Saturday, September 28, 2024
Saturday, September 28, 2024

Karnataka Rajyotsava ರಾಜ್ಯೋತ್ಸವ ವಿಶೇಷ ಲೇಖನ

Date:

Karnataka Rajyotsava 68 ನೇ ‘ಕರ್ನಾಟಕ ರಾಜ್ಯೋತ್ಸವ’ವನ್ನು ಸಂಭ್ರಮೋತ್ಸಾಹಗಳಿಂದ ಆಚರಿಸುತ್ತಿದ್ದು ಈ ವರ್ಷದ ವಿಶೇಷತೆ ಎಂದರೆ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷಗಳು ಆಗಿರುವುದು. ಹಾಗಾದರೆ ಕರ್ನಾಟಕ ಎಂಬ ಹೆಸರಿಗೆ ಕೇವಲ 50 ವರ್ಷಗಳ ಇತಿಹಾಸವೇ? ಎಂದು ಪ್ರಶ್ನೆ ಏಳುತ್ತದೆ. ನಮ್ಮ ‘ವಿಶಾಲ ಮೈಸೂರು’ ರಾಜ್ಯಕ್ಕೆ ‘ಕರ್ನಾಟಕ’ವೆಂಬ ನಾಮಕರಣವಾಗಿ 50 ವರ್ಷಗಳೇ ಹೊರತು ಕರ್ನಾಟಕವೆಂಬ ಹೆಸರಿಗೆ 50 ವರ್ಷವಲ್ಲ. ದ್ವಾಪರ ಯುಗದಲ್ಲೇ ಅಂದರೆ ಕನಿಷ್ಠ ಐದು ಆರು ಸಾವಿರ ವರ್ಷಗಳ ಹಿಂದೆಯೇ ನಡೆದಿದೆ ಎನ್ನಲಾಗುವ ಮಹಾಭಾರತದ ವೇದವ್ಯಾಸರ ಮೂಲ ರಚನೆಯ ಭೀಷ್ಮಪರ್ವದ ಒಂಭತ್ತನೇ ಅಧ್ಯಾಯದ 59ನೇ ಶ್ಲೋಕದಲ್ಲಿ “ಕರ್ನಾಟಕ ಮಹಿಷಕಾ ವಿಕಲ್ಪಾ ಮೂಷಕಸ್ಥತಾ”… ಎಂಬುದಾಗಿ ಉಲ್ಲೇಖವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅಧಿಕೃತವಾಗಿ ನಾಲ್ಕನೇ ಶತಮಾನದ ಶೂದ್ರಕ ಕವಿಯ ‘ಮೃಚ್ಛಕಟಿಕ’ ಸಂಸ್ಕೃತ ನಾಟಕದಲ್ಲಿ ಹಾಗೂ ‘ವಿಷ್ಣುಧರ್ಮೋತ್ತರ ಪುರಾಣ’ದಲ್ಲಿ ‘ಕರ್ನಾಟಕ’ ಎಂಬ ಶಬ್ದದ ಬಳಕೆ ಕಾಣಿಸಿಕೊಂಡಿದೆ. ಇನ್ನು ಕನ್ನಡ ಭಾಷೆಯ ಬಗ್ಗೆ ಹೇಳುವುದಾದರೆ ಕ್ರಿ.ಶ. 450ರ ಹಲ್ಮಿಡಿ ಶಾಸನದಲ್ಲಿ ಕನ್ನಡ ಬಳಕೆ ದಾಖಲೆಯಾಗಿ ಸಿಕ್ಕಿರುತ್ತದೆ. 6ನೇ ಶತಮಾನದ ಉತ್ತರಾರ್ಧದಲ್ಲಿ ಪಟ್ಟಕ್ಕೆ ಬಂದ ಚಾಲುಕ್ಯ ಚಕ್ರವರ್ತಿ ಮಂಗಲೇಶನ ಕಾಲದಿಂದ ಹಿಡಿದು ಮುಖ್ಯವಾಗಿ ಶಿಲಾಶಾಸನಗಳಲ್ಲಿ ಕನ್ನಡವು ಹೆಚ್ಚು ಹೆಚ್ಚಾಗಿ ಬಳಕೆಗೆ ಬಂದದ್ದು ತಿಳಿದು ಬರುತ್ತದೆ. ಹೀಗೆ ನೋಡಿದಾಗ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ ಎಂದರೂ ‘ಕರ್ನಾಟಕ’ವೆಂಬ ನಾಮಧೇಯವು ಐದಾರು ಸಾವಿರ ವರ್ಷಗಳ ಪುರಾತನವಾದದೆಂಬುದು ಗೊತ್ತಾಗುತ್ತದೆ.

