ ಕೆಲವು ಖಾಸಗಿ ವ್ಯಕ್ತಿಗಳು ಅಡಿಕೆ ತೋಟ ನಿರ್ಮಾಣ ಮಾಡಿದ್ದಾರೆ. ಸ್ಮಾರಕಕ್ಕೆ ಹೋಗುವ ದಾರಿಯನ್ನು ಅತಿಕ್ರಮಿಸಲಾಗಿದೆ. ಶಿವಪ್ಪನಾಯಕ ಮತ್ತು ಕೆಳದಿ ರಾಣ ಚೆನ್ನಮ್ಮಾಜಿ ಸಮಾಧಿ ಪೂರ್ಣ ನಶಿಸಿ ಹೋಗುತ್ತಿದೆ. ಇಲ್ಲಿ ಶಿವಲಿಂಗ ಸೇರಿದಂತೆ ಅಮೂಲ್ಯ ವಿಗ್ರಹಗಳನ್ನು ಕದ್ದೊಯ್ಯಲಾಗಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇರುವುದೇ ಇಂತಹ ಅನಾಚಾರ ನಡೆಯಲು ಕಾರಣವಾಗಿದೆ. ಪ್ರಾಚ್ಯವಸ್ತು ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ತಕ್ಷಣ ಗಮನ ಹರಿಸಬೇಕು ಎಂದು ಹೇಳಿದರು.
Historical Place ಈ ಸಂದರ್ಭದಲ್ಲಿ ಶೇಖರಪ್ಪ ಬೇಸೂರು, ಗುರು ಕಾಗೋಡು, ಕವಿತಾ ಜಯಣ್ಣ, ವೀರಭದ್ರಪ್ಪ ಜಂಬಿಗೆ, ಕುಮಾರ, ಕಾಂತೇಶ್, ವಿರೇಶ್ ಶೆಡ್ಡಿಕೊಪ್ಪ, ಸಂಜಯ್, ಕೇಶವ ಇನ್ನಿತರರು ಹಾಜರಿದ್ದರು.