ಕರ್ನಾಟಕ ಏಕೀಕರಣ:- ಹಾಗಾದರೆ 1956 ಪೂರ್ವದಲ್ಲಿ ನಡೆದ ಕರ್ನಾಟಕ ಏಕೀಕರಣದ ಚಳುವಳಿ ಹಾಗೂ 1973 ರಲ್ಲಿ ನಾಮಕರಣ ಪ್ರಕ್ರಿಯೆ ಇವಕ್ಕೆಲ್ಲ ಮಹತ್ವವೇನು ಎಂದು ಹೇಳುವುದಾದರೆ, ಕುತಂತ್ರಿ ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತ ಉಳಿಸಿಕೊಳ್ಳಲಿಕ್ಕಾಗಿ ರಾಜ್ಯಗಳ ಆಯಾಭಾಷಿಕರು ಒಂದಾಗಲು ಸಾಧ್ಯವಾಗದಂತೆ ವಿಭಜನೆ ಮಾಡಿ ಅನ್ಯ ಭಾಷೆಗಳ ಪ್ರದೇಶಗಳೊಳಗೆ ಸೇರಿಸಿ ಪ್ರಾಂತ್ಯ ರಚನೆ ಮಾಡಿದ್ದರು. ಹೀಗಾಗಿ 1947 ರಲ್ಲಿ ಸ್ವಾತಂತ್ರ್ಯ ಬಂದರೂ ಹತ್ತಾರು ಪ್ರಾಂತ್ಯಗಳು ನೂರಾರು ಸಂಸ್ಥಾನಗಳು ಗಣರಾಜ್ಯ ಸ್ಥಾಪನೆಗೆ ಅಡ್ಡಿಯಾಗಿದ್ದವು, ಹೀಗಾಗಿ ಭಾಷಾವಾರು ಪ್ರಾಂತ್ಯ ರಚನೆ ಮತ್ತು ಸಂಸ್ಥಾನಗಳ ವಿಸರ್ಜನೆ ಅನಿವಾರ್ಯವೆನಿಸಿ ಇದರ ಸಾಧ್ಯಾಸಾಧ್ಯತೆ,ಯುಕ್ತಾ ಯುಕ್ತತೆಗಳನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸಲಾಯಿತು.

Karnataka Rajyotsava ಕರ್ನಾಟಕದ ಸ್ಥಿತಿ:- ಕರ್ನಾಟಕ ಅಂದರೆ ಆಗಿನ ಮೈಸೂರು ರಾಜ್ಯದ ಕನ್ನಡ ಭಾಷಿಕರ ಬಹಳಷ್ಟು ಪ್ರದೇಶಗಳು ಅನ್ಯ ಭಾಷೆಯ ಪ್ರಾಂತ್ಯಗಳಲ್ಲಿ ಸೇರಿದ್ದು ಮದ್ರಾಸ್, ಮುಂಬೈ ಹಾಗೂ ಹೈದರಾಬಾದ್ ಪ್ರಾಂತ್ಯಗಳಲ್ಲಿ ಸೇರಿ ಹೋಗಿತ್ತು. ಇದರಲ್ಲಿ ಮತ್ತೆ ಮೈಸೂರು, ಕೊಡಗು, ಕೊಲ್ಲಾಪುರ, ಸಾಂಗ್ಲಿ, ಹಿರೇಮಿರ್ಜಿ, ಕಿರೇ ಮಿರ್ಜಿ, ಕುರಂದ್ವಾಡ, ಜಮಖಂಡಿ ಮುಧೋಳ್, ರಾಮದುರ್ಗ, ಅಕ್ಕಲಕೋಟೆ, ಸವಣೂರು, ಸೊಂಡೂರು ಮೊದಲಾದ ಸಂಸ್ಥಾನಗಳಾಗಿ ಭಾಗ ಭಾಗವಾಗಿತ್ತು.

ಕನ್ನಡ ಭಾಷಾ ಪ್ರದೇಶಗಳ ಏಕೀಕರಣ ಚಳುವಳಿಯ ಮೂಲ ಚಿಂತನೆ 1905ರಲ್ಲೇ ಸ್ವದೇಶಿ ಚಳುವಳಿ ಪ್ರಾರಂಭವಾದಾಗ ಅದರಲ್ಲಿ ಕರ್ನಾಟಕಕ್ಕೂ ವಿಶೇಷ ಪ್ರಾತಿನಿಧ್ಯ ದೊರೆಯಬೇಕೆಂಬುವ ಮೂಲಕ ಹೋರಾಟ ಆರಂಭವಾಯಿತು ಎನ್ನಬಹುದು. ಕರ್ನಾಟಕ ಏಕೀಕರಣಕ್ಕೆ ಪೂರಕವಾಗಿ ಧಾರವಾಡದಲ್ಲಿ 20-07-1890ರಂದು ‘ಕರ್ನಾಟಕ ವಿದ್ಯಾವರ್ಧಕ ಸಂಘ’ವು ಮುಂಬೈ ಉಚ್ಛ ನ್ಯಾಯಾಲಯದ ವಕೀಲರಾಗಿದ್ದ ಕಾಯ್ಕಿಣಿ ಶಾಮರಾಯರ ಅಧ್ಯಕ್ಷತೆ, ವೆಂಕಟರಂಗೋ ಕಟ್ಟಿಯವರ ಉಪಾಧ್ಯಕ್ಷತೆ, ನಾಮ್ದಾರ್ ರಾವ್ ಗುರುಸಿದ್ದಪ್ಪ ಗಿಲಗಂಚಿ, ರಾವ್ ಸಾಹೇಬ್ ಶ್ರೀನಿವಾಸರಾವ್ ರೊದ್ದ, ರಾವ್ ಸಾಹೇಬ್ ರಾಮ್ರಾವ್ ದೇಸಾಯಿ, ಶಾಂತವೀರಪ್ಪ ಮೆಣಸಿನ ಕಾಯಿ, ಶೇಷಗಿರಿ ರಾವ್ ಕೊಪ್ಪೇಕರ್, ಗುರಾಚಾರ್ ಮುರಬ್, ದೋಂಡೋ ನರಸಿಂಹ ಮುಳಬಾಗಿಲು ಮೊದಲಾದವರೆಲ್ಲ ವ್ಯವಸ್ಥಾಪಕರೆಂದೂ, ರಾವ್ ಸಾಹೇಬ್ ರಾಮಚಂದ್ರ ಹನುಮಂತ ದೇಶಪಾಂಡೆ ಅವರು ಗೌರವ ಕಾರ್ಯದರ್ಶಿಗಳೆಂದು ಆಯ್ಕೆಗೊಂಡರು ಇದರಿಂದಾಗಿ ಕನ್ನಡದ ನೆಲದಲ್ಲಿ ಭಾಷೆ ಸಂಸ್ಕೃತಿ ಇತಿಹಾಸ ಇವುಗಳನ್ನು ಕುರಿತು ಪ್ರಚೋದನಾತ್ಮಕವಾದ ಸಾರ್ವಜನಿಕ ಚಟುವಟಿಕೆಗಳು ಪ್ರಾರಂಭವಾದವು.

ಇದು ಮುಂದೆ ‘ಕನ್ನಡ ಸಾಹಿತ್ಯ ಪರಿಷತ್ತು’ ಸ್ಥಾಪನೆಗೂ ಪರೋಕ್ಷವಾಗಿ ಕಾರಣವಾಯಿತು. 1907ರಲ್ಲಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಕರ್ನಾಟಕವು ಒಂದಾಗದೆ ಕರ್ನಾಟಕಸ್ತರ ಏಳಿಗೆಯೂ ಸಾಧ್ಯವಾಗದು ಎಂಬ ಧೀರೋಧಾತ್ತವಾದ ವಿಚಾರವನ್ನು ಲೇಖನ ರೂಪದಲ್ಲಿ ಪ್ರಕಟಿಸಿದರು. ಅವರ ಈ ಲೇಖನವೇ ಮುಂದೆ ಕರ್ನಾಟಕ ಏಕೀಕರಣದ ಬೀಜಮಂತ್ರವಾಗಿ ಪರಿಣಮಿಸಿತು. ಹುಯಿಲಗೋಳ ನಾರಾಯಣರಾವ್ ಮುಂತಾದವರ ಸ್ಫೂರ್ತಿದಾಯಕ ಹಾಡುಗಳೂ ಮೊಳಗಿದವು. ಸ್ವಾತಂತ್ರ್ಯಾನಂತರವೂ ಇದು ಮುಂದುವರೆದು 1948ರಲ್ಲಿ ‘ಧಾರ್ ಸಮಿತಿ’ ರಚನೆಗೊಂಡು 1951 ರಲ್ಲಿ ಬೆಂಗಳೂರು ನಗರದಲ್ಲಿ ‘ಪ್ರಾಂತ ರಚನೆ’ಗಾಗಿ ಸಮ್ಮೇಳನವನ್ನು ಕರೆಯಲಾಯಿತು. 1953 ರಲ್ಲಿ ‘ಕೇಳ್ಕರ್ ಸಮಿತಿ’ ಹಾಗೂ ‘ವಾಂಛೂ ಸಮಿತಿ’ಯ ವರದಿಗಳು ಪ್ರಕಟಗೊಂಡವು. 1954 ರಲ್ಲಿ ರಾಜ್ಯ ಪುನರ್ ರಚನಾ ಆಯೋಗ ನಾಡಿನ ತುಂಬೆಲ್ಲ ಸಂಚಾರವನ್ನು ಆರಂಭಿಸಿತು.

1955 ರಲ್ಲಿ ‘ಶೇಷಾದ್ರಿ ಸಮಿತಿ’ ತನ್ನ ವರದಿಯನ್ನು ಒಪ್ಪಿಸಿತು. -ದಾವಣಗೆರೆಯ ಪಾತ್ರ:- ಹೀಗೆ ಕರ್ನಾಟಕ ಏಕೀಕರಣದ ಕಾವು ಕನ್ನಡ ನೆಲದಲ್ಲಿ ಏರುತ್ತಿದ್ದಂತೆ ಭೌಗೋಳಿಕವಾಗಿ ಮಧ್ಯಭಾಗವಾದ ದಾವಣಗೆರೆಯಲ್ಲೂ ಏಕೀಕರಣದ ಚಳುವಳಿ ಬಿರುಸಾಯಿತು. ಇದಕ್ಕೂ ಪೂರ್ವದಲ್ಲಿ 1922ರಲ್ಲಿ ಶ್ರೀ ಎಂ ವೆಂಕಟ ಕೃಷ್ಣಯ್ಯ ನವರ ಘನ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ನಡೆದ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ವು ಕರ್ನಾಟಕ ಏಕೀಕರಣಕ್ಕೆ ಮತ್ತಷ್ಟು ಕಾವು ಪುಷ್ಟಿ ಕೊಟ್ಟಿತ್ತು. 1956 ರಲ್ಲಿ ದಾವಣಗೆರೆಯಲ್ಲಿ ನಡೆದ ‘ಕರ್ನಾಟಕ ಏಕೀಕರಣ ಮಹಾ ಸಮ್ಮೇಳನ’ವು ಐತಿಹಾಸಿಕ ದಾಖಲೆಯನ್ನು ಹೊಂದಿದ್ದಷ್ಟೇ ಅಲ್ಲ, ಕರ್ನಾಟಕ ಏಕೀಕರಣದ ಕಾವನ್ನು ಮತ್ತಷ್ಟು ಏರಿಸಿತು. ಕರ್ನಾಟಕ ಪ್ರಾಂತ್ಯ ರಚನೆಯ ಅಗತ್ಯವನ್ನು ಎಸ್ ನಿಜಲಿಂಗಪ್ಪನವರು ಆಗಿನ ಪ್ರಧಾನಿಗಳ ಗಮನಕ್ಕೆ ತಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಮುಂದಾಳತ್ವದಲ್ಲಿ ಆಗಿನ ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯ ನವರ ಧೀರೋಧಾತ್ತ ನಿಲುವಿನಿಂದಾಗಿ ಕನ್ನಡ ನೆಲವೆಲ್ಲ ಒಂದಾಗಿ ‘ವಿಶಾಲ ಮೈಸೂರು ರಾಜ್ಯ’ದ ಘೋಷಣೆ 1956ರ ನವೆಂಬರ್ ಒಂದರಂದು ನೆರವೇರಿತು. ಇದೇ ‘ಕರ್ನಾಟಕ ರಾಜ್ಯೋತ್ಸವ’. ಈ ರಾಜ್ಯಕ್ಕೆ ‘ಕರ್ನಾಟಕ’ ಎಂಬ ಹೆಸರಿಡಬೇಕೆಂದು ಕೇಂದ್ರ ಪರಿಶೀಲನಾ ಸಮಿತಿಯ ಸದಸ್ಯರಾದ ಕಮಲ ಕುಮಾರ ಬಸು ಮತ್ತು ಜಿ.ವಿ.ಕೆ ವಲ್ಲಭರಾವ್ ಬಹು ಹಿಂದೆಯೇ ತಮ್ಮ ಮತವನ್ನು ಸೂಚಿಸಿದ್ದರೂ ಅನುಷ್ಠಾನವಾಗಿರಲಿಲ್ಲ. ತತ್ಸಂಬಂಧೀ ಪುನರ್ ವಿಮರ್ಷಿತ ವಿಧೇಯಕವು 01-08 -1956 ರಂದು ಸುಧೀರ್ಘ ಚರ್ಚೆಯೊಂದಿಗೆ ಪಾರ್ಲಿಮೆಂಟಿನಲ್ಲಿ ಸ್ವೀಕರಿಸಲ್ಪಟ್ಟಿತು.

ರಾಜ್ಯಸಭೆಯು 25-08-1956 ರಂದು ಈ ವಿಧೇಯತಕ್ಕೆ ತನ್ನ ಒಪ್ಪಿಗೆಯನ್ನು ಸಹಾ ಕೊಟ್ಟಿತ್ತಾದರೂ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ವೆಂಬ ನಾಮಕರಣವಾಗಿದ್ದು 1973ರ ನವೆಂಬರ್ ಒಂದರಂದು ಶ್ರೀಯುತ ದೇವರಾಜ ಅರಸುರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ. ಇದಾಗಿ ಪ್ರಸ್ತುತ 50 ವರ್ಷಗಳು ಹೀಗಾಗಿಯೇ ಕನ್ನಡ ನೆಲ ಏಕೀಕರಣಗೊಂಡು ಯ’ವಿಶಾಲ ಮೈಸೂರು ರಾಜ್ಯ’ವಾದ ‘ಕರ್ನಾಟಕ ರಾಜ್ಯೋತ್ಸವ’ಕ್ಕೆ 68 ವರ್ಷಗಳಾದರೆ ಈ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿದ್ದಕ್ಕೆ ಪ್ರಸ್ತುತ 50 ವರ್ಷಗಳ ಸುವರ್ಣ ಮಹೋತ್ಸವ. -ಗೋಕಾಕ್ ಚಳುವಳಿ:- ಕನ್ನಡ ಭಾಷಾ ಪರವಾಗಿ ನಮ್ಮ ರಾಜ್ಯದಲ್ಲಿ ನಡೆದ ಮತ್ತೊಂದು ದೊಡ್ಡ ಚಳುವಳಿ ಎಂದರೆ ‘ಗೋಕಾಕ್ ಚಳುವಳಿ’. ಮಾತೃಭಾಷೆಗೆ ಅಗ್ರಸ್ಥಾನ ನೀಡಬೇಕೆಂಬ ಗೋಕಾಕ್ ವರದಿಯ ಜಾರಿಯಲ್ಲಿ ಆಗಿನ ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ವಿರೋಧಿಸಿ ವರದಿ ಜಾರಿಗಾಗಿ ಆಗ್ರಹಿಸಿ ಕನ್ನಡದ ಸಾಹಿತ್ಯ ಸಾಂಸ್ಕೃತಿಕ ಲೋಕದ ದಿಗ್ಗಜರು ನಡೆಸಿದ ಬೃಹತ್ ಚಳುವಳಿಯೇ ಗೋಕಾಕ್ ಚಳುವಳಿ.

1890 ರಲ್ಲಿ ಸ್ಥಾಪನೆಗೊಂಡು ಕರ್ನಾಟಕ ಏಕೀಕರಣಕ್ಕೆ ಹೆಚ್ಚು ಇಂಬು ಕೊಟ್ಟಿದ್ದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲೇ ‘ಕೇಂದ್ರ ಕನ್ನಡ ಕ್ರಿಯಾ ಸಮಿತಿ’ ಕ್ರಿಯಾಶೀಲವಾಗಿ ಚಳುವಳಿಗೆ ಹೆಚ್ಚಿನ ಚಾಲನೆ ಕೊಟ್ಟಿತು. ನಾನು ಆಗ ‘ಗೋಕಾಕ್ ವರದಿ ಜಾರಿಯಲ್ಲಿ ಸರ್ಕಾರದ ವಿಳಂಬ ನೀತಿ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವ್ಯಂಗ್ಯ ಚಿತ್ರಗಳನ್ನು ರಚಿಸಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಆಶ್ರಯದಲ್ಲಿ ವಿಶೇಷ ಪ್ರದರ್ಶನವನ್ನು ಸಹಾ ನೀಡಿದೆ. ಡಾ. ಪಾಟೀಲ್ ಪುಟ್ಟಪ್ಪ ಹಾಗೂ ಡಾ. ಚನ್ನವೀರ ಕಣವಿ ನನ್ನ ಈ ಕನ್ನಡಪರ ಪ್ರದರ್ಶನವನ್ನು ಉದ್ಘಾಟಿಸುವಾಗ ಡಾ. ಚಂದ್ರಶೇಖರ ಪಾಟೀಲ,ಡಾ.ಎಂ.ಎಂ.ಕಲ್ಬುರ್ಗಿ,ದೇವೇಂದ್ರ ಕುಮಾರ ಹಕಾರಿ. ಗುಂಜಟ್ಟಿ, ಬ್ಯಾಹಟ್ಟಿ ಮುಂತಾದವರೂ ಇದ್ದರು. ವರನಟ ರಾಜಕುಮಾರ್ ಮುಂತಾದವರೂ ವೀಕ್ಷಿಸಿದರು. ನನ್ನ ಈ ವ್ಯಂಗ್ಯ ಚಿತ್ರ ಪ್ರದರ್ಶನವು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಕನ್ನಡಪರ ಹೋರಾಟಕ್ಕೆ ಪ್ರೇ ಪ್ರೇರೇಪಿಸುತ್ತಿದೆ ಎಂಬ ವಿಷಯವನ್ನು ತಿಳಿದು ಮೈಸೂರಿನಿಂದ ಡಾ.ಹಾ.ಮ. ನಾಯಕರು ನನ್ನನ್ನು ಅಭಿನಂದಿಸಿ ಪತ್ರ ಬರೆದರು. ಆದರೆ ಸರ್ಕಾರ ನನ್ನನ್ನು ಬಂಧಿಸಬಹುದು ಎಂಬ ವಿಷಯ ತಿಳಿದು ಚಂದ್ರಶೇಖರ ಪಾಟೀಲ್ ಹಾಗೂ ಕಲಬುರ್ಗಿಯವರು ಕೆಲಕಾಲ ಭೂಗತವಾಗುವಂತೆ ನನಗೆ ಸೂಚಿಸಿದರು.

ದಾವಣಗೆರೆಯಲ್ಲೂ ಈ ಗೋಕಾಕ್ ಚಳುವಳಿ ತುಂಬಾ ತೀವ್ರತೆಯನ್ನು ಪಡೆಯಿತು. ಕನ್ನಡಪರ ಹೋರಾಟಗಾರರಾದ ಬಂಕಾಪುರ ಚನ್ನಬಸಪ್ಪ, ಐರಣಿ ಬಸವರಾಜ, ಟಿ ಶಿವಕುಮಾರ್, ನಾಗೇಂದ್ರ ಬಂಡಿಕರ್, ಕೆ ಜಿ ಶಿವಕುಮಾರ್ ಮುಂತಾಗಿ ಅನೇಕರು ಸಕ್ರಿಯವಾಗಿ ಭಾಗಿಗಳಾದರು. ಜನತಾವಾಣಿ ದಿನಪತ್ರಿಕಾ ಕಾರ್ಯಾಲಯದಲ್ಲಿ ಚಳುವಳಿ ಕುರಿತಾದ ಕಾರ್ಯಯೋಜನೆಗಳು ರೂಪುಗೊಳ್ಳುತ್ತಿದ್ದವು. ಸಂಪಾದಕರಾಗಿದ್ದ ಕೀರ್ತಿ ಶೇಷ ಹೆಚ್ ಏನ್ ಷಡಾಕ್ಷರಪ್ಪನವರು ಮಾರ್ಗದರ್ಶಿಸುತ್ತಿದ್ದರು. ಜಿ ವಿ ಅಯ್ಯರ್, ಡಾ ರಾಜ್ ಕುಮಾರ್, ಶ್ರೀನಾಥ್, ವಿಷ್ಣುವರ್ಧನ್, ಲೋಕೇಶ್, ಅಶೋಕ್ ಮುಂತಾಗಿ ಚಿತ್ರರಂಗದ ಗಣ್ಯರುಗಳು, ಜಿ ಕೆ ಸತ್ಯ ಮುಂತಾದ ಕಲಾವಿದರುಗಳು ಹಾಗೂ ಸಾಹಿತಿಗಳು ಸಹಾ ಚಳುವಳಿಗೆ ಧುಮುಕಿದರು. ಕೊನೆಗೂ ಕರ್ನಾಟಕ ಸರ್ಕಾರವು 1982ರ ಜುಲೈ 2 ರಂದು ಆಜ್ಞೆಯೊಂದನ್ನು ಹೊರಡಿಸಿ ಗೋಕಾಕ್ ಭಾಷಾ ಸೂತ್ರವನ್ನು ಅಲ್ಪಸ್ವಲ್ಪ ಬದಲಾವಣೆಗಳ ಜೊತೆಗೆ ಜಾರಿಗೆ ತಂದಿತು.

ಇದರಿಂದಾಗಿ ಕರ್ನಾಟಕದಲ್ಲಿ ಯಾವುದೇ ವಿದ್ಯಾರ್ಥಿಯು 125 ಅಂಕಗಳ ಏಕೈಕ ಪ್ರಥಮ ಭಾಷೆಯಾಗಿ ಕನ್ನಡ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ ನಿಯಮ ಆಯಿತು. ಕರ್ನಾಟಕ ಏಕೀಕರಣದ ಕುರಿತಾಗಿ ಗೋಕಾಕ್ ಚಳುವಳಿ ಕುರಿತಾಗಿ ಬರೆಯುತ್ತಾ ಹೋದರೆ ಗ್ರಂಥದಷ್ಟಿದೆ. ಇದನ್ನು ಒಂದು ಲೇಖನವಾಗಿ ಸೀಮಿತಗೊಳಿಸುವಲ್ಲಿ ಅನೇಕ ಹೆಸರುಗಳು ಪ್ರಸ್ತಾಪವಾಗದೆ ಇರಬಹುದು, ಇದಕ್ಕಾಗಿ ಯಾರೂ ದಯಮಾಡಿ ಅನ್ಯಥಾ ಭಾವಿಸಬಾರದು. ಚಳುವಳಿಗಳಲ್ಲಿ ಭಾಗವಹಿಸಿದ್ದ ಎಲ್ಲರೂ ಸ್ಮರಣೀಯರು ಹಾಗೂ ಅಭಿನಂದನಾರ್ಹರು.

-ವಿಶೇಷ ಲೇಖನ: ಎಚ್.ಬಿ.ಮಂಜುನಾಥ,ಹಿರಿಯ ಪತ್ರಕರ್ತ, ದಾವಣಗೆರೆ.ಮೊ:9448873693.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